ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಹಿರಿಯ ನಟ ದೊಡ್ಡಣ್ಣ

1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜೂನ್. 07 : ಕಲಿಕೆಗೆ ವಯಸ್ಸಿಲ್ಲ. ಹುಮ್ಮಸ್ಸಿರಬೇಕು. ಯಾವುದಕ್ಕೂ ಆಸೆ ಪಡದೆ ಪರಿಶ್ರಮಪಟ್ಟಾಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದೆಂದು ಹಾಸ್ಯ ನಟ ದೊಡ್ಡಣ್ಣ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ-13 ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಕೆ.ಎಂ.ಎಸ್. ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ.ಕಾಂ. ವಿದ್ಯಾರ್ಥಿಗಳಿಗೆ ಶುಕ್ರವಾರ ಪದವಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ವಿದ್ಯೆಗಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ. ವಿದ್ಯಾರ್ಥಿ ಜೀವನ ಅಮೂಲ್ಯವಾದುದು. ವ್ಯರ್ಥ ಮಾಡಿಕೊಂಡರೆ ಮತ್ತೆ ಸಿಗುವುದಿಲ್ಲ. ಆಸ್ತಿಯನ್ನು ನಿಮ್ಮಿಂದ ಯಾರಾದರೂ ಕಸಿದುಕೊಳ್ಳಬಹುದು. ಅದೇ ವಿದ್ಯೆಯನ್ನು ಯಾರು ಕಬಳಿಸಲು ಆಗುವುದಿಲ್ಲ. ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದವರು ಐ.ಐ.ಟಿ.ಗೆ ಹೋಗಿ ಸಂಸ್ಥೆ ಮತ್ತು ಹೆತ್ತವರಿಗೆ ಕೀರ್ತಿ ತರಬೇಕು. ಜೀವನದಲ್ಲಿ ಶ್ರಮ ಛಲವಿಲ್ಲದಿದ್ದರೆ ಏನನ್ನು ಸಾಧಿಸಲು ಆಗುವುದಿಲ್ಲ. ಅಸಾಧ್ಯ ಎನ್ನುವುದು ಯಾವುದೂ ಇಲ್ಲ. ಸದಾ ಒಳ್ಳೆಯದನ್ನೇ

ಆಲೋಚಿಸಿ ಚಿತ್ರದುರ್ಗ ಬಿಸಿಲನಾಡು, ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಎಲ್ಲವನ್ನು ಮೆಟ್ಟಿನಿಂತು ಚಿನ್ಮುಲಾದ್ರಿ ಮಲೆನಾಡನ್ನಾಗಿ ಪರಿವರ್ತಿಸುವ ಶಕ್ತಿ ನಿಮ್ಮ ಕೈಯಲ್ಲಿದೆ ಎಂದು ಪ್ರದವಿ ಪ್ರಮಾಣ ಪತ್ರ ಪಡೆದ ವಿದ್ಯಾರ್ಥಿಗಳಿಗೆ ತಿಳಿಸಿದರು.

ನಾನು ಸಾಕಷ್ಟು ಬಡತನದಿಂದ ಮುಂದೆ ಬಂದವನು. ಯಾವ ಪುಣ್ಯದ ಫಲವೋ ಏನೋ ಗೊತ್ತಿಲ್ಲ. ಪದ್ಮಭೂಷಣ ಡಾ.ರಾಜ್‍ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್‍ನಾಗ್ ಇವರುಗಳ ಜೊತೆ ಕುಳಿತು ಮಾತನಾಡಿದ್ದೇನೆ. ಎಂದಿಗೂ ಅದನ್ನು ಮರೆಯಲು ಆಗುವುದಿಲ್ಲ. ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಪೋಷಿಸಿ ಪರಿಸರ ಸಂರಕ್ಷಣೆಗೆ ಕೈಜೋಡಿಸಿ ಎಂದು ವಿದ್ಯಾರ್ಥಿಗಳಲ್ಲಿ ಕೋರಿದರು.

ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ವೀರೇಶ್, ನಿರ್ದೇಶಕ ಚೇತನ್, ಪ್ರಾಂಶುಪಾಲರಾದ ಮಂಜುಳ, ಶ್ರೀಮತಿ ಚೇತನ್ ವೇದಿಕೆಯಲ್ಲಿದ್ದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks