ಸುದ್ದಿಒನ್, ಚಿತ್ರದುರ್ಗ, ಮೇ. 19 : ಪ್ರಕೃತಿಯಿಂದ ಸಿಗುವ ನೀರನ್ನು ವ್ಯರ್ಥ ಮಾಡದೆ, ಅದನ್ನು ಸೂಕ್ತ ತಂತ್ರಜ್ಞಾನದ ಮೂಲಕ ಭೂಮಿಗೆ ಇಂಗಿಸಿ, ಕೊರತೆ ನೀಗಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಖ್ಯಾತ ನಟ ಹಾಗೂ ರಾಜ್ಯ ಸಭಾ ಸದಸ್ಯರು ಆದ ಜಗ್ಗೇಶ್ ಅವರು ರೈತ ಬಾಂಧವರಲ್ಲಿ ಮನವಿ ಮಾಡಿದ್ದಾರೆ.
ತಮ್ಮ ತೋಟದಲ್ಲಿ ಬೋರ್ವೆಲ್ ಮರುಪೂರಣ (Borewell Recharge) ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮಾಡಿಸಿದ ಬಳಿಕ ಅವರು ಮಾತನಾಡುತ್ತಾ, ದೇವರಾಜ ರೆಡ್ಡಿಯವರು ವಿದ್ಯೆಗೆ ತಕ್ಕಂತ ಕೆಲಸವನ್ನು ಬಯಸದೆ ಈ ರೀತಿಯ ಕೆಲಸವನ್ನು ದೇವದೂತರಂತೆ ಮಾಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು.

ಪ್ರತಿಯೊಬ್ಬ ರೈತನಿಗೂ ನೀರು ಅತ್ಯಂತ ಮುಖ್ಯವಾದ ಹಾಗೂ ದೇವರ ಕೊಡುಗೆಯಾದ ಜೀವನಾಡಿಯಾಗಿದೆ. ಆದರೆ ಅದನ್ನು ಹೇಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಮತ್ತು ಸಂರಕ್ಷಿಸಬೇಕು ಎಂಬುದು ನಮ್ಮಲ್ಲಿ ಹಲವರಿಗೆ ಇನ್ನೂ ತಿಳಿದಿಲ್ಲ ಎಂದರು.
ನನ್ನ ತೋಟದಲ್ಲಿ ಒಟ್ಟು ಎರಡು ಬೋರ್ವೆಲ್ಗಳಿವೆ. ಅದರಲ್ಲಿ ಒಂದು ಬೋರ್ವೆಲ್ ಅನ್ನು ಸುಮಾರು 35 ವರ್ಷಗಳ ಹಿಂದೆ ನಮ್ಮ ತಾಯಿಯವರು ಹಾಕಿಸಿದ್ದರು. ಮತ್ತೊಂದನ್ನು ನಾಲ್ಕು ವರ್ಷಗಳ ಹಿಂದೆ ಹಾಕಿಸಲಾಗಿತ್ತು. ನೀರಿನ ಲಭ್ಯತೆ ಮತ್ತು ಸಂರಕ್ಷಣೆ ಬಗ್ಗೆ ನಾನು ಯೋಚಿಸುತ್ತಿದ್ದಾಗ, ಜಲ ಸಂರಕ್ಷಕ ಡಾ. ದೇವರಾಜ್ ರೆಡ್ಡಿ ಅವರ ವಿಡಿಯೋಗಳು ನನ್ನ ಗಮನ ಸೆಳೆದವು. ಅವರ ವಿಡಿಯೋಗಳನ್ನು ಪದೇ ಪದೇ ನೋಡಿ ಸ್ಫೂರ್ತಿ ಪಡೆದ ನಾನು, ನಮ್ಮ ತೋಟದಲ್ಲೂ ನೀರನ್ನು ಏಕೆ ಉಳಿಸಬಾರದು ಎಂದು ನಿರ್ಧರಿಸಿ ಅವರಿಗೆ ವಿನಂತಿಸಿದೆ ಎಂದು ಜಗ್ಗೇಶ್ ತಿಳಿಸಿದರು.
ನಟ ಜಗ್ಗೇಶ್ ಅವರ ವಿನಂತಿಗೆ ಸ್ಪಂದಿಸಿದ ಜಲತಜ್ಞ ದೇವರಾಜ್ ರೆಡ್ಡಿ ಅವರು ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ತೋಟಕ್ಕೆ ಭೇಟಿ ನೀಡಿ, ಎರಡೂ ಬೋರ್ವೆಲ್ಗಳನ್ನು ಮರುಪೂರಣ ಮಾಡುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿಕೊಟ್ಟಿದ್ದಾರೆ. ಬೋರ್ವೆಲ್ ಜೊತೆಗೆ ತೋಟದಲ್ಲಿ ಒಂದು ತೆರೆದ ಬಾವಿಯನ್ನು (Open Well) ಹೊಂದುವುದು ಕೂಡ ಉತ್ತಮ ಎಂಬ ಸಲಹೆಯನ್ನು ನೀಡಿದ್ದು, ಅದರಂತೆ ಮುಂದಿನ ದಿನಗಳಲ್ಲಿ ಬಾವಿ ನಿರ್ಮಿಸುವ ಯೋಜನೆಯೂ ಇದೆ ಎಂದಿದ್ದಾರೆ.
ಉತ್ತರ ಕರ್ನಾಟಕದಂತಹ ತೀವ್ರ ಬಿಸಿಲಿರುವ ಮತ್ತು ನೀರಿನ ಅಭಾವವಿರುವ ಪ್ರದೇಶಗಳಿಗೂ ಕೂಡ ದೇವರಾಜ್ ರೆಡ್ಡಿ ಅವರು ಸೂಕ್ತವಾದ ತಂತ್ರಜ್ಞಾನಗಳನ್ನು ರೂಪಿಸಿದ್ದಾರೆ. ಹಾಗೆಯೇ ನೀರಿನ ಪ್ರಮಾಣ ಚೆನ್ನಾಗಿರುವ ಕಡೆ ಅದನ್ನು ಹೇಗೆ ಭೂಮಿಗೆ ಇಂಗಿಸಬೇಕು ಎಂಬುದಕ್ಕೂ ಅವರ ಬಳಿ ತಂತ್ರಗಳಿವೆ. ಒಟ್ಟಾರೆಯಾಗಿ ಹೇಳುವುದಾದರೆ, ಮಳೆ ನೀರನ್ನು ಹೇಗೆ ಹಿಡಿದಿಟ್ಟುಕೊಳ್ಳಬೇಕು ಎಂಬ ಅದ್ಭುತ ಕೌಶಲ್ಯವನ್ನು ಅವರು ಸಮಾಜ ಸೇವೆ ರೂಪದಲ್ಲಿ ನಾಡಿಗೆ ತಲುಪಿಸುತ್ತಿದ್ದಾರೆ ಎಂದರು.
ದೇವರಾಜ್ ರೆಡ್ಡಿ (ಸಂಪರ್ಕ ಸಂಖ್ಯೆ 94481 25498 ) ಅವರ ವಿಡಿಯೋಗಳನ್ನು ನೋಡಿ ಅವರ ಮೊಬೈಲ್ ಸಂಖ್ಯೆ ಮತ್ತು
ವಿಳಾಸವನ್ನು ಪ್ರತಿಯೊಬ್ಬರೂ ಪಡೆದುಕೊಂಡು, ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ನಾಡಿನ ಎಲ್ಲಾ ರೈತರು ಈ ತಂತ್ರಜ್ಞಾನದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಜಗ್ಗೇಶ್ ಅವರು ಕರೆ ನೀಡಿದ್ದಾರೆ.
ಸುದ್ದಿಒನ್ ವಿಶೇಷ ಅಭಿಯಾನ ; ನೀರು ಉಳಿಸಿ, ನೆಲದ ಋಣ ತೀರಿಸಿ :
ನೀರು ಪ್ರಕೃತಿ ನಮಗೆ ಕೊಟ್ಟ ಉಚಿತ ಕೊಡುಗೆಯಾಗಿರಬಹುದು, ಆದರೆ ಅದನ್ನು ನಮ್ಮ ನಾಳೆಗಳಿಗಾಗಿ ಮತ್ತು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮ ಜವಾಬ್ದಾರಿ. ನೀರು ವ್ಯರ್ಥ ಮಾಡುವುದನ್ನು ನಿಲ್ಲಿಸೋಣ, ಜಲಸಂರಕ್ಷಣೆಗೆ ಕೈಜೋಡಿಸೋಣ. ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು 9036974702 WhatsApp ಮೆಸೇಜ್ ಮೂಲಕ ತಿಳಿಸಿ

















