ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 05 : ವಿಜ್ಞಾನ ಯುಗದಲ್ಲಿ ಮೂಢನಂಬಿಕೆ ಬೇಡ. ಶ್ರವಣ ದೋಷವಿದ್ದರೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಂಡು ಸರಿಪಡಿಸಿಕೊಳ್ಳಿ ಎಂದು ನಾಗರೀಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರು ಹಾಗೂ ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್ವುಲ್ಲಾ ಮನವಿ ಮಾಡಿದರು.

ನಾಗರೀಕ ಹಿತರಕ್ಷಣಾ ವೇದಿಕೆ, ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ ಜಿಲ್ಲಾ ಜೆಡಿಎಸ್. ಕಚೇರಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ಕಿವಿ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಂಚೇದ್ರಿಯಗಳಲ್ಲಿ ಮನುಷ್ಯನಿಗೆ ಶ್ರವಣ ಬಹಳ ಮುಖ್ಯ. ವೈದ್ಯರು ರೋಗಿಯ ಸಮಸ್ಯೆಗಳನ್ನು ಕೇಳಿಸಿಕೊಳ್ಳಲು ಕಿವಿ ಸರಿಯಿರಬೇಕು. ಅದೇ ರೀತಿ ನ್ಯಾಯಾಲಯದಲ್ಲಿ ವಾದ-ವಿವಾದ ಮಂಡಿಸಲು ವಕೀಲರುಗಳಿಗೆ ಕಿವಿಯ ತೊಂದರೆಯಿರಬಾರದು. ಇದರಿಂದ ತೀರ್ಪು ಬರೆಯಲು ನೆರವಾಗುತ್ತದೆ. ಕಿವಿಯ ದೋಷವುಳ್ಳವರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಿ ಎಂದು ವಿನಂತಿಸಿದರು.
ಟೀಮ್ ಈಶ್ವರ್ ಮಲ್ಪೆಯ ಕೋ-ಆರ್ಡಿನೇಟರ್ ಲವ ಮಾತನಾಡಿ ಕಣ್ಣಿಗೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಕಿವಿಗೆ ಯಾರು ಕೊಡುವುದಿಲ್ಲ. ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ ರಾಜ್ಯದಲ್ಲಿ 113 ಶಿಬಿರಗಳನ್ನು ನಡೆಸಿದ್ದೇವೆ. ಶ್ರವಣ ದೋಷವುಳ್ಳವರು ಖಾಸಗಿಯಲ್ಲಿ ತಪಾಸಣೆ ಮಾಡಿಸಿಕೊಂಡು ಯಂತ್ರಗಳನ್ನು ಕೊಂಡುಕೊಳ್ಳಬೇಕಾದರೆ ದುಬಾರಿಯಾಗುತ್ತದೆ. ಬಡವರಿಗೆ ಹೊರೆಯಾಗಬಾರದೆನ್ನುವ ಉದ್ದೇಶದಿಂದ 2024 ರಲ್ಲಿ ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ ರಾಜ್ಯದ ನಾನಾ ಕಡೆ ಶಿಬಿರ ನಡೆಸುತ್ತಿದ್ದೇವೆಂದರು.
ಯುವ ನ್ಯಾಯವಾದಿ ಓ.ಪ್ರತಾಪ್ಜೋಗಿ ಮಾತನಾಡುತ್ತ ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್ವುಲ್ಲಾರವರು ಇಂತಹ ಸಮಾಜಮುಖಿ ಕಾರ್ಯಗಳಿಗೆ ಸದಾ ನೆರವಿನ ಹಸ್ತ ಚಾಚುತ್ತಿರುತ್ತಾರೆ. ಬಡ ವಿದ್ಯಾರ್ಥಿಗಳಿಗೆ, ಅಲೆಮಾರಿಗಳಿಗೆ, ಸ್ಲಂಗಳಲ್ಲಿನ ಬಡ ಮಕ್ಕಳಿಗೆ ಕಿಟ್, ಸಲಕರಣೆ, ನೋಟ್ ಬುಕ್ಗಳನ್ನು ವಿತರಿಸುತ್ತಿರುತ್ತಾರೆ. ಅದರಂತೆ ಈಗ ಶ್ರವಣ ದೋಷವುಳ್ಳವರ ತಪಾಸಣೆಗೆ ಮುಂದೆ ಬಂದಿರುವುದು ಅವರ ಉದಾರತನವನ್ನು ತೋರಿಸುತ್ತದೆ ಎಂದು ಪ್ರಶಂಶಿಸಿದರು.
ಲೋಕಾಯುಕ್ತ ಸರ್ಕಾರಿ ಅಭಿಯೋಜಕ ಮಲ್ಲೇಶಪ್ಪ, ವೈದ್ಯ ಮೊಹಿದ್ದೀನ್ ವೇದಿಕೆಯಲ್ಲಿದ್ದರು.


















