ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಎಲ್ಲಾ ಪಕ್ಷಗಳು ವಿಫಲವಾಗಿವೆ : ಚಾಮರಸಮಾಲಿ ಪಾಟೀಲ್

3 Min Read

 

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 06  : ರೈತರ ಸಾಲ ಮನ್ನ ಮಾಡುವುದಾಗಿ ಸುಳ್ಳು ಆಶ್ವಾಸನೆ ಕೊಟ್ಟು ಮೂರನೆ ಬಾರಿಗೆ ದೇಶದ ಪ್ರಧಾನಿಯಾಗಿರುವ ನರೇಂದ್ರಮೋದಿ ರೈತರ ಸಮಸ್ಯೆಗಳತ್ತ ಕಣ್ಣೆತ್ತಿ ನೋಡುತ್ತಿಲ್ಲ. ಸ್ವಾಮಿನಾಥನ್ ವರದಿ ಜಾರಿಯಾಗಿಲ್ಲ. ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದು ಕೃಷಿ ಭೂಮಿ, ಮಾರುಕಟ್ಟೆಯನ್ನು ಕಾರ್ಪೊರೇಟ್ ಕಂಪನಿಗಳಿಗೆ ವಹಿಸಿದ್ದಾರೆಂದು ಕರ್ನಾಟಕ ಸರ್ವೋದಯ ಪಕ್ಷದ ರಾಜ್ಯಾಧ್ಯಕ್ಷ ಚಾಮರಸಮಾಲಿ ಪಾಟೀಲ್ ಆಪಾದಿಸಿದರು.

ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರು, ದಲಿತರು, ಮಹಿಳೆಯರು, ಮಕ್ಕಳ ಆಶೋತ್ತರಗಳನ್ನು ಈಡೇರಿಸುವಲ್ಲಿ ಎಲ್ಲಾ ಪಕ್ಷಗಳು ವಿಫಲವಾಗಿವೆ. ದುಡಿಯುವ ವರ್ಗದ ಹಿತ ಕಾಯುವತ್ತ ಗಮನಹರಿಸುತ್ತಿಲ್ಲ. ಕೋಮು ಭಾವನೆ ಬಿತ್ತಿ ಜಾತಿ ಧರ್ಮಗಳ ನಡುವೆ ಸಂಘರ್ಷವಿಡುತ್ತಿದ್ದಾರೆ. ರಾಮ ಮಂದಿಕ್ಕೆ ದೇಣಿಗೆ ಸಂಗ್ರಹಿಸಿ ಲೂಟಿ ಮಾಡಿದ್ದಾರೆ. ಸಾರ್ವಜನಿಕರ ತೆರಿಗೆ ಹಣದಿಂದ ಉದ್ಯಮಿಗಳ ನಲವತ್ತು ಲಕ್ಷ ಕೋಟಿ ರೂ.ಗಳ ಸಾಲ ಮನ್ನಾ ಮಾಡಿ  ದುಡಿಯುವ ವರ್ಗವನ್ನು ಸಾಲದ ಕೂಪಕ್ಕೆ ನೂಕಿದ್ದಾರೆ. ಇದೆಲ್ಲಾ ಬಿಜೆಪಿ. ಹಗರಣವಾದರೆ ಇನ್ನು ಕಾಂಗ್ರೆಸ್ ಇವರಿಗಿಂತ ಭಿನ್ನವಾಗೇನು ಇಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಹಗರಣ, ವಾಲ್ಮೀಕಿ ಅಭಿವೃದ್ದಿ ನಿಗಮದ 187 ಕೋಟಿ ರೂ.ಗಳನ್ನು ಚುನಾವಣೆಯಲ್ಲಿ ಹೆಂಡಕ್ಕೆ ಹಂಚಲು ಬಳಸಿದ್ದಾರೆ. ಇದಕ್ಕಿಂತ ದಿವಾಳಿ ಇನ್ನೇನು ಬೇಕು ಎಂದು ಪ್ರಶ್ನಿಸಿದರು?

ಭ್ರಷ್ಠಾಚಾರ ನಿಗ್ರಹವಾಗಿಲ್ಲ. ರಾಜ್ಯದ 192 ತಾಲ್ಲೂಕುಗಳಲ್ಲಿ ಕಳೆದ ವರ್ಷ ಬರವಿತ್ತು. ಫಸಲ್‍ಭೀಮ ಯೋಜನೆಯಲ್ಲಿ ಗೋಲ್‍ಮಾಲ್ ಆಗಿದೆ. ರೈತರ ಬೆಳೆ ಪರಿಹಾರ ಹಣ ಬೇರೆ ಬೇರೆ ಖಾತೆಗಳಿಗೆ ಹೋಗಿದೆ. ಸಬ್ಸಿಡಿಯಲ್ಲಿ ಮೋಸ, ಇನ್ನು ಇಂತಹ ಪಕ್ಷಗಳ ಹಿಂದೆ ರೈತರು ಹೋಗುವುದರಲ್ಲಿ ಅರ್ಥವಿಲ್ಲ. ಪರ್ಯಾಯ ರಾಜಕೀಯ ಪಕ್ಷ ತರಬೇಕೆಂಬುದು ನಮ್ಮ ಉದ್ದೇಶ. ಅದಕ್ಕಾಗಿ ಸರ್ವೋದಯ ಪಕ್ಷವನ್ನು ರಾಜ್ಯದಲ್ಲಿ ಪ್ರಭಲವಾಗಿ ಕಟ್ಟಬೇಕಾಗಿರುವುದರಿಂದ ಈಗಾಗಲೇ ಹದಿನೈದು ಜಿಲ್ಲೆಗಳಲ್ಲಿ ಘಟಕ ಆರಂಭಗೊಂಡಿದೆ. ಮುಂದೆ ಇನ್ನು ಹದಿನೈದು ಜಿಲ್ಲೆಗಳಲ್ಲಿ ಘಟಕ ರಚಿಸಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂ, ಜಿಲ್ಲಾಪಂಚಾಯಿತಿ, ವಿಧಾನಸಭೆ, ಪಾರ್ಲಿಮೆಂಟ್ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಪ್ರಗತಿಪರ ಚಿಂತಕರನ್ನು ಒಟ್ಟಿಗೆ ಸೇರಿಸಿ ಗುಣಾತ್ಮಕ ರಾಜಕಾರಣ ಮಾಡಲಾಗುವುದು ಎಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ದೇಶದಲ್ಲಿ ಇಂಡಿಯಾ ವರ್ಸಸ್ ಎನ್.ಡಿಎ. ಚುನಾವಣೆ ನಡೆದಿಲ್ಲ. ಸರ್ವಾಧಿಕಾರಿ ವರ್ಸಸ್ ಪ್ರಜಾಪ್ರಭುತ್ವದ ಚುನಾವಣೆಯಾಗಿರುವುದರಿಂದ ಕೇಂದ್ರದಲ್ಲಿ ಬಿಜೆಪಿ.ಗೆ ಬಹುಮತ ಸಿಕ್ಕಿಲ್ಲ. ಸಂವಿಧಾನ ಪ್ರಜಾಪ್ರಭುತ್ವ ಉಳಿಸುವ ತೀರ್ಮಾನ ತೆಗೆದುಕೊಂಡಿದ್ದೇವೆ. ಇದೆ ತಿಂಗಳ 9 ರಂದು ಕ್ವಿಟ್ ಇಂಡಿಯಾ ಚಳುವಳಿ ಅಂಗವಾಗಿ 541 ಸಂಘಟನೆಗಳು ಸೇರಿಕೊಂಡು ಸಂಯುಕ್ತ ಕಿಸಾನ್ ಮೋರ್ಚ ಮೇರೆಗೆ ಕಾರ್ಪೊರೇಟ್ ಕಂಪನಿಗಳೆ ದೇಶ ಬಿಟ್ಟು ತೊಲಗಿ ಎನ್ನುವ ಚಳುವಳಿ ನಡೆಸುತ್ತೇವೆ. ರೈತರ ಸಂಕಷ್ಠಗಳಿಗೆ ಇನ್ನು ಶಾಶ್ವತ ಪರಿಹಾರ ಕಂಡುಕೊಳ್ಳಲು ಆಗುತ್ತಿಲ್ಲ. ನಿಶ್ಯಕ್ತ ರಾಜಕಾರಣದಿಂದ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲು ನೀಡಲು ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇರಳದಲ್ಲಿ ವಯನಾಡ್ ದುರಂತ ಪ್ರಕೃತಿ ವಿಕೋಪದಿಂದ ಆಗಿದ್ದಲ್ಲ. ಅಭಿವೃದ್ದಿ ನೆಪದಲ್ಲಿ ಬೆಟ್ಟ ಗುಡ್ಡಗಳನ್ನು ಕರಗಿಸುವುದು, ಮೈನ್ಸ್, ರೆಸಾರ್ಟ್‍ಗಳ ನಿರ್ಮಾಣ, ಪ್ರಕೃತಿ ವಿರುದ್ದ ಮಾನವ ಸಂಪತ್ತುಗಳನ್ನು ಕರಗಿಸುತ್ತಿರುವುದು ಇದಕ್ಕೆ ಕಾರಣ. ಕೇಂದ್ರ ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತೆಂದು ಘೋಷಿಸುವಂತೆ ಒತ್ತಾಯಿಸಿದರು.

ಕೊಡಗಿನಲ್ಲಿ ಭೂಕುಸಿತವಾಗುತ್ತಿದೆ. ಮೈಸೂರಿನಲ್ಲಿ ಮಳೆ ಜಾಸ್ತಿ, ಸಂಡೂರಿನಲ್ಲಿ ಮೈನಿಂಗ್ ನಿರಂತರವಾಗಿ ನಡೆಯುತ್ತಿರುವುದರಿಂದ ಬಳ್ಳಾರಿ ಹಾಳಾಗಿದೆ. ಸೆ.4 ರಂದು ಬಳ್ಳಾರಿಗೆ ಹೋಗಿ ಹಿರೇಮಠ್ ನೇತೃತ್ವದಲ್ಲಿ ದಗಲ್‍ಬಾಜಿ ಗಣಿಗಾರಿಕೆ ವಿರುದ್ದ ಹೋರಾಡುತ್ತೇವೆ. ರೈತ ಚಳುವಳಿಗೆ 45 ವರ್ಷಗಳ ಇತಿಹಾಸವಿದೆ. ಕೆಲವರಿಂದ ಹಸಿರು ಟವಲ್‍ಗಳ ದುರುಪಯೋಗವಾಗುತ್ತಿದೆ. ರೈತ ಕುಟುಂಬಕ್ಕೊಬ್ಬ ಸದಸ್ಯ, ಊರಿಗೊಬ್ಬ ಕಾರ್ಯಕರ್ತನನ್ನು ನೇಮಿಸಿ ಭ್ರಷ್ಟ ಸರ್ಕಾರಗಳ ವಿರುದ್ದ ಚಳುವಳಿ ಆರಂಭಿಸಿ ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಪ್ರತಿ ಹಳ್ಳಿ ಹಳ್ಳಿಯಲ್ಲೂ ರೈತ ಸಂಘವನ್ನು ಬಲಿಷ್ಟವಾಗಿ ಕಟ್ಟುತ್ತೇವೆಂದು ತಿಳಿಸಿದರು.

ಕರ್ನಾಟಕ ಸರ್ವೋದಯ ಪಕ್ಷದ ಖಜಾಂಚಿ ಅಂಜದ್ ಪಾಷ ಮಾತನಾಡಿ ರಾಷ್ಟ್ರೀಯ ಪಕ್ಷಗಳ ಧೋರಣೆ, ಸಿದ್ದಾಂತಕ್ಕೆ ಜನ ಬೇಸತ್ತಿದ್ದಾರೆ. ಕಾರ್ಪೊರೇಟ್‍ನವರು ನೀಡುವ ಫಂಡ್‍ನಿಂದ ಚುನಾವಣೆಗೆ ನಿಲ್ಲುತ್ತಾರೆ. ರೈತ ಸಂಘ ದಲಿತ ಸಂಘಟನೆಗಳನ್ನು ಸೇರಿಸಿಕೊಂಡು ಆಳುವ ಪಕ್ಷಗಳ ವಿರುದ್ದ ಹೋರಾಡುತ್ತೇವೆ. ರೈತರ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಸರ್ಕಾರ ಬೇಕಾಗಿದೆ. ಕಾರ್ಪೊರೇಟ್‍ಗಳ ಪರವಾಗಿ ಕೆಲಸ ಮಾಡುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಜನ ಸಾಮಾನ್ಯರ ಸಮಸ್ಯೆಗಳ ನಿವಾರಣೆ ಬೇಕಾಗಿಲ್ಲ. ತಳಮಟ್ಟದಿಂದ ಸರ್ವೊದಯ ಪಕ್ಷ ಸಂಘಟಿಸಿ ಪರ್ಯಾಯ ರಾಜಕಾರಣ ಮಾಡುವುದು ನಮ್ಮ ಮುಂದಿರುವ ಗುರಿ ಎಂದು ಹೇಳಿದರು.

ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ, ಖಜಾಂಚಿ ಶಿವರಾಜ್ ರೇವಣಸಿದ್ದಯ್ಯ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಗೋಪಾಲ್‍ಪಾಪೆಗೌಡ ಶಂಕರೇಗೌಡ, ಹೊರಕೇರಪ್ಪ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *