ಬೆಂಗಳೂರು: ಮಾರ್ಚ್ 7ಕ್ಕೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಅದಕ್ಕೂ ಮುನ್ನ ಪೂರ್ವಭಾವಿ ಸಭೆಗಳನ್ನು ನಡೆಸಿ, ಯಾವ್ಯಾವ ಕ್ಷೇತ್ರಗಳಿಗೆ, ಏನೇನು ಅಗತ್ಯವಿದೆ ಎಂಬುದನ್ನು ತಿಳಿದು ಬಜೆಟ್ ಪ್ಲ್ಯಾನ್ ಹಾಕಿಕೊಳ್ಳಲಿದ್ದಾರೆ. ಇಂದು ದಲಿತ ಮುಖಂಡರ ಜೊತೆಗೆ ಬಜೆಟ್ ಪೂರ್ವ ಸಭೆ ನಡೆಸಿದ್ದಾರೆ. ಈ ವೇಳೆ ದಲಿತರಿಗೆ ಖುಷಿ ಸುದ್ದಿಯ ಸುಳಿವೊಂದನ್ನ ನೀಡಿದ್ದಾರೆ.
ಶೋಷಿತರ, ದಲಿತ ಸಮುದಾಯಗಳ ಬೇಡಿಕೆಗಳನ್ನು ನಾನು ಮುಖ್ಯಮಂತ್ರಿ ಆದ ಬಳಿಕ ನಿರಂತರವಾವಿ ಈಡೇರಿಸುತ್ತಲೇ ಬಂದಿದ್ದೇನೆ. ದಲಿತರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ಅಭಿವೃದ್ಧಿ ಹಣದಲ್ಲಿ ಶೇಕಡ 24ರಷ್ಟು ಹಣ ಮೀಸಲಾಗಿಡುವ ಕಾಯ್ದೆ ಜಾರಿ ಮಾಡಿದ್ದು ನಮ್ಮ ಸರ್ಕಾರ. ಈ ಕಾಯ್ದೆಯನ್ನು ಕೇಂದ್ರ ಬಿಜೆಪು ಸರ್ಕಾರವಾಗಲಿ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿಯೂ ಜಾರಿ ಮಾಡಿಲ್ಲ. ದಲಿತ ಸಮುದಾಯದ ಗುತ್ತಿಗೆದಾರರಿಗೆ ಒಂದು ಕೋಟಿ ರೂಪಾಯಿವರೆಗಿನ ಗುತ್ತಿಗೆಯಲ್ಲಿ ಮೀಸಲಾತಿ ತಂದಿದ್ದು ನಾವೂ ಮಾತ್ರ. ಇದನ್ನು ಈಗ 2 ಕೋಟಿಗೆ ವಿಸ್ತರಿಸಬೇಕು ಎನ್ನುವ ಬೇಡಿಕೆ ಬಂದಿದೆ. ಈ ಬಗ್ಗೆಯೂ ಪರಿಶೀಲನೆ ಮಾಡ್ತೇವೆ ಎಂದು ಹೇಳುವ ಮೂಲಕ ಸಿಹಿ ಸುದ್ದಿಯನ್ನ ನೀಡಿದ್ದಾರೆ.
ಇನ್ನು ಬಡ್ತಿಯಲ್ಲೂ ಮೀಸಲಾತಿ ತಂದದ್ದು ನಾವೂ ಮಾತ್ರ. ಪಿಟಿಸಿಎಲ್ ಕಾಯ್ದೆ ಮಾಡಿದ್ದು ನಾವೂ. ಹೊಸದಾಗಿ ಕೈಗಾರಿಕೆ ಆರಂಭಿಸುವವರಿಗೆ ಸಾಕಷ್ಟು ಸವಲತ್ತುಗಳನ್ನು ಕಲ್ಪಿಸಿದ್ದೇವೆ. ಇಡೀ ದೇಶಕ್ಕೆ ಮಾದರಿಯಾದ ಕಾಯ್ದೆ, ಕಾನೂನು, ನಿಯಮಗಳನ್ನು ಮಾಡಿರುವ ದಾಖಲೆ ನಮ್ಮ ಸರ್ಕಾರದ್ದು ಎಂದು ತಮ್ಮ ಸರ್ಕಾರದ ಸಾಧನೆಯನ್ನು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಮಂಡಲದ ಅಧಿವೇಶನ ಮೇ 3 ರಿಂದ ಆರಂಭವಾಗಲಿದೆ. ಮಾರ್ಚ್ 7ಕ್ಕೆ ರಾಜ್ಯ ಬಜೆಟ್ ಮಂಡನೆಯಾಗಲಿದೆ.




