ಚಿತ್ರದುರ್ಗ; ನಗರ ಠಾಣೆ ಪಿಎಸ್ಐ ಗಾದಿಲಿಂಗಪ್ಪ ಮೇಲೆ ತುಮಕೂರು ಜಿಲ್ಲೆಯ ಮಧುಗಿರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಗೌಡ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ನಗರದ ತುರುವನೂರು ರಸ್ತೆಯಲ್ಲಿ ಈ ಘಟನೆ ನಡೆದಿದೆ. ತುರವನೂರು ರಸ್ತೆಯ ಖಾಸಗಿ ಹೊಟೇಲ್ ಬಳಿ ನಡೆದಿದೆ.
ತುರುವನೂರು ರಸ್ತೆಯ ಖಾಸಗಿ ಹೊಟೇಲ್ ಬಳಿ ತಡರಾತ್ರಿ ರಸ್ತೆ ಮೇಲೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಗೌಡ ಗುಂಪಾಗಿ ನಿಂತಿದ್ದರು. ಇದನ್ನು ನೋಡಿದ ಪಿಎಸ್ಐ ಗಾದಿಲಿಂಗಪ್ಪ ಪ್ರಶ್ನೆ ಮಾಡಿದರು. ಈ ಹಿನ್ನೆಲೆಯಲ್ಲಿ ಗಾದಿಲಿಂಗಪ್ಪ ಅವರ ಮೇಲೆ ಹನುಮಂತೇಗೌಡ ಅವರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಈ ವೇಳೆ ಹನುಮಂತೇಗೌಡ ಅವರು ಪೊಲೀಸರ ಮೇಲೆಯೇ ಆರೋಪ ಹೊರಿಸಿದ್ದಾರೆ.
ಪೊಲೀಸರಿಂದಾನೇ ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಎದೆ ನೋವು ಅಂತ ಒದ್ದಾಡಿದ್ದಾರೆ. ಪೊಲೀಸರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿತ್ರದುರ್ಗ ನಗರ ಠಾಣಾ ವ್ಯಾಪ್ತಿಯಲ್ಲಿ ಇ ಘಟನೆ ನಡೆದಿದೆ. ಇನ್ನು ಈ ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, ರಾತ್ರಿ 11.30 ರ ಸಮಯವಾಗಿತ್ತು. ಖಾಸಗಿ ಹೊಟೇಲ್ ನಲ್ಲಿ ಊಟ ಮಾಡಿ ಹೊರಡಲು ರೆಡಿಯಾಗಿದ್ದರು.. ಅಷ್ಟೊತ್ತಿಗೆ ಅಲ್ಲಿಗೆ ಬಂದ ಪಿಎಸ್ಐ ಗಾದಿಲಿಂಗಪ್ಪ ಅವರು ರಾತ್ರಿ ಇಷ್ಟೊತ್ತಾದರೂ ಯಾಕೆ ನಿಂತಿದ್ದೀರಾ ಎಂದು ಪ್ರಶ್ನೆ ಮಾಡಿದರು. ಈಗ ಹೊರಡುತ್ತಾ ಇದ್ದೇವೆ ಎಂದು ಹೇಳಿದರೂ ಗಾದಿಲಿಂಗಪ್ಪ ಅವರು ಅವಾಚ್ಯ ಶಬ್ದಗಳಿಂದ ವಾಗ್ದಾಳಿ ನಡೆಸಿದರು. ಮಾತಿಗೆ ಮಾತು ಬೆಳೆದು ಜಗಳವಾಗಿದೆ ಎಂದಿದ್ದಾರೆ.















