ಸುದ್ದಿಒನ್, ಹಿರಿಯೂರು, ಏಪ್ರಿಲ್. 11 : ನಗರ ಪ್ರದೇಶ ಹಾಗೂ ತಾಲೂಕಿನ ವಿವಿಧ ಕಡೆಗಳಲ್ಲಿ ಗಾಳಿ, ಗುಡುಗು, ಮಿಂಚು ಸೇರಿದಂತೆ ಆಲಿಕಲ್ಲು ಸಹಿತ ಮಳೆ ಸುರಿದಿದೆ.
ಶುಕ್ರವಾರ ಬೆಳಗಿನಿಂದಲೂ ಬಿಸಿಲಿನ ಜಳ ಹೆಚ್ಚಾಗಿದ್ದು, ಮಧ್ಯಾಹ್ನ 3ಗಂಟೆ ಸುಮಾರಿಗೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಗುಡುಗು, ಮಿಂಚು, ಗಾಳಿ ಸಹಿತ ಆರಂಭವಾದ ಮಳೆ ನಗರ ಪ್ರದೇಶ, ಆದಿವಾಲ, ಕೆ.ಆರ್.ಹಳ್ಳಿ, ಜೆಜಿಹಳ್ಳಿ ಕರಿಯಾಲ, ಕಸವನಹಳ್ಳಿ, ಮಸ್ಕಲ್ , ಹೂವಿನಹೊಳೆ ಸೇರಿದಂತೆ ವಿವಿಧ ಕಡೆಗಳಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.
ತಾಲೂಕಿನ ಕರಿಯಾಲ ಗ್ರಾಮದ ಸುತ್ತ ಮುತ್ತ ಗಾಳಿ ಮಳೆಯ ಅಬ್ಬರಕ್ಕೆ ಅಡಿಕೆ, ತೆಂಗಿನ ಗಿಡಗಳು, ಮನೆಯ ಮೇಲ್ಚಾವಣಿ ಸೇರಿದಂತೆ ರಸ್ತೆ ಪಕ್ಕದ ಕೆಲವು ಬೃಹತ್ ಮರಗಳು ಧರೆಗುರುಳಿದಿವೆ. ರಸ್ತೆಯಲ್ಲಿ ನೀರು ಹರಿದಿದ್ದು, ಅಲ್ಲಲ್ಲಿ ಗುಂಡಿಗಳಲ್ಲಿ ನೀರು ನಿಂತಿದೆ.ಇದರಿಂದ ತಾಲೂಕಿನಲ್ಲಿ ತಂಪಾದ ವಾತಾವರಣ ಸೃಷ್ಟಿಯಾಗಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮಳೆ ಬಂದರೆ ರೈತರ ಕೃಷಿ ಚುಟುವಟಿಕೆಯ ಬೇಸಾಯ ಆರಂಭವಾಗಲಿದೆ.
ಎಲ್ಲೆಲ್ಲಿ ಹಾನಿ :
ಜೆ ಜಿ ಹಳ್ಳಿ ಹೋಬಳಿ ಜೆ ಜಿ ಹಳ್ಳಿ ವೃತ್ತ ವ್ಯಾಪ್ತಿಯ ಮೂಡಲಹಟ್ಟಿ ಗ್ರಾಮದಲ್ಲಿ ಐದು ಶೀಟಿನ ಮನೆಗಳು ಬಿದ್ದಿರುತ್ತದೆ ಮತ್ತು ಸ್ಕೂಲ್ ಕಟ್ಟಡದ ಮೇಲೆ ಮರಗಳು ಬಿದ್ದಿರುತ್ತವೆ. ಮರಡಿ ಹಟ್ಟಿ ಗ್ರಾಮದಲ್ಲಿ ಒಂದು ಶೀಟ್ ಮನೆ 4 ಕರೆಂಟ್ ಕಂಬ ಬಿದ್ದಿರುತ್ತವೆ. ಓದೋ ಮಾರಪ್ಪ ತೋಟದಲ್ಲಿ ನಾಲ್ಕು ತೆಂಗಿನ ಮರಗಳು ಗಾಳಪ್ಪ ರವರ ಜಮೀನಿನಲ್ಲಿ ಒಂದು ಕರೆಂಟ್ ಕಂಬ ಬಿದ್ದಿರುತ್ತದೆ. ಮೂಡ್ಲಟ್ಟಿ ಗ್ರಾಮದಲ್ಲಿ ರೈತರರ ಜಮೀನುಗಳಲ್ಲಿ ಸುಮಾರು 750 ಅಡಿಕೆ ಸಸಿ ಮರಗಳು ಹಾನಿಯಾಗಿರುತ್ತದೆ. ಹಾಗೂ
ಬಿ ಕೆ ಹಟ್ಟಿ ಗ್ರಾಮದಲ್ಲಿ ಮರ ಬಿದ್ದು ಹೋರೀಕರ ಮೃತಪಟ್ಟಿರುತ್ತದೆ

ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಮೂಡಲಹಟ್ಟಿ ಸುತ್ತ ಮುತ್ತ ಶುಕ್ರವಾರ ಮಧ್ಯಾಹ್ನ ಸುರಿದ ಮಳೆಗೆ ಗ್ರಾಮದ ಮಾರನಣ್ಣನಿಗೆ ಸೇರಿದ ನೂರಾರು ಅಡಿಕೆ ಗಿಡಗಳು ಮಳೆಗೆ ಧರೆಗುರುಳಿದ ರೈತನ ತೋಟಕ್ಕೆ ಬಿಜೆಪಿ ತಾಲೂಕು ಅಧ್ಯಕ್ಷ ಕೆ. ಅಭಿನಂದನ್ ಭೇಟಿ ನೀಡಿ ಪರಿಶೀಲನೆ ನಡೆಸಿ, ರೈತನಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಬಸವರಾಜ್, ವೀರೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹಿರಿಯೂರು ತಾಲೂಕಿನ ಜೆಜಿ ಹಳ್ಳಿ ಮತ್ತು ಕರಿಯಾಲ ಭಾಗದ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಬಿರುಗಾಳಿಯ ಮಳೆ ಅಬ್ಬರಕ್ಕೆ ರೈತರ ಅಡಿಕೆ, ತೆಂಗು, ಬಾಳೆ ಹಾಗೂ ಹಾನಿಯಾದ ಮನೆಗಳ ಸ್ಥಳಕ್ಕೆ ತಹಶೀಲ್ದಾರ್ ಸಿ ರಾಜೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಎಂಎಲ್ಸಿ ಆಪ್ತ ಸಹಾಯಕ ನಿರಂಜನ್ ಮೂರ್ತಿ ಸೇರಿದಂತೆ ಸ್ಥಳೀಯ ಮುಖಂಡರು ಇದ್ದರು.
