ಚಿತ್ರದುರ್ಗ; ಈಗಾಗಲೇ ಮದುವೆಯಾಗಿದ್ದರು ಮತ್ತೊಂದು ಮದುವೆಯಾಗುವುದಕ್ಕೆ ಹಾತೊರೆಯುವ ಕೆಲ ಗಂಡಸರನ್ನ ನೋಡಿದ್ದೇವೆ. ಅವರ ಮೊದಲ ಹೆಂಡತಿಯರು ಅಮಾಯಕಿಯರಾಗಿದ್ದರೆ ಕಥೆ ಮುಗೀತು. ಆದರೆ ಒನಕೆ ಓಬವ್ವನಾಗಿದ್ದರೆ ಆ ಗಂಡನ ಕಥೆ ಅಷ್ಟೇ. ಇಂತದ್ದೊಂದು ರಿಯಲ್ ಗಹಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ದೊಡ್ಡ ಹೈಡ್ರಾಮವೇ ನಡೆದಿದೆ. ಮೊದಲ ಹೆಂಡತಿ ಇದ್ದರು ಎರಡನೇ ಮದುವೆಯಾಗಲು ಹೋದ ಮಹಾನುಭಾವ ಕಾರ್ತಿಕ್ ಗೆ ಸರಿಯಾಗಿಯೇ ಬಿದ್ದಿದೆ. ಈ ಕಾರ್ತಿಕ್ ಮೂಲತಃ ಚಿಕ್ಕಮಗಳೂರಿನ ತಪ್ಪಘಟ್ಡದವರು. ಕಳೆದ 4 ವರ್ಷದ ಹಿಂದಷ್ಟೇ ದಾವಣಗೆರೆ ಜಿಲ್ಲೆಯ ಮುಶೇನಾಳದ ತನುಜಾ ಎಂಬಾಕೆಯನ್ನು ಮದುವೆಯಾಗಿದ್ದರು. ಆದರೆ ಈಗ ಕಾರ್ತಿಕ್ ಮತ್ತೊಂದು ಮದುವೆಯಾಗಲು ರೆಡಿಯಾಗಿದ್ದರು.
ಮಾಹಿತಿಗಳ ಪ್ರಕಾರ ಕಾರ್ತಿಕ್, ವರದಕ್ಷಿಣೆ ಆಸೆಯಿಂದ ಚಿತ್ರದುರ್ಗದಲ್ಲಿ ಎರಡನೇ ಮದುವೆಯಾಗಲು ಹೊರಟಿದ್ದರು ಎನ್ನಲಾಗಿದೆ. ಈ ಸುದ್ದಿ ಮೊದಲ ಹೆಂಡತಿಗೆ ಬೇಗನೇ ಗೊತ್ತಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಜೊತೆಗೆ ನೇರವಾಗಿ ಮಂಟಪಕ್ಕೆ ಬಂದು, ಹಣದ ಭೂತ ಮೆಟ್ಟಿಕೊಂಡಿದ್ದ ಕಾರ್ತಿಕ್ ಗೆ ಧರ್ಮದೇಟು ನೀಡಿದ್ದಾರೆ. ಈ ಘಟನೆಯ ಬಳಿಕ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗಳನ್ನ ಒಂದೊಳ್ಳೆ ಮನೆಗೆ ಕೊಡಬೇಕು ಎಂದುಕೊಂಡಿದ್ದ ಆ ಹೆಣ್ಣು ಹೆತ್ತವರ ಕುಟುಂಬ ಈಗ ಕಣ್ಣೀರಲ್ಲಿ ಕೈತೊಳೆಯುವಂತೆ ಆಗಿದೆ. ಇನ್ನೊಂದು ಕಡೆ ಮದುವೆಗೂ ಮುನ್ನವೇ ಅಳಿಯನಾಗುವವನ ಬಂಡವಾಳ ಬಟಾ ಬಯಲಾಯಿತಲ್ಲ ಎಂಬ ನೆಮ್ಮದಿಯೂ ಅವರಲ್ಲಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಈಗ ಎಲ್ಲವೂ ನೀರಲ್ಲಿ ಹೋಮ ಮಾಡಿದಂತಾಗಿದೆ. ಹೀಗಾಗಿ ಮದುವೆ ಮಾಡಲು ಹೊರಟ ತಂದೆ ತಾಯಂದಿರು ಸರಿಯಾಗಿ ವಿಚಾರಿಸಿದರೆ ಉತ್ತಮ.











