ಜಗದೀಶ್ ಶೆಟ್ಟರ್ ವಿಚಾರಕ್ಕೆ ಡಿಕೆಶಿಗೆ ಕಿವಿ ಮಾತು : ಗುಣ ಚಾರಿತ್ರ್ಯ ಗಮನಿಸಿ ಎಂದರು ಖರ್ಗೆ

suddionenews
1 Min Read

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರು. ಟಿಕೆಟ್ ಪಡೆದು, ಸೋಲು ಅನುಭವಿಸಿದರು. ಬಳಿಕ ಕಾಂಗ್ರೆಸ್ ನಿಂದಾನೇ ಎಂಎಲ್ಸಿ ಕೂಡ ಆಗಿದ್ದರು. ಆದರೆ ನಿನ್ನೆ ದಿಢೀರನೆ ಮರಳಿ ಗೂಡಿಗೆ ವಾಪಸ್ಸಾಗಿದ್ದಾರೆ. ಇದು ಕಾಂಗ್ರೆಸ್ಸಿಗರಿಗೂ ಶಾಕ್ ಆಗಿದೆ.

ಈ ಬಗ್ಗೆ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಕಿವಿ ಮಾತು ಹೇಳಿದ್ದಾರೆ. ಬೇರೆ ಪಕ್ಷಗಳ ಮುಖಂಡರನ್ನು ಸೇರಿಸಿಕೊಳ್ಳುವಾಗ ಹೆಚ್ಚಿನ ಎಚ್ಚರಿಕೆವಹಿಸಿ ಎಂದು ತಿಳಿಸಿದ್ದಾರೆ.

ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು, ಮಾತನಾಡುತ್ತಾ ಪರೋಕ್ಷವಾಗಿ ಜಗದೀಶ್ ಶೆಟ್ಟರ್ ಅವರ ವಿಚಾರ ತೆಗೆದಿದ್ದಾರೆ‌. ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸುವಾಗ ಅವುಗಳ ಗುಣಮಟ್ಟ, ತೂಕ ಮೊದಲಾದವುಗಳನ್ನು ಖರೀದಿಸುವಾಗ ಸಮಗ್ರವಾಗಿ ಪರಿಶೀಲನೆ ಮಾಡುತ್ತೇವೆ. ಹಾಗೆಯೇ ಪಕ್ಷಕ್ಕೂ ಸೇರ ಬಯಸುವವರ ಪೂರ್ವಪರ, ಅವರ ಗುಣ, ಚಾರಿತ್ರ್ಯವನ್ನು ಹಾಗೂ ಕಾಂಗ್ರೆಸ್ ಪಕ್ಷ ಸಿದ್ಧಾಂತಗಳಿಗೆ ಒಗ್ಗಿಕೊಳ್ಳುತ್ತಾರೆಯೇ ಎಂಬ ಅಂಶಗಳನ್ನು ಪರಾಮರ್ಶೆ ನಡೆಸಬೇಕು. ಅರ್ಹರಾಗಿದ್ದವರನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಕಾಂಗ್ರೆಸ ಪಕ್ಷ, ಸಿದ್ದಾಂತಗಳೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ದೇಶದ ಐಕ್ಯತೆಗಾಗಿ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರುತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ. ಅದನ್ನು ಯಾರೂ ಮರೆಯಬಾರದು. ಕಾಂಗ್ರೆಸ್ ಪಕ್ಷ, ಬಡವರು, ದಲಿತರು, ಕೃಷಿಕರು, ಶೋಷಿತರು ಮತ್ತು ಮಹಿಳೆಯರ ಕಾಳಜಿ ಮತ್ತು ಗೌರವ ಹೊಂದಿರುವ ಪಕ್ಷವಾಗಿದೆ. ಸಿದ್ಧಾಂತಗಳನ್ನು ಒಪ್ಪಿ ಮುನ್ನಡೆಯಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದಲ್ಲಿ ಇರುವವರಿಗೂ ಬುದ್ದಿ ಮಾತು ಹೇಳಿದ್ದಾರೆ‌.

Share This Article
Leave a Comment

Leave a Reply

Your email address will not be published. Required fields are marked *