ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 05 : ಕೆ.ಪಿ.ಎಸ್ಸಿ. ಮರು ಪರೀಕ್ಷೆ ನಡೆಸುವಂತೆ ಕರುನಾಡ ವಿಜಯಸೇನೆ ವತಿಯಿಂದ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಕಳೆದ ವಾರ ನಡೆದ ಕೆ.ಪಿ.ಎಸ್ಸಿ. ಪರೀಕ್ಷೆಯಲ್ಲಿ ಸುಮಾರು 30 ರಿಂದ 40 ಪರೀಕ್ಷಾರ್ಥಿಗಳಿಗೆ ಪ್ರವೇಶ ಪತ್ರ ಸಿಗದೆ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಸರ್ಕಾರ ರಾತ್ರೋ ರಾತ್ರಿ ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ನೀಡಿದ್ದರಿಂದ 400-500 ಕಿ.ಮೀ. ಗಡಿ ಭಾಗಗಳಿಂದ ಪರೀಕ್ಷಾ ಕೇಂದ್ರಗಳಿಗೆ ಬರಲು ಹೇಗೆ ಸಾಧ್ಯ? ಸರ್ಕಾರವೆ ಇಂತಹ ಲೋಪಗಳನ್ನು ಎಸಗಿದರೆ ಪರೀಕ್ಷಾರ್ಥಿಗಳ ಪಾಡೇನು. ಇಂತಹ ತಪ್ಪುಗಳನ್ನು ಪ್ರಶ್ನಿಸಿದರೆ ಪೊಲೀಸರ ಮುಖಾಂತರ ಕೇಸು ದಾಖಲಿಸುವ ಕೆಲಸ ಮಾಡುತ್ತಿರುವುದು ಯಾವ ನ್ಯಾಯ? 2023-24 ನೇ ಸಾಲಿಗೆ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್-ಎ ಮತ್ತು ಬಿ. ವೃಂದದ 384 ಹುದ್ದೆಗಳ ನೇಮಕಾತಿಗೆ ಶನಿವಾರ ಆರಂಭವಾದ ಮುಖ್ಯ ಪರೀಕ್ಷೆಯಲ್ಲಿಯೂ ಎಡವಟ್ಟುಗಳು ಮರುಕಳಿಸಿವೆ. ಕನ್ನಡ ವ್ಯಾಕರಣ ರಚನೆ ತಪ್ಪು ತಪ್ಪಾಗಿ ಬಳಸಲಾಗಿದೆ. ಕನ್ನಡ ಅರ್ಹತಾ ಪರೀಕ್ಷೆಯಲ್ಲಿ ಹತ್ತಾರು ಇಂಗ್ಲಿಷ್ ಪದಗಳಿವೆ. ಪೂರ್ವಭಾವಿ ಪರೀಕ್ಷೆಗೆ ಹೈಕೋರ್ಟ್ ಅನುಮತಿ ಕೊಟ್ಟ ಕಾರಣ ಶುಕ್ರವಾರ ಮಧ್ಯರಾತ್ರಿ ಪ್ರವೇಶ ಪತ್ರ ವಿತರಿಸಿದ್ದು, ಗಡಿ ಭಾಗದ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಸಿಗದಿದ್ದರಿಂದ ಮರು ಪರೀಕ್ಷೆ ನಡೆಸುವಂತೆ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಒತ್ತಾಯಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ನಗರಾಧ್ಯಕ್ಷ ಅವಿನಾಶ್, ವಿಜಯಬಾಬು, ಹರೀಶ್ಕುಮಾರ್ ಈ ಸಂದರ್ಭದಲ್ಲಿದ್ದರು.

