ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 21 : ತಾಲ್ಲೂಕಿನ ಹರಿಯಬ್ಬೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಕಾರ್ಯಕ್ರಮವು ಸಂಘದ ಆವರಣದಲ್ಲಿ ಭಾನುವಾರ ನಡೆಯಿತು.
ಶಿಮುಲ್ ನಿರ್ದೇಶಕ ಬಿಸಿ. ಸಂಜೀವಮೂರ್ತಿ ಮಾತನಾಡಿ ನಾವು ಆಡಳಿತಕ್ಕೆ ಬಂದ ಮೇಲೆ ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಒಕ್ಕೂಟದಲ್ಲಿ ಲಾಭಾಂಶವಿದ್ದಾಗ ಮಾತ್ರ ಹಾಲು ಉತ್ಪಾದಕರಿಗೆ ಆತ್ಮಶಕ್ತಿ ಮತ್ತು ಆತ್ಮ ಸ್ಥೈರ್ಯ ಬರುತ್ತದೆ. ಗುಣಮಟ್ಟದ ಹಾಲು ಖರೀದಿ ಮಾಡುವ ಮೂಲಕ ಎಲ್ಲೆಲ್ಲಿ ಸೋರಿ ಹೋಗುತ್ತಿತ್ತು ಅದನ್ನು ತಡೆಯುವ ಮೂಲಕ 2025 ಮಾರ್ಚ್ ನಷ್ಟವೆಲ್ಲ ಕಳೆದು ಸುಮಾರು 11 ಕೋಟಿ 41 ಲಕ್ಷ ರೂಪಾಯಿ ಒಕ್ಕೂಟ ಲಾಭಾಂಶದಲ್ಲಿದೆ. ಈ ಲಾಭಾಂಶವನ್ನು ಸಂಘಗಳಿಗೆ ಹಾಲಿನ ಪ್ರಮಾಣ ಹಾಗೂ ಗುಣಮಟ್ಟದ ಮೇಲೆ ಬೋನಸ್ ಹಣವನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಶಿಮುಲ್ ನಿರ್ದೇಶಕ ಹೊಸದುರ್ಗದ ಬಿಆರ್. ರವಿಕುಮಾರ್ ಮಾತನಾಡಿ ಈ ಹಿಂದೆ ಓರಿಯೆಂಟಲ್ ಇನ್ಸೂರೆನ್ಸ್ ಕಂಪನಿ ಜೊತೆ ಶಿಮುಲ್ ಒಪ್ಪಂದವಿತ್ತು. ಈ ಕಂಪನಿಯವರು ರೈತರ ಹಸುಗಳಿಗೆ ಇನ್ಸೂರೆನ್ಸ್ ಮಾಡಿ 15 ದಿನಗೊಳಗಾಗಿ ಹಸುಗಳು ಮೃತಪಟ್ಟರೆ ವಿಮೆ ಹಣ ಪಾವತಿಸುತ್ತಿರಲಿಲ್ಲ. ಇದರಿಂದ ರೈತರಿಗೆ ಅನೇಕ ಸಮಸ್ಯೆ ಹಾಗೂ ನಷ್ಟ ಉಂಟಾಗುವುದನ್ನು ಗಮಿನಿಸಿದ ಶಿಮುಲ್ ಆಡಳಿತ ಮಂಡಳಿಯು ಅಗ್ರಿ ಇನ್ಸೂರೆನ್ಸ್ ಎಂಬ ಹೊಸ ವಿಮೆ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಸದರಿ ಇನ್ಸೂರೆನ್ಸ್ ಕಂಪನಿಯು ಹೊಸ ಹಸುಗಳಿಗೆ ವಿಮೆ ಮಾಡಿಸಿದ ದಿನದಿಂದಲೇ ಹಸುಗಳು ಮೃತಪಟ್ಟರೆ ವಿಮೆ ಹಣ ಪಾವತಿಸಲು ಸಿದ್ಧವಿರುತ್ತದೆ. ಒಕ್ಕೂಟದ ವತಿಯಿಂದ ಪಶುವೈದ್ಯಾಧಿಕಾರಿ ನೇಮಕ ಮಾಡಿದ್ದು ಉತ್ತಮ ಗುಣಮಟ್ಟದ ಚಿಕಿತ್ಸೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಂಡ ನಂತರ ನೀರಾವರಿ ಸೌಲಭ್ಯ ಹೆಚ್ಚಾಗಲಿದೆ. ಇದರಿಂದ ಹೈನುಗಾರಿಕೆ ಹೆಚ್ಚಿಸಲು ಚಿತ್ರದುರ್ಗ ಮತ್ತು ದಾವಣಗೆರೆ ಎರಡು ಜಿಲ್ಲೆಗಳು ಸೇರಿ ಪ್ರತ್ಯೇಕ ಹಾಲು ಒಕ್ಕೂಟ ಮಾಡಲು ಈಗಾಗಲೇ ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಮುಂದಿನ ಎರಡ್ಮೂರು ವರ್ಷಗಳಲ್ಲಿ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಶಿಮುಲ್ ನಿರ್ದೇಶಕರಾದ ಜಿ ಪಿ. ರೇವಣಸಿದ್ದಪ್ಪ ಹೇಳಿದರು.
ಇದೆ ವೇಳೆ ಬ್ಯಾಡರಹಳ್ಳಿ ಇಬ್ಬರು, ಹರಿಯಬ್ಬೆ ಮತ್ತು ತವಂದಿಯ ಓರ್ವ ರೈತರ ಫಲಾನುಭವಿಗಳಿಗೆ ಮೃತಪಟ್ಟ ಹಸುಗಳಿಗೆ ಒಕ್ಕೂಟದಿಂದ ಪರಿಹಾರ ಚೆಕ್ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಡಿಜೆ. ಹನುಮಂತರಾಯ ವಹಿಸಿದ್ದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಜ್ಯೋತಿ, ಹೆಚ್.ಸಿ. ಬಸವರಾಜ್, ಹೆಚ್.ಸಿ. ಹನುಮಂತರಾಯ, ಜಿಬಿ. ತಿಪ್ಪೇಸ್ವಾಮಿ, ಎಂಹೆಚ್. ಕರಿಯಣ್ಣ, ಸುರೇಶ್, ಜೆಆರ್. ಪಾಟೇಲ್, ಈರಣ್ಣ, ಜನಾರ್ಧನ್, ವಿಸ್ತರಣಾಧಿಕಾರಿಗಳಾದ ಕೃಷ್ಣಕುಮಾರ್, ಜಿ. ರವಿಚಂದ್ರ, ಪಶುವೈದ್ಯಾಧಿಕಾರಿ ದೀರಾಜ್ ಪ್ರಕಾಶ್ ಜಿ, ಪವನ್, ಗ್ರಾಪಂ ಮಾಜಿ ಅಧ್ಯಕ್ಷ ಶಶಿಕಲಾ, ಶ್ರೀನಿವಾಸ್, ಜಯರಾಮಪ್ಪ, ಕಾರ್ಯದರ್ಶಿ ತಿಪ್ಪೇಸ್ವಾಮಿ, ಕರಿಯಣ್ಣ, ಬಿಜೆ. ಗೌಡ, ಹನುಮಂತರಾಯ ಸೇರಿದಂತೆ ಮತ್ತಿತರರು ಇದ್ದರು.


