ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 18 : ತಾಲೂಕಿನ ದೊಡ್ಡಚೆಲ್ಲೂರು ಶಾಂತಿನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಕಾಣಿಸಿಕೊಂಡು ರೈತರ ಕುರಿ, ಮೇಕೆ ಸೇರಿದಂತೆ ಜಾನುವಾರುಗಳನ್ನು ಕೊಂದು ತಿನ್ನುತ್ತಿತ್ತು. ಈ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಗ್ರಾಮಸ್ಥರ ಮನವಿಗೆ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಹಿಡಿಯಲು ಬೋನು ಅಳವಡಿಸಿದ್ದರು. ಇಂದು ಆ ಬೋನಿಗೆ ಚಿರತೆ ಬೋನಿಗೆ ಬಿದ್ದಿದೆ. ಬೊನಿಗೆ ಬಿದ್ದ ಚಿರತೆ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿರುವುದರಿಂದ ತಲೆ ಹಾಗೂ ಹಣೆ ಸ್ವಲ್ಪ ಗಾಯಗಳಾಗಿದ್ದು ಸೂಕ್ತ ಚಿಕಿತ್ಸೆಯ ನಂತರ ಅರಣ್ಯ ಧಾಮಕ್ಕೆ ಬಿಡಲಾಗಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ಗುರುಲಿಂಗಪ್ಪ ತಿಳಿಸಿದ್ದಾರೆ.
ಬೋನಿಗೆ ಸೆರೆಯಾದ ಚಿರತೆಯನ್ನು ಕಂಡ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಚಿರತೆಯ ಆತಂಕದಿಂದ ದಿನನಿತ್ಯ ಜೀವನದಲ್ಲಿ ಆತಂಕದಲ್ಲಿದ್ದ ಜನರು ಇದೀಗ ನೆಮ್ಮದಿ ಕಂಡಿದ್ದು, ಅರಣ್ಯ ಇಲಾಖೆಯ ಕಾರ್ಯಕ್ಕೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
















