ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 01 : ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಂಸದ ಹಾಗೂ ಸಮಾಜವಾದಿ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ ಅಖಿಲೇಶ್ ಯಾದವ್ರವರ ಹುಟ್ಟುಹಬ್ಬವನ್ನು ಒನಕೆ ಓಬವ್ವ ವೃತ್ತದಲ್ಲಿ ಬುಧವಾರ ಪಟಾಕಿ ಸಿಡಿಸಿ ಕೇಕ್ ಕತ್ತರಿಸುವ ಮೂಲಕ ಸಮಾಜವಾದಿ ಪಾರ್ಟಿಯಿಂದ ಆಚರಿಸಲಾಯಿತು.
ಸಮಾಜವಾದಿ ಪಾರ್ಟಿ ರಾಜ್ಯಾಧ್ಯಕ್ಷ ಎನ್.ಮಂಜಪ್ಪ ಮಾತನಾಡಿ ಅಖಿಲೇಶ್ಯಾದವ್ರವರ ಹುಟ್ಟುಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. 2029 ರಲ್ಲಿ ನಡೆಯುವ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿ 300 ಕ್ಕೂ ಹೆಚ್ಚು ಸೀಟುಗಳನ್ನು ಪಡೆಯಲಿದ್ದು, ಅಖಿಲೇಶ್ಯಾದವ್ರವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲಿದ್ದಾರೆ. ಭಗವಂತ ಅವರಿಗೆ ಅಂತಹ ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಮಾತನಾಡುತ್ತ ಇಂಡಿಯಾ ಒಕ್ಕುಟದ ಭವಿಷ್ಯದಲ್ಲಿ ಅಖಿಲೇಶ್ಯಾದವ್ ಮುಂದೆ ದೊಡ್ಡ ಶಕ್ತಿಯಾಗಿ ಬೆಳೆಯಲಿ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮುಲಾಯಂಸಿಂಗ್ ಯಾದವ್ರವರ ಪುತ್ರ ಅಖಿಲೇಶ್ಯಾದವ್ ರಾಹುಲ್ಗಾಂಧಿ, ತೇಜಸ್ವಿಯಾದವ್, ಉದ್ಬವ್ಠಾಕ್ರೆ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರ ಜೊತೆ ಉತ್ತಮ ಒಡನಾಟವಿಟ್ಟುಕೊಂಡಿದ್ದು, ರಾಜಕೀಯದಲ್ಲಿ ಉತ್ತುಂಗಕ್ಕೇರಲಿ ಎಂದು ಶುಭ ಕೋರಿದರು.
ನ್ಯಾಯವಾದಿ ಸಿ.ಶಿವು ಯಾದವ್ ಮಾತನಾಡಿ ಅಖಿಲೇಶ್ ಯಾದವ್ ಮತ್ತು ರಾಹುಲ್ಗಾಂಧಿ ಇವರುಗಳು ನಮ್ಮ ದೇಶದ ರಾಜಕೀಯದಲ್ಲಿ ದೃವತಾರೆಗಳಿದ್ದಂತೆ. ದೇವರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಕೋಮುವಾದಿಯನ್ನು ಕಿತ್ತೊಗೆದು ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.
ಲೇಖಕ ಹೆಚ್.ಆನಂದಕುಮಾರ್ ಮಾತನಾಡುತ್ತ ರಾಹುಲ್ಗಾಂಧಿ ಜೊತೆ ನಿಂತು ಬಿಜೆಪಿ.ಯ ಟೀಕೆಗಳಿಗೆ ಪ್ರತ್ಯುತ್ತರ ನೀಡುತ್ತಿರುವ ಅಖಿಲೇಶ್ಯಾದವ್ ರಾಮ ಮಂದಿರದ ಹಣ ಲೂಟಿ ಹೊಡೆದವರಿಗೆ ಛೀಮಾರಿ ಹಾಕಿದ್ದಾರೆ. ಕರ್ನಾಟಕದಲ್ಲಿ ಓದಿದ ಇವರು ಉತ್ತರಪ್ರದೇಶ ಚುನಾವಣೆಯಲ್ಲಿ 43 ಸೀಟುಗಳನ್ನು ಪಡೆದಿದ್ದಾರೆಂದರೆ ಸಾಮಾನ್ಯವಲ್ಲ. ಅಡ್ವಾಣಿರವರು ರಥಯಾತ್ರೆ ನಡೆಸಿದ ಸಂದರ್ಭದಲ್ಲಿ ಲಾಲುಪ್ರಸಾದ್ಯಾದವ್ ಹಾಗೂ ಮುಲಾಯಂಸಿಂಗ್ ಯಾದವ್ ಇವರುಗಳು ಧೈರ್ಯದಿಂದ ತಡೆದರು. 2029 ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ಅಖಿಲೇಶ್ಯಾದವ್ರವರು ಜಯಭೇರಿ ಬಾರಿಸಲಿದ್ದಾರೆಂದು ಭವಿಷ್ಯ ನುಡಿದರು.
ಸಮಾಜವಾದಿ ಪಾರ್ಟಿಯ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್ ಎಸ್. ಮಾತನಾಡುತ್ತ ದೇಶದಲ್ಲಿ ಅಧಿಕಾರ ನಡೆಸುತ್ತಿರುವ ಕೋಮುವಾದಿ ಬಿಜೆಪಿ.ಯವರು ಹಿಂದುತ್ವ ರಾಮನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದರೆ. ಅಖಿಲೇಶ್ ಯಾದವ್ ಬಂಧುತ್ವದ ಜೊತೆ ಸಾಗುತ್ತಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಗುಣ ಇವರದು. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು, ಶೋಷಿತರ ಪರವಾಗಿ ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬರುತ್ತಿರುವ ಇವರು ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದರಲ್ಲಿ ಅನುಮಾನವಿಲ್ಲ ಎಂದರು.

ಸಮಾಜವಾದಿ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ.ಗುರುಮೂರ್ತಿ, ಎಸ್ಸಿ ಘಟಕದ ಅಧ್ಯಕ್ಷ ಟಿ.ರವಿ, ಎಸ್ಟಿ. ಘಟಕದ ಅಧ್ಯಕ್ಷ ಡಾ.ಶಿವಣ್ಣ, ಅಲ್ಪಸಂಖ್ಯಾತ ಘಟಕದ ಮೆಹಬೂಬ್ಭಾಷ, ಶಿವಣ್ಣ ಹೊಳಲ್ಕೆರೆ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಹೇಮಣ್ಣ, ಓಬಣ್ಣ, ಪಿಡಿಎ. ಘಟಕದ ಅಧ್ಯಕ್ಷ ಗೋವಿಂದರಾಜು ಸೇರಿದಂತೆ ಅಪಾರ ಅಭಿಮಾನಿಗಳು ಜನ್ಮದಿನಾಚರಣೆಯಲ್ಲಿ ಭಾಗವಹಿಸಿದ್ದರು.























