ಬೆಂಗಳೂರು: ವಾಯುಭಾರ ಕುಸಿತದ ಪರಿಣಾಮ ಕರ್ನಾಟಕಕ್ಕೂ ಜೋರು ಮಳೆಯಾಗಲಿದೆ. ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು, ಚಿತ್ರದುರ್ಗದ ಹಲವೆಡೆ ಗುಡಿಗು ಸಹಿತ ಮಳೆಯಾಗಲಿದೆ. ಹೀಗಾಗಿ ಹವಮಾನ ಇಲಾಖೆ ವರದಿ ನೀಡಿದ್ದು, ಮುಂದಿನ ಐದು ದಿನಗಳ ಕಾಲ ಎಚ್ಚರವಾಗಿರಬೇಕೆಂದು ಸೂಚನೆ ನೀಡಿದೆ.
ಬಳ್ಳಾರಿ, ವಿಜಯನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಾಮರಾಜನಗರ, ಮಂಡ್ಯ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಮೇಲೆ ಸರಾಸರಿ ಸಮುದ್ರ ಮಟ್ಟಕ್ಕಿಂತ 5.8 ಕಿ ಮೀಟರ್ ಎತ್ತರದಲ್ಲಿ ಮೇಲ್ಮುಖ ವಾಯು ಚಂಡಮಾರುತದ ಪ್ರಸರಣ ಕಡಿಮೆಯಾಗಿದೆ. ಮಧ್ಯಪ್ರದೇಶದ ಮಧ್ಯ ಭಾಗಗಳಿಂದ ಪಶ್ಚಿಮ – ಮಧ್ಯ ಮತ್ತು ಪಕ್ಕದ ನೈರುತ್ಯ ಬಂಗಾಳ ಕೊಲ್ಲಿಯವರೆಗೆ ಪೂರ್ವ ವಿದರ್ಭ, ತೆಲಂಗಾಣ ಮತ್ತು ದಕ್ಷಿಣ ಕರಾವಳಿ ಆಂಧ್ರ ಪ್ರದೇಶದಾದ್ಯಂತ ಸರಾಸರಿ ಸಮುದ್ರ ಮಟ್ಟಕ್ಕಿಂತ 0.9 ಕಿ.ಮೀಟರ್ ಎತ್ತರದಲ್ಲಿ ವಾಯು ಚಂಡ ಮಾರುತ ಕಡಿಮೆಯಾಗಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ವಿಜಯಪುರ, ಕೊಪ್ಪಳ, ಕಲಬುರಗಿ, ಬೀದರ್, ಯಾದಗಿರಿ, ರಾಯಚೂರಿ, ಬಾಗಲಕೋಟರ, ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳ ಕಾಲ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು, ಸಹಿತ ಜೋರು ಮಳೆಯಾಗಲಿದೆ. ಹೀಗಾಗಿ ಜನರಿಗೆ ಎಚ್ಚರದಿಂದ ಇರಲು ಸೂಚನೆ ನೀಡಲಾಗಿದೆ.


