ಸುದ್ದಿಒನ್, ಹಿರಿಯೂರು: ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ದಕ್ಷಿಣಕಾಶಿ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಇಂದು (ಗುರುವಾರ, ಫೆ. 13) ಮಧ್ಯಾಹ್ನ 12.45ಕ್ಕೆ ನಡೆಯಲಿದೆ. ಸಾವಿರಾರು ಭಕ್ತರ ಸಮುಖದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಸಂಜೆ 5 ಗಂಟೆಗೆ ಶ್ರೀ ಚಂದ್ರಮೌಳೇಶ್ವರ ಹಾಗೂ ಶ್ರೀ ಉಮಾಮಹೇಶ್ವರ ರಥೋತ್ಸವ ಕೂಡ ಜರುಗಲಿದೆ. ಫೆ. 3 ರಂದು ಕಂಕಣ ಕಲ್ಯಾಣೋತ್ಸವ ನಡೆಯಲಿದೆ. ಫೆಬ್ರವರಿ 17ರಂದು ಕಂಕಣ ವಿಸರ್ಜನೆ ನಡೆಯಲಿದೆ. ಈ ಮೂಲಕ ಸುಮಾರು 15 ದಿನಗಳ ಕಾಲ ಈ ಜಾತ್ರೆ ನಡೆಯುತ್ತದೆ. ದೇವರಿಗೆ ದಿನನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ.
ತೇರುಮಲ್ಲೇಶ್ವರ ದೇವಾಲಯವೂ ಸುಮಾರು 500 ವರ್ಷಗಳ ಇತಿಹಾಸವನ್ನು ಹೊಂದಿದೆ. ಚಿತ್ರದುರ್ಗ ಪಾಳೇಗಾರ ವಂಶಸ್ಥ ರಾಜ ಕೆಂಚಪ್ಪನಾಯಕ 1446ರಲ್ಲಿ ತೇರುಮಲ್ಲೇಶ್ವರ ಸ್ವಾಮಿ ದೇಗುಲವನ್ನು ನಿರ್ಮಿಸಿದ ಈ ದೇವಾಲಯ ದ್ರಾವಿಡ ಶೈಲಿಯ ವಾಸ್ತುಶಿಲ್ಪ ರೀತಿಯಲ್ಲಿ ನಿರ್ಮಾಣವಾಗಿದೆ. ದೇವಾಲಯದ ಮುಖ ಮಂಟಪವನ್ನು ಮೂರು ಕಡೆಯಿಂದ ಪ್ರವೇಶಿಸಬಹುದಾಗಿದೆ. ಮುಖ ಮಂಟಪದ ಹೊರಮೈ, ಮೇಲ್ಗಡೆ ಶ್ರೀಕೃಷ್ಣನು ಗೋಪಿಕಾ ಸ್ತ್ರೀಯರ ಜೊತೆ ಜಲ ಕ್ರೀಡೆಯಲ್ಲಿದ್ದಾಗ ಅವರ ವಸ್ತ್ರವನ್ನು ಕದ್ದು, ಮರದ ಮೇಲೆ ಕುಳಿತ ಸನ್ನಿವೇಶವನ್ನು ತೋರಿಸುವ ವಿಗ್ರಹಗಳಿವೆ. ಮುಖ ಮಂಟಪದ ಮೇಲೆ ಕೀರ್ತನಾರ್ಜನೀಯ, ಗಿರಿಜಾ ಕಲ್ಯಾಣ, ಶಿವ ಪುರಾಣ, ಗೋಕರ್ಣಗಳ ಮಹಿಮೆಗೆ ಸಂಬಂಧಪಟ್ಟ ಜಲವರ್ಣ ಭಿತ್ತಿ ಚಿತ್ರಗಳನ್ನು ರಚಿಸಲಾಗಿದೆ.
ದೇವಾಲಯದ ಪ್ರವೇಶದ್ವಾರ, ದೀಪಸ್ಥಂಬ, ಧನಸ್ಸು, ಉಯ್ಯಾಲೆಕಂಬ ಪ್ರಮುಖ ಲಕ್ಷಣಗಳಿಂದ ಕೂಡಿದೆ. ಪ್ರವೇಶ ದ್ವಾರ ದೇವಾಲಯದ ಆರಂಭದಲ್ಲಿ ಇರುವ ಪ್ರವೇಶ ದ್ವಾರವು ದ್ರಾವಿಡ ಶೈಲಿಯಲ್ಲೇ ನಿರ್ಮಾಣವಾಗಿದ್ದು, ದೇವಾಲಯದ ಮೇಲ್ಚಾವಣಿಯು ಹಿಂದೂ -ಶೈವ-ಮಹಾಕಾವ್ಯ-ಶಿವಪುರ ಹಾಗೂ ಹಿಂದೂ ವೈಷ್ಣವ- ಮಹಾಕಾವ್ಯ-ರಾಮಾಯಣದ ವಿಶೇಷ ಚಿತ್ರಗಳ ಬಿತ್ತಿ ಚಿತ್ರಗಳನ್ನು ಸುಂದರವಾಗಿ ಕಾಣುವ ರೀತಿಯಲ್ಲಿ ನಿರ್ಮಿಸಲಾಗಿದೆ. ದೇಗುಲದ ಗೋಪುರವು ಬೃಹದಾಕಾರವಾಗಿದ್ದು 45 ಅಡಿ ಎತ್ತರವನ್ನು ಹೊಂದಿದೆ. ಶಿವಧನಸ್ಸು ದೇವಾಲಯ ಇರುವ ಮತ್ತೊಂದು ವಿಶೇಷತೆಯಾಗಿದೆ. ಶಿವಧನಸ್ಸು ಇದಕ್ಕೆ ಜೀವವಿದೆ ಎಂಬ ಪ್ರತೀಕವು ಇದೆ. ಏಕೆಂದರೆ ಪ್ರತಿ ವರ್ಷವು ಎರಡು ಇಂಚು ಬೆಳೆಯುತ್ತದೆ ಎಂದು ಭಕ್ತರಿಗೆ ನಂಬಿಕೆಯಿದೆ.
ಈ ಧನಸ್ಸನ್ನು ತಂದಾಗ ಸುಮಾರು 5 ಅಡಿಯಿತ್ತಂತೆ. ಬಳಿಕ 30 ಅಡಿ ಉದ್ದವಾಗಿ ಬೆಳೆದಿದೆಯಂತೆ. ಪಾಳೇಗಾರ ಕೆಂಚಪ್ಪನಾಯಕನಿಗೆ ವೇದಾವತಿ ನದಿಯಲ್ಲಿ ಸಿಕ್ಕಿದ ಧನಸ್ಸು ಇದಾಗಿದ್ದು, ಇದನ್ನು ಜಾತ್ರೆ ಸಮಯ ಹಾಗೂ ಬ್ರಹ್ಮರಥೋತ್ಸವ ದಿನದಂದು ಮಾತ್ರ ಹೊರತೆಗೆದು ವೇದಾವತಿ ನದಿಗೆ ತೆಗೆದುಕೊಂಡು ಹೊಗಿ ಅಭಿಷೇಕ ಮಾಡಿ ಪೂಜೆ ಸಲ್ಲಿಸಲಾಗುವುದು. ನಂತರ ದೇವಾಲಯಕ್ಕೆ ಬರುವಾಗ ಅದು ನೆಲಮುಟ್ಟಿದರೆ, ಭಾರವಾದರೆ, ನಿಂತರೆ, ಆಪತ್ತು, ತೊಂದರೆ ಯಾಗುತ್ತದೆ. ಹಗುರವಾದರೆ ಮಳೆಬೆಳೆ ಸಂವೃದ್ದಿಯಾಗುತ್ತದೆ. ಅದನ್ನು ದೇವಾಲಯಕ್ಕೆ ತಂದು ಮಾಘಮಾಸದ ಮಘಾ ನಕ್ಷತ್ರದಲ್ಲಿ ಪೂಜೆ ಮಾಡಿದ ನಂತರ ಬ್ರಹ್ಮರಥೋತ್ಸವ ನಡೆಯುತ್ತದೆ. ಇದರ ಮೂಲವಿಗ್ರಹ ಕಾಶಿಯಲ್ಲಿ ಇರುವಂತೆ ದಕ್ಷಿಣ ದಿಕ್ಕಿಗೆ ಮುಖ ಮಾಡಿದ ಕಾರಣಕ್ಕೆ ದೇಗುಲವನ್ನು ದಕ್ಷಿಣ ಕಾಶಿ ಎಂದು ಕರೆಯಲಾಗುತ್ತದೆ.

ಶ್ರೀ ಶೈಲ ಮಲ್ಲಿಕಾರ್ಜುನ ಪರಮ ಭಕ್ತೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮ ತನ್ನ ಇಳಿ ವಯಸ್ಸಿನಲ್ಲಿ ಶ್ರೀ ಶೈಲಕ್ಕೆ ನಡೆದುಕೊಂಡು ಹೋಗಿ ದರ್ಶನ ಮಾಡಿ ಬರುವುದು ಕಷ್ಟವಾಗಿತ್ತು. ಈ ಕಾರಣಕ್ಕೆ ಆಕೆಯ ಕನಸಿನಲ್ಲಿ ಮಲ್ಲಿಕಾರ್ಜುನ ಸ್ವಾಮಿ ಮಾತು ಕೊಟ್ಟಿದ್ದರ ಪರಿಣಾಮವಾಗಿ ಮಲ್ಲೇಶ್ವರ ಸ್ವಾಮಿ ದೇಗುಲ ನಿರ್ಮಾಣವಾಗಿದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ಮಲ್ಲಮ್ಮನಿಂದ ಚೆನ್ನಮಲ್ಲಿಕಾರ್ಜುನನ ದರ್ಶನ
ಹಿರಿಯೂರಿನಲ್ಲಿ ನೆಲೆಸಿದ್ದ ಮಲ್ಲಮ್ಮ ಆಗಾಗ ಕಾಲ್ನಡಿಗೆಯಲ್ಲಿ ಶ್ರೀಶೈಲಕ್ಕೆ ಹೋಗಿ ತನ್ನ ಇಷ್ಟದೈವ ಚೆನ್ನಮಲ್ಲಿಕಾರ್ಜುನನ ದರ್ಶನ ಮಾಡಿ ಬರುತ್ತಿದ್ದಳು. ಒಮ್ಮೆ ಹೀಗೆಯೇ ಶ್ರೀಶೈಲಕ್ಕೆ ಪ್ರಯಾಣಿಸುವಾಗ ದಣಿವಾಗಿ ಎಲೆ, ಅಡಿಕೆ ಹಾಕಿಕೊಳ್ಳಲು ಬಯಸಿದಳು. ಅಡಿಕೆ ಪುಡಿ ಮಾಡಿಕೊಳ್ಳಲು ಕಲ್ಲೊಂದನ್ನು ಎತ್ತಿಕೊಂಡು ಪುಡಿಮಾಡಿ ನಂತರ ಬಿಸಾಡುತ್ತಾರೆ. ಮುಂದೆ ದಾರಿಯಲ್ಲಿ ಎರಡ್ಮೂರು ಬಾರಿ ಅಡಿಕೆ ಪುಡಿ ಮಾಡುವಾಗಲೂ ಅದೇ ಕಲ್ಲು ಸಿಕ್ಕಿದ್ದಲ್ಲದೆ, ಮನೆಗೆ ಮರಳಿ ಬಂದಾಗಲೂ ತನ್ನ ಅಡಿಕೆ ಚೀಲದಲ್ಲಿ ಆ ಕಲ್ಲು ಗೋಚರಿಸುತ್ತದೆ. ಅಚ್ಚರಿಗೊಂಡ ಮಲ್ಲಮ್ಮ ಅದನ್ನು ಹೊರಗೆ ಬಿಸಾಡುತ್ತಾರೆ. ನಂತರ ಅದು ಮನೆಯ ಒಳಗಿದ್ದ ಒಳ ಕಲ್ಲಿನಲ್ಲಿ ಬಂದು ಕುಳಿತುಕೊಳ್ಳುತ್ತದೆ.
ಚೆನ್ನಮಲ್ಲಿಕಾರ್ಜುನನ ಸ್ಮರಣೆಯಲ್ಲಿ ಮಲಗಿದ್ದ ಮಲ್ಲಮ್ಮನಿಗೆ ರಾತ್ರಿ ಕನಸಿನಲ್ಲಿ ಕಾಣಿಸಿಕೊಂಡ ದೇವರು ಇನ್ನು ನಿನಗೆ ವಯಸ್ಸಾಯಿತು. ಶ್ರೀಶೈಲಕ್ಕೆ ಬರುವ ತೊಂದರೆ ತೆಗೆದುಕೊಳ್ಳಬೇಡ. ಕಲ್ಲಿನ ರೂಪದಲ್ಲಿ ಬಂದವನು “ನಾನೇ ಇಲ್ಲಿ ನನ್ನನ್ನು ಪೂಜಿಸು” ಎಂದು ಹೇಳಿ ಮಾಯವಾನದಂತೆ. ಕನಸಿನಿಂದ ಎಚ್ಚರಗೊಂಡು ನೋಡಿದಾಗ ಒಳಕಲ್ಲಿನಲ್ಲಿ ಇದ್ದ ಕಲ್ಲು ಲಿಂಗವಾಗಿತ್ತು. ಈ ಘಟನೆ ನಂತರ ಮಲ್ಲಮ್ಮನ ಮನೆಯೇ ಮಲ್ಲೇಶ್ವರ ದೇಗುಲ ವಾಯಿತು ಎಂಬ ಪ್ರತೀತಿ ಇದೆ.
ಒಟ್ಟಾರೆಯಾಗಿ ಶ್ರೀ ತೇರು ಮಲ್ಲೇಶ್ವರನ ರಥೋತ್ಸವಕ್ಕೆ ಜಿಲ್ಲೆ , ರಾಜ್ಯದ ವಿವಿಧ ಭಾಗಗಳಿಂದ ಸೇರಿದಂತೆ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















