ಬೆಂಗಳೂರು: ಹಳೆಯ ಜಾತಿ ಸಮೀಕ್ಷೆಯ ವಿಚಾರವನ್ನ ಕೆಲವು ಜಾತಿಯವರು ವಿರೋಧ ಮಾಡಿದ್ದರು. ಆದ ಕಾರಣ ಹೈಕಮಾಂಡ್ ಸೂಚನೆ ಮೇರೆಗೆ ಮತ್ತೆ ಜಾತಿ ಗಣತಿ ಸಮೀಕ್ಷೆಗೆ ದಿನಾಂಕವನ್ನು ರಾಜ್ಯ ಸರ್ಕಾರ ನಿಗದಿ ಮಾಡಿದೆ. ಇಂದು ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು, ಸೆಪ್ಟೆಂಬರ್ 11ರಿಂದ ಜಾತಿ ಸಮೀಕ್ಷೆ ನಡೆಯಲಿದೆ ಎಂದಿದ್ದಾರೆ. ಅದರ ಜೊತೆಗೆ ವೀರಶೈವ ಲಿಂಗಾಯತರ ಬಗ್ಗೆಯೂ ಮಾತನಾಡಿದ್ದಾರೆ.
ಈ ಬಾರಿಯ ಜಾತಿ ಸಮೀಕ್ಷೆ ನಡೆದರೆ ವೀರಶೈವ ಅಂತ ಪ್ರತ್ಯೇಕವಾಗಿ ಹೇಳುವುದು ಬೇಡ. ಎಲ್ಲರೂ ಒಂದೇ ಹೆಸರೇಳಿ ಅದು ಲಿಂಗಾಯತರು ಎಂಬುದಾಗಿ ಜಾತಿ ನಮೂದಿಸಿ ಎಂದು ತೀರ್ಮಾನ ಮಾಡಿದ್ದರು. ಧರ್ಮದ ಕಾಲಂನಲ್ಲಿ ವೀರಶೈವ, ಲಿಂಗಾಯತ ಅಂತ ಪ್ರತ್ಯೇಕವಾಗಿ ಬರೆಸ್ತಾರಲ್ಲ ಎಂಬುದನ್ನ ಕೇಳಿದಾಗ, ಅದು ಅವರಿಗೆ ಸೇರಿದ್ದು. ವೀರಶೈವ ಧರ್ಮ ಅಂತ ಆದ್ರೂ ಬರೆಸಿಕೊಳ್ಳಲಿ. ಅಥವಾ ವೀರಶೈವ ಲಿಂಗಾಯತ ಧರ್ಮ ಅಂತ ಆದ್ರೂ ಬರೆಸಿಕೊಳ್ಳಲಿ. ಇದು ಅವರ ನಿರ್ಧಾರ.
ಒಂದು ಹೇಳ್ತೀನಿ ಕೇಳಿ, ನಮಗೆ ಬೇಕಾಗಿರುವಂತದ್ದು ಬಹಳ ಮುಖ್ಯವಾಗಿ ಅವರ ಶೈಕ್ಷಣಿಕ, ಸಾಮಾಜಿಕ ಪರಿಸ್ಥಿತಿಗಳು ಗೊತ್ತಾಗಬೇಕು. ಏನು ಬರೆದುಕೊಳ್ಳುತ್ತಾರೆ ಎಂಬುದು ಅವರಿಗೆ ಬಿಟ್ಟಿದ್ದು. ಧರ್ಮ ತೀರ್ಮಾನ ಮಾಡುವುದಕ್ಕಲ್ಲ ಈ ಕಮಿಟಿ ಆಗಿರುವುದು. ಅವರ ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿ ಗೊತ್ತಾಗಬೇಕು. ಜಾತಿಗಣತಿ ಆಗ್ಬೇಕು. ಅವರು ಏನಾದ್ರು ಬರೆದುಕೊಳ್ಳಲಿ. ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ಮೊದಲು ಶಿಫಾರಸು ಮಾಡಲಿ ಆಮೇಲೆ ಸರ್ಕಾರ ತೀರ್ಮಾನ ಮಾಡಲಿ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಸೆಪ್ಟೆಂಬರ್ 22ರಿಂದ ಜಾತಿಗಣತಿ ಶುರುವಾಗಿ 15 ದಿನಗಳ ಕಾಲ ನಡೆಯಲಿದೆ.

