ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 28 : ಚಿತ್ರದುರ್ಗ ಜಿಲ್ಲೆಯಲ್ಲಿನ ಕಾಡುಗೊಲ್ಲರಿಗೆ ನಿಗಮ ಮಂಡಳಿ ಸ್ಥಾನ ನೀಡದೆ ಸರ್ಕಾರ ಜಿಲ್ಲೆಯ ಜನಸಂಖ್ಯೆಯನ್ನು ಕಡೆಗಣಿಸಿದೆ ಎಂದು ಮಾಜಿ ಕೆಪಿಸಿಸಿ ಕಾರ್ಯದರ್ಶಿ ಸಿಜಿ. ಪಾತಯ್ಯ ನಂದಿಹಳ್ಳಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿರುವ ಅವರು ಇತ್ತೀಚೆಗಷ್ಟೇ 39 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಲಾಗಿದೆ. ಅದರಲ್ಲೂ ಕಾಡುಗೊಲ್ಲ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಹಾರೋಗೆರೆ ಮಹೇಶ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಆದರೆ ಬಹುಸಂಖ್ಯಾತರಾಗಿರುವ ಜಿಲ್ಲೆಯ ಕಾಡುಗೊಲ್ಲರಿಗೆ ಮತ್ತೊಂದು ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಬಹುದಿತ್ತು, ನೌಕರಿಯಿಂದ ನಿವೃತ್ತಿ ಹೊಂದಿ ಪಕ್ಷಕ್ಕೆ ಬಂದಿರುವರನ್ನು ಗುರುತಿಸಿದಂತೆ, ಪಕ್ಷಕ್ಕಾಗಿ ಅನೇಕ ನಾಯಕರು ದುಡಿದಿದವರನ್ನು ಗುರುತಿಸಬೇಕು. ಸರ್ಕಾರ ಕೇವಲ ಸಮುದಾಯವನ್ನು ಮತಬ್ಯಾಂಕ್ ಗಷ್ಟೇ ಬಳಸಿಕೊಳ್ಳುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಕಾಡುಗೊಲ್ಲರು ಕಾರಣಕರ್ತರು ಎಂಬುದನ್ನು ಮರೆಯಬಾರದು. ಸಣ್ಣ ಜನಾಂಗವನ್ನು ಕೈ ಬಲಪಡಿಸಲು ಜಿಲ್ಲೆಯ ಸಚಿವರು ಹಾಗೂ ಶಾಸಕರ ಇಚ್ಛಾಶಕ್ತಿ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.
ಬುಡಕಟ್ಟು ಕಾಡುಗೊಲ್ಲರ ಬದುಕು ಹೀನಾಯ ಸ್ಥಿತಿಯಲ್ಲಿದೆ. ಕುರಿ ಮೇಕೆ ಸಾಕಾಣಿಕೆಯೊಂದಿಗೆ ಅಲೆಮಾರಿಗಳಾಗಿ ಬದುಕುತ್ತಿರುವ ಈ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮುಂದೆ ಬರಬೇಕಿದೆ. ಹಿಂದುಳಿದ ಸಮುದಾಯಗಳ ಅಭಿವೃದ್ಧಿ ರಾಜಕೀಯವೇ ಅಸ್ತಿತ್ವ. ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ಹುದ್ದೆಗಳು ಅನ್ಯಾರ ಪಾಲಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಇನ್ನೇನಾದರೂ ಉಳಿದ ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ಹುದ್ದೆಗಳನ್ನು ಜಿಲ್ಲೆಯ ಕಾಡುಗೊಲ್ಲರಿಗೆ ನೀಡಬೇಕು ಇಲ್ಲವಾದರೆ ಮುಂಬರುವ ಜಿಪಂ, ತಾಪಂ, ಹಾಗೂ ಸ್ಥಳೀಯ ನಗರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲಿ ಕಾಡುಗೊಲ್ಲರು ತಕ್ಕ ಪಾಠ ಕಲಿಸಿದ್ದಾರೆ ಎಂದು ಸರ್ಕಾರವನ್ನು ಸಿಜೆ. ಪಾತಯ್ಯ ಎಚ್ಚರಿಸಿದರು.


