ಧರ್ಮಸ್ಥಳ ಕೇಸ್ : ಪದ್ಮಲತಾ ಅಸಹಜ ಸಾವು ಕೇಸ್ ಮರು ತನಿಖೆಗೆ ಒತ್ತಾಯ..!

1 Min Read

ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿದ್ದ ವ್ಯಕ್ತಿಯ ಹಿಂದೆ ಎಸ್ಐಟಿ ಇದ್ದು, ಆತ ತೋರಿಸಿದ ಕಡೆಯಲ್ಲೆಲ್ಲಾ ಅಗೆದು, ಏನಾದರೂ ಕುರುಹುಗಳು ಸಿಗಬಹುದಾ ಎಂಬುದನ್ನ ನೋಡ್ತಿದ್ದಾರೆ. ಇದರ ನಡುವೆ ಮತ್ತೊಂದು ಒತ್ತಾಯ ಕೇಳಿ ಬಂದಿದ್ದು, ಪದ್ಮಲತಾ ಅವರ ಅಸಹಜ ಸಾವಿನ ಮರು ತನಿಖೆಗೆ ಒತ್ತಾಯ ಕೇಳಿ ಬರ್ತಾ ಇದೆ.

ಬೆಳ್ತಂಗಡಿ ತಾಲೂಕಿನ ಬೋಳಿಯಾರು ನಿವಾಸಿಯಾಗಿದ್ದ ಪದ್ಮಲತಾ ಅವರು 1986 ರಲ್ಲಿ ಸಾವನ್ನಪ್ಪಿದ್ದರು.‌ ಇದೀಗ ಈ ಅಸಹಜ ಸಾವನ್ನು ಮರು ತನಿಖೆ ಮಾಡಬೇಕೆಂದು ದೂರು ಬಂದಿದೆ. ಪದ್ಮಲತಾ ಅವರ ಸಹೋದರಿ ಇಂದ್ರಾವತಿಯಿಂದ ಎಸ್ಐಟಿ ಗೆ ದೂರು ಸಲ್ಲಿಕೆಯಾಗಿದೆ‌. ಮರಣ ಮರು ತನಿಖೆಗೆ ಸಹೋದರಿ ಒತ್ತಾಯಿಸಿದ್ದಾರೆ.

ನಾಪತ್ತೆಯಾಗಿದ್ದ ಪದ್ಮಲತಾ 57 ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದರು. ನೇತ್ರಾವತಿ ನದಿಯಲ್ಲಿ ಶವವಾಗಿ ಸಿಕ್ಕಿದ್ದರು. ಕೊಳೆತ ಸ್ಥಿತಿಯಲ್ಲಿ ಪದ್ಮಲತಾ ಮೃತದೇಹ ಪತ್ತೆಯಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆಗೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಒಂದು ಕಡೆ ಎಸ್ಐಟಿ ಅಸ್ಥಿಪಂಜರದ ವಿಚಾರವನ್ನ ಭೇದಿಸುತ್ತಾ ಇರುವಾಗಲೇ ಹಳೆಯ ಕೇಸಿನ ತನಿಖೆ ನಡೆಸುವಂತೆ ಒತ್ತಡ ಕೇಳಿ ಬರ್ತಾ ಇದೆ.

ಈ ಬಗ್ಗೆ ಇಂದ್ರಾವತಿ ಮಾತನಾಡಿದ್ದು, ನನ್ನ ತಂಗಿ 1986 ಡಿಸೆಂಬರ್ 22ರಂದು ಉಜಿರೆ ಕಾಲೇಜಿಗೆ ಹೋದವಳು ವಾಪಾಸ್ಸು ಬಸ್ ಸ್ಟ್ಯಾಂಡಿಗೆ ಬಂದಿದ್ದಳು. ವಾಪಾಸ್ ಎಲ್ಲಿಗೆ ಹೋದಳು ಗೊತ್ತಿಲ್ಲ. ಆ ಸಮಯದಲ್ಲಿ ಹುಡುಕಾಡಿದಾಗ ಸಿಗಲಿಲ್ಲ. ಆಮೇಲೆ ಕೊಳೆತುಹೋಗಿದ್ದ ಶರೀರ ಸಿಕ್ಕಿತ್ತು. ಅವಳ ಕೈಕಾಲುಗಳನ್ನ ಕಟ್ಟಿ ಹಾಕಿದ್ದರು. ಎಸ್ಐಟಿ ಅಧಿಕಾರಿಗಳು ಸಿಕ್ಕಿಲ್ಲ. ಅವರು ಬಂದ ನಂತರ ಹೋಗಿ ಕೊಡುತ್ತೇವೆ. ಅವಳನ್ನು ಯಾರೋ ಕಿಡ್ನ್ಯಾಪ್ ಮಾಡಿ, ಕೊಲೆ ಮಾಡಿದ್ದಾರೆ ಎಂಬ ಅನುಮಾನ ನಮಗೆ ಇದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *