ಸ್ವಾಸ್ಥ್ಯ ಸಮಾಜ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಮುಖ್ಯ : ಎಂ.ವಿಜಯ್

suddionenews
2 Min Read

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 09 : ಸ್ವಾಸ್ಥ್ಯ ಸಮಾಜ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ತುಂಬಾ ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಿಂದ ಪತ್ರಕರ್ತರ ಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಗಾಂಧಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಗಾಟಿಸಿ ಮಾತನಾಡಿದರು.

ನ್ಯಾಯಾಲಯ ಪ್ರಜಾಪ್ರಭುತ್ವದಲ್ಲಿ ನ್ಯಾಯ ಕೊಡುವ ಅಂಗ. ಅದೇ ರೀತಿ ಪತ್ರಿಕಾರಂಗ ಸಂವಿಧಾನದ ನಾಲ್ಕನೆ ಅಂಗ. ಸರ್ಕಾರ ತಪ್ಪು ಮಾಡಿದಾಗ ನೈಜ ಸುದ್ದಿಗಳನ್ನು ಪ್ರಕಟಿಸಿ ಸಾರ್ವಜನಿಕರನ್ನು ಜಾಗೃತಿಗೊಳಿಸುವ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ. ಮಾನ ನಷ್ಠ ಮೊಕದ್ದಮೆ, ನಾಯ್ಯಾಲಯ ನಿಂದನೆ ಇವೆರಡು ಪತ್ರಕರ್ತರ ಮುಂದಿರುವ ಸವಾಲುಗಳು, ದೌರ್ಜನ್ಯ, ದಬ್ಬಾಳಿಕೆ, ಕಿರುಕುಳದಿಂದ ಸಾರ್ವಜನಿಕರು ಹೇಗೆ ಕಾನೂನು ಮೂಲಕ ರಕ್ಷಣೆ ಪಡೆದುಕೊಳ್ಳಬಹುದೆಂಬುದನ್ನು ಮಾಧ್ಯಮಗಳು ಬರವಣಿಗೆ ಮೂಲಕ ಅರಿವು ಮೂಡಿಸಬೇಕಿದೆ. ಪತ್ರಕರ್ತನಾದವನು ದೇಶದ ಗಡಿ ಕಾಯುವ ಸೈನಿಕನಿದ್ದಂತೆ. ಇತಿಮಿತಿಯಲ್ಲಿ ಕೆಲಸ ಮಾಡಬೇಕು. ಯಾವುದೇ ಒಂದು ಸುದ್ದಿಯನ್ನು ಪ್ರಕಟಿಸುವ ಮುನ್ನ ಸಾಕ್ಷಿ, ಮತ್ತು ಸಂಗತಿಯನ್ನು ಗ್ರಹಿಸಬೇಕು. ಸತ್ಯ, ನಿಖರತೆ, ವಸ್ತುನಿಷ್ಟತೆಯನ್ನು ಪತ್ರಕರ್ತ ಮೈಗೂಡಿಸಿಕೊಂಡರೆ ಎಂತಹ ಸಂದರ್ಭದಲ್ಲಾದರೂ ಸಮಸ್ಯೆಗೆ ಒಳಗಾಗವುದಿಲ್ಲ. ಪತ್ರಿಕಾ ಸ್ವಾತಂತ್ರ್ಯ ದಮನ ಮಾಡಿದರೆ ಪ್ರಜಾಪ್ರಭುತ್ವದ ಮೇಲೆ ಹಲ್ಲೆ ನಡೆಸಿದಂತೆ ಎಂದು ಸುಪ್ರೀಂಕೋರ್ಟ್ ಹೇಳಿದೆ ಎನ್ನುವುದನ್ನು ಎಂ.ವಿಜಯ್ ಉಲ್ಲೇಖಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಪತ್ರಕರ್ತರ ಅಹೋಬಲಪತಿ ಮಾತನಾಡಿ ಪತ್ರಕರ್ತನಾದವನು ಎಲ್ಲವನ್ನು ಬಲ್ಲೆ ಎಂಬ ಭ್ರಮೆಯಲ್ಲಿರಬಾರದು. ವಿದ್ಯಾರ್ಹತೆ, ವೃತ್ತಿಯ ಜೊತೆಯಲ್ಲಿ ಕಾನೂನು ಅರಿವು ಮುಖ್ಯ. ಸುದ್ದಿಯನ್ನು ಪ್ರಕಟಿಸುವ ತವಕದಲ್ಲಿ ಕೆಲವೊಮ್ಮೆ ಮಾನ ನಷ್ಟಕ್ಕೊಳಗಾಗಬೇಕಾಗುತ್ತದೆ. ನ್ಯಾಯಾಂಗ ನಿಂದನೆಯಾಗದಂತೆಯೂ ಎಚ್ಚರಿಕೆಯಿಂದ ಸುದ್ದಿ ಪ್ರಕಟಿಸುವ ಚಾಣಾಕ್ಷತನ ಪತ್ರಕರ್ತನಿಗಿರಬೇಕು. ಅದಕ್ಕಾಗಿ ಪತ್ರಕರ್ತ ಇಂತಹ ಉಪನ್ಯಾಸಗಳ ಮೂಲಕ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಅರಿತುಕೊಳ್ಳಬೇಕು ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ದಿನೇಶ್‍ಗೌಡಗೆರೆ ಅಧ್ಯಕ್ಷತೆ ವಹಿಸಿದ್ದರು. ಮಾನನಷ್ಟ ಮೊಕದ್ದಮೆ ಹಾಗೂ ನ್ಯಾಯಾಂಗ ನಿಂದನೆ ಎಂಬ ವಿಚಾರ ಕುರಿತು ಪತ್ರಕರ್ತ, ವಕೀಲ, ಚಿತ್ರನಟ ಎಂ.ವಿ.ರೇಣಸಿದ್ದಯ್ಯ ಉಪನ್ಯಾಸ ನೀಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ತುಕಾರಾಂ, ಎಸ್.ಜೆ.ಎಂ.ಕಾನೂನು ಕಾಲೇಜು ಪ್ರಾಧ್ಯಾಪಕರಾದ ಸುಮನ ಅಂಗಡಿ ವೇದಿಕೆಯಲ್ಲಿದ್ದರು. ನಿಹಾರಿಕ ಪ್ರಾರ್ಥಿಸಿದರು, ವಿನಾಯಕ ಸ್ವಾಗತಿಸಿದರು. ನಾಕಿಕೆರೆ ತಿಪ್ಪೇಸ್ವಾಮಿ ನಿರೂಪಿಸಿದರು.

 

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks