ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 16 : ಹಿರಿಯೂರಿನಲ್ಲಿರುವ ಗಾರ್ಮೆಂಟ್ಸ್ ಮಾಲೀಕರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿರುವ ಕೊಲೆ ಆರೋಪಿಯೊಬ್ಬ ಧಮ್ಕಿ ಹಾಕಿ, ಮೂರು ದಿನದಲ್ಲಿ ಕಟ್ಟಡ ಖಾಲಿ ಮಾಡಬೇಕು, ನಮ್ಮವರ ಸುಪರ್ದಿಗೆ ಕೊಡಬೇಕು. ಇಲ್ಲದಿದ್ರೆ ಜೀವ ಉಳಿಸಲ್ಲ ಎಂಬ ಬೆದರಿಕೆವೊಡ್ಡಿದ್ದಾನೆ.
ತುಮಕೂರಿನ ಮಾಜಿ ಮೇಯರ್ ಗಡ್ಡ ರವಿ ಕೊಲೆ ಪ್ರಕರಣದ ಆರೋಪಿ ಸುಜಯ್ ಭಾರ್ಗವ್ ಅಲಿಯಾಸ್ ಸುಜಿ ತಂಡದವರೆಂದು ಹೇಳಿಕೊಂಡು ಜನವರಿ 10ರಂದು ಗಾರ್ಮೆಂಟ್ಸ್ ಗೆ ಬಂದಿದ್ದ ಯುವಕರ ಗುಂಪು, ಉದ್ಯಮಿ ಅರ್ಜುನ್ ಸಿಂಗ್ಗೆ ಧಮ್ಕಿ ಹಾಕಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಹಿರಿಯೂರು ಪೊಲೀಸ್ ಠಾಣೆಯಲ್ಲಿ ಕಟ್ಟಡ ಮಾಲೀಕ ಸೂರ್ಯನಾರಾಯಣ ಪ್ರಕರಣ ದಾಖಲಿಸಿದ್ದಾರೆ. ದೂರು ದಾಖಲು ಬಳಿಕವೂ ನಿರಂತರ ಫೋನ್ ಕರೆ, ವಾಯ್ಸ್ ಮೆಸೇಜ್ ಮೂಲಕ ಕೊಲೆ ಆರೋಪಿ ಸುಜಯ್, ಕಟ್ಟಡ ಮಾಲೀಕ ಸೂರ್ಯನಾರಾಯಣ, ಪುತ್ರನಿಗೆ ಆವಾಜ್ ಹಾಕುತ್ತಿದ್ದಾನೆ.
ಸೂರ್ಯನಾರಾಯಣ ಸಹೋದರ ಚಂದ್ರಶೇಖರ್ ದಶಕಗಳ ಹಿಂದೆಯೇ ಆಸ್ತಿ ಪಾಲು ಮಾಡಿಕೊಂಡಿದ್ದಾರೆ. ಚಂದ್ರಶೇಖರ್ ಮಗ ಸುಜಯ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಅಲ್ಲಿಂದಲೇ ವಿವಿಧ ಮಾರ್ಗದಲ್ಲಿ ಬೆದರಿಕೆವೊಡ್ಡುತ್ತಿದ್ದಾನೆ ಎಂಬುದು ಸೂರ್ಯನಾರಾಯಣ್ ಆರೋಪ. ನಾನು ನಿನ್ನ ಮಗನಿದ್ದಂತೆ ನನಗೂ ಪಾಲು ಕೊಡು, ಇಲ್ಲದಿದ್ದರೆ ಕೊಲೆ ಮಾಡುತ್ತೇನೆ ಎಂದು
ಬೆದರಿಕೆವೊಡ್ಡುತ್ತಿದ್ದಾನೆ. ಜೊತೆಗೆ ಬಾಡಿಗೆ ಇರುವ ಉದ್ಯಮಿ ಅರ್ಜುನ್ ಸಿಂಗ್ಗೆ ಬೆದರಿಕೆವೊಡ್ಡಿ ಖಾಲಿ ಮಾಡಿಸಿ ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಹುನ್ನಾರ ನಡೆಸುತ್ತಿದ್ದಾನೆ. ಹಿರಿಯೂರು ಸರ್ಕಾರಿ ಆಸ್ಪತ್ರೆ ಬಳಿ ಆಯಕಟ್ಟಿನ ಜಾಗದಲ್ಲಿರುವ ಮಳಿಗೆ ಕೋಟ್ಯಂತರ ರೂ. ಮೌಲ್ಯದ್ದಾಗಿದೆ. ಈ ಆಸ್ತಿ ಮೇಲೆ ಕಣ್ಣಿಟ್ಟಿದ್ದು, ಆಸ್ತಿ ಕೊಡದಿದ್ದರೇ ಸುಟ್ಟು ಹಾಕುತ್ತೇನೆ ಎಂದು ಬೆದರಿಸುತ್ತಿದ್ದು, ನಮಗೆ ರಕ್ಷಣೆ
ಒದಗಿಸಬೇಕೆಂದು ಪೊಲೀಸರಿಗೆ ಸೂರ್ಯನಾರಾಯಣ ದೂರು ನೀಡಿದ್ದಾರೆ.


