ಆದಿಚುಂಚನಗಿರಿ ಮಠ ರಾಷ್ಟ್ರ ಹಾಗೂ ರಾಜ್ಯಕ್ಕೆ ನಾಯಕರನ್ನು ರೂಪಿಸುವ ಮಠವೇ ಹೊರತು, ನೇರ ರಾಜಕಾರಣ ಮಾಡುವ ಸಂಸ್ಥೆಯಲ್ಲ ಎಂದು ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀ ಸ್ಪಷ್ಟಪಡಿಸಿದ್ದಾರೆ. ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ಬಸವಪ್ಪನ ಪುಣ್ಯಕ್ಷೇತ್ರದಲ್ಲಿ ನಡೆದ ಜೋಗಿಗಳ ಸಮಾವೇಶ ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮ್ಮದು ಶುದ್ಧ ಆಧ್ಯಾತ್ಮಿಕ ಮಠ. ರಾಜಕಾರಣದ ಸೊಕ್ಕು ಕೂಡ ಇಲ್ಲ” ಎಂದು ಹೇಳಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಉದಾಹರಣೆ ನೀಡಿದ ಸ್ವಾಮೀಜಿ, “ಯೋಗಿ ಆದಿತ್ಯನಾಥ್ ಅವರು ಸಿಎಂ ಆಗುವ ಮೊದಲು ಅವರ ಕುಟುಂಬ ರಾಜಕಾರಣದಲ್ಲಿ ಇತ್ತು. ಆದರೆ ಆದಿಚುಂಚನಗಿರಿ ಮಠ ಯಾವತ್ತಾದರೂ ರಾಜಕೀಯ ಪ್ರವೇಶ ಮಾಡಿದ್ದನ್ನು ನೋಡಿದ್ದೀರಾ?” ಎಂದು ಪ್ರಶ್ನಿಸಿದರು.

“ನಾಥ ಪರಂಪರೆಯ ಯೋಗಿ ಆದಿತ್ಯನಾಥ್ ಸಿಎಂ ಆದ ನಂತರ, ಇಲ್ಲಿ ಚುಂಚನಗಿರಿ ಶ್ರೀಗಳೂ ಸಿಎಂ ಆಗಬೇಕು ಎಂಬ ಚರ್ಚೆ ಆರಂಭವಾಗಿತ್ತು. ಆದರೆ ನಮ್ಮ ಪೀಠ ಧಾರ್ಮಿಕ ಪರಂಪರೆಯ ಮಾರ್ಗದಲ್ಲೇ ಸಾಗಿದ್ದು, ಮುಂದೆಯೂ ಅದೇ ಹಾದಿಯಲ್ಲಿ ಸಾಗಲಿದೆ” ಎಂದು ಅವರು ಸ್ಪಷ್ಟಪಡಿಸಿದರು.















