ಚಿತ್ರದುರ್ಗ | ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ

2 Min Read

 

ಚಿತ್ರದುರ್ಗ. ಅ. 04: ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇರುವವರಿಗೆ ಉಚಿತವಾಗಿ ಊಟ, ವಸತಿಯೊಂದಿಗೆ ಶಸ್ತ್ರ ಚಿಕಿತ್ಸೆ ಹಾಗೂ ಔಷಧ ಮತ್ತು ಕನ್ನಡಕ ವಿತರಣೆ ಮಾಡುವುದಾಗಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂದತ್ವ ನಿವಾರಣಾ ವಿಭಾಗ ಲಕ್ಷ್ಮಿಸಾಗರ ಗ್ರಾಮ ಪಂಚಾಯಿತಿ ಹಾಗೂ ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಲಕ್ಷ್ಮಿಸಾಗರ ಗ್ರಾಮದಲ್ಲಿ ಆಯೋಜಿಸಲಾಗದ್ದ ಬೃಹತ್ ಉಚಿತ ಕಣ್ಣಿನ ತಪಾಸಣೆ ಶಸ್ತ್ರ ಚಿಕಿತ್ಸೆ ಹಾಗೂ ಕನ್ನಡಕ ವಿತರಣಾ ಶಿಬಿರ ಉದ್ಘಾಟಿಸಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿದರು.

ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಶಾಸಕರ ಕಾರ್ಯಾಲಯದಿಂದ ವ್ಯವಸ್ಥೆ ಮಾಡಲಾಗುವುದು. ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿ ಸುರಕ್ಷಿತವಾಗಿ ಅವರನ್ನು ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಮಾತನಾಡಿ, ಕಣ್ಣು ಮಹತ್ವದ ಅಂಗವಾಗಿದ್ದು ಇದನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ. 40 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ವರ್ಷಕ್ಕೊಮ್ಮೆ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಕಣ್ಣಿನ ತಪಾಸಣೆ ಮಾಡಿಸಿಕೊಂಡು ಕಣ್ಣನ್ನು ರಕ್ಷಿಸಿಕೊಳ್ಳಿರಿ ಎಂದರು.

ಚಲನಚಿತ್ರ ನಟ ದೊಡ್ಡಣ್ಣ ಮಾತನಾಡಿ ಪಂಚೇಂದ್ರಿಯಗಳಲ್ಲಿ ಪವಿತ್ರವಾದ ಅಂಗ ನಯನವಾಗಿದೆ. ನಯನಗಳ ಬಗ್ಗೆ ಎಲ್ಲರಲ್ಲೂ ಕಾಳಜಿ ಇರಬೇಕು. ಸಂಘ ಸಂಸ್ಥೆಗಳ ಮೂಲಕ ಕಾಲ ಕಾಲಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿ ಸಾರ್ವಜನಿಕರ ಆರೋಗ್ಯ ಕಾಪಾಡಲು ಪ್ರಯತ್ನವಾಗಬೇಕು ಎಂದರು.

ಶಿಬಿರದಲ್ಲಿ 280 ಜನರ ಕಣ್ಣಿನ ತಪಾಸಣೆ ಮಾಡಿಸಲಾಯಿತು. ಅವರಲ್ಲಿ 51 ಕಣ್ಣಿನಪೊರೆ ಇರುವರನ್ನು ಗುರುತಿಸಿದ್ದು, ಈ ದಿನವೇ ಬೆಂಗಳೂರಿನಲ್ಲಿ ಶಸ್ತ್ರಚಿಕಿತ್ಸೆ ಮಾಡಲು ಕರೆದೊಯ್ಯಲಾಯಿತು. 98 ದೃಷ್ಟಿ ದೋಷ ಇರುವವರನ್ನು ಗುರುತಿಸಲಾಗಿದ್ದು ಮುಂದಿನ ದಿನಗಳಲ್ಲಿ ಉಚಿತ ಕನ್ನಡಕಗಳನ್ನು ಮರು ತಪಾಸಣೆ ದಿನದಂದು ವಿತರಿಸಲಾಗುವುದು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಸ್ವಾಮಿ. ಉಪಾಧ್ಯಕ್ಷೆ ಸುನಿತಾ, ಸದಸ್ಯರಾದ ವಸಂತ, ಎ.ಬಿ.ಧನಂಜಯ, ಅಶೋಕ್‍ಕುಮಾರ್, ಸುರೇಶ್, ದೇವರಾಜ್, ಕವಿತಾ, ಅಲಿಖಾನ್, ತಾ.ಪಂ.ಇಓ ರವಿಕುಮಾರ್, ಆರೋಗ್ಯ ಅಧಿಕಾರಿ ಡಾ ಬಿ.ವಿ.ಗಿರೀಶ್, ಶಂಕರ್ ಕಣ್ಣಿನ ಆಸ್ಪತ್ರೆ ವೈದ್ಯರ ತಂಡ ಸೇರಿದಂತೆ ಮತ್ತಿರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *