ಸುದ್ದಿಒನ್, ಚಿತ್ರದುರ್ಗ, ಏ. 27: ಗಾರ್ಮೇಂಟ್ಗಳಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಮಿಕರ ಸುರಕ್ಷತೆ ಮತ್ತು ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಸ್ಫೂರ್ತಿ ಸಂಸ್ಥೆಯ ನಿರ್ದೇಶಕರಾದ ಕೆ.ಬಿ.ರೂಪಾನಾಯ್ಕ್ ಹೇಳಿದರು.
ಅರವಿಂದ್ ಗಾರ್ಮೆಂಟ್ಸ್, ಸ್ಫೂರ್ತಿ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ಮತ್ತು ಅಮೃತ ಆರ್ಯುವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಅರವಿಂದ್ ಗ್ರಾರ್ಮೆಂಟ್ಸ್ ವತಿಯಿಂದ ಫ್ಯಾಕ್ಟರಿಯನ್ನು ಆರಂಭಿಸಲಾಗಿದ್ದು, ನಿರುದ್ಯೋಗಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಕೆಲಸವನ್ನು ನೀಡಲಾಗಿದೆ. ಅದರ ಜೊತೆಗೆ ಮಹಿಳೆಯರ ಆರೋಗ್ಯ, ಸುರಕ್ಷತೆ ಮತ್ತು ಯೋಗಕ್ಷೇಮಗಳ ಅಗತ್ಯವಿದ್ದು, ಆ ನಿಟ್ಟಿನಲ್ಲಿ ಸ್ಪೂರ್ತಿ ಸಂಸ್ಥೆ ಮತ್ತು ಅರವಿಂದ್ ಲಿಮಿಟೆಡ್ ಇವರ ವತಿಯಿಂದ ಜಾಗೃತಿ ಮತ್ತು ಅರಿವು ಕಾರ್ಯಕ್ರಮವನ್ನು ನಿರಂತರವಾಗಿ ಮಾಡಿಕೊಂಡು ಬರಲಾಗಿದ್ದು, ಮಹಿಳೆಯರ ಹಕ್ಕುಗಳಿಗಾಗಿ ಮತ್ತು ಸಮಾನತೆಗಾಗಿ ಸ್ಫೂರ್ತಿ ಸಂಸ್ಥೆ ಮಹಿಳೆಯರನ್ನು ಸಂಘಟಿಸುವ ಕೆಲಸದಲ್ಲಿ ಕಾರ್ಯಪ್ರೌವೃತ್ತವಾಗಿದೆ ಎಂದು ರೂಪಾನಾಯ್ಕ್ ಹೇಳಿದರು.
ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಅನಿಲ್ ಬಾಲಚಂದ್ರ ಬಗಟಿಯವರು ಮಾತನಾಡಿ, ಮಹಿಳೆಯರ ಆರೋಗ್ಯದ ಜೊತೆಗೆ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಜಾಗೃತಿ ಮೂಡಿಸಲಾಗುತ್ತಿದ್ದು, ಮಹಿಳೆಯರ ಹಕ್ಕುಗಳಿಗಾಗಿ ಕಾರ್ಮಿಕ ಇಲಾಖೆಯಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಮಹಿಳೆಯರು ಕಾರ್ಮಿಕರ ಇಲಾಖೆಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಅಮೃತ ಆಯುರ್ವೇದ ಕಾಲೇಜಿನ ಡಾ.ಸುಪ್ರಿಯಾ ಅವರು ಮಾತನಾಡಿ, ಅಮೃತ ಆಯುರ್ವೇದ ಕಾಲೇಜಿನ ವೈದ್ಯರ ತಂಡ ಜನಸಾಮಾನ್ಯರು ಮತ್ತು ಕೂಲಿಕಾರ್ಮಿಕರು ಮಹಿಳೆಯರ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿ, ಅವರು ಕೆಲಸ ಮಾಡುವಂತಹ ಸ್ಥಳಗಳಲ್ಲಿಯೇ ಯೋಗಕ್ಷೇಮವನ್ನು ವಿಚಾರಿಸಲು ಆರೋಗ್ಯ ತಪಾಸಣೆಯಂತಹ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ನರೇನಹಳ್ಳಿ ಅರುಣ್ಕುಮಾರ್ ಮಾತನಾಡಿ, ಮಹಿಳಾ ಕಾರ್ಮಿಕರು ಅಪೌಷ್ಠಿಕತೆಯಿಂದ ಮತ್ತು ವಿವಿಧ ಕಾಯಿಲೆಗಳಿಂದ ನರಳುವಂತಹ ಸ್ಥಿತಿಯಲ್ಲಿದ್ದರೂ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಪಡೆದುಕೊಳ್ಳುವಲ್ಲಿ ಮುಂದಾಗುವುದಿಲ್ಲ. ಆದ್ದರಿಂದ ಅಮೃತ ಆಯುರ್ವೇದ ವೈದ್ಯಕೀಯ ಸಂಸ್ಥೆ ಉಚಿತವಾಗಿ ತಪಾಸಣೆ ಮತ್ತು ಚಿಕಿತ್ಸೆ ನೀಡಲು ಮುಂದಾಗಿರುವುದನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅಮೃತ ಆಯುರ್ವೇದ ವೈದ್ಯಕೀಯ ಕಾಲೇಜಿನ ಶ್ರೀಮತಿ ಸವಿತ ಸೇರಿದಂತೆ ಹಲವು ಜನ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು. ಅರವಿಂದ ಕಂಪನಿಯ ಹಿರಿಯ ಮಾನವ ಸಂಪನ್ಮೂಲ ಅಧಿಕಾರಿ ಶ್ರೀಕಾಂತ್ ಸೇರಿದಂತೆ, ಅರವಿಂದ್ ಫ್ಯಾಕ್ಟರಿಯ ಹಲವು ಜನ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




















