ಚಿತ್ರದುರ್ಗ, ಸೆ.04: ನಗರದ ಹೊರವಲಯದ ಗುಡ್ಡದ ರಂಗವ್ವನಹಳ್ಳಿಯ ಜ್ಞಾನ ಗಂಗೋತ್ರಿ ಆವರಣದಲ್ಲಿರುವ ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (CIMSR) ಸ್ನಾತಕೋತ್ತರ (PG) ವೈದ್ಯಕೀಯ ಸೀಟುಗಳ ಮಂಜೂರಾತಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ನಿಯೋಜಿತ ಅಧಿಕಾರಿಗಳ ತಂಡವು ಗುರುವಾರ ಮೊದಲ ಹಂತದ ಪರಿವೀಕ್ಷಣೆ ನಡೆಸಿತು.
ಕಾಲೇಜು ಹಾಗೂ ಬೋಧನಾ ಆಸ್ಪತ್ರೆ(ಜಿಲ್ಲಾಸ್ಪತ್ರೆ) ಲಭ್ಯವಿರುವ ಮೂಲಸೌಕರ್ಯ, ಕ್ಲಿನಿಕಲ್ ಸೌಲಭ್ಯಗಳು, ಬೋಧನಾ ಆಸ್ಪತ್ರೆಯ ರೋಗಿಗಳ ಸೇವಾ ಸೌಲಭ್ಯ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಅಗತ್ಯವಿರುವ ಸೌಕರ್ಯಗಳನ್ನು ಎಮ್.ಎಂ.ಸಿ ಪರಿವೀಕ್ಷಣಾ ತಂಡವು ಸವಿಸ್ತಾರವಾಗಿ ಪರಿಶೀಲಿಸಿತು.

ರಾಜಸ್ಥಾನದ ಜೈಪುರ, ಹರಿಯಾಣ ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣಂ ವೈದ್ಯಕೀಯ ಕಾಲೇಜುಗಳ ವಿವಿಧ ವಿಭಾಗಗಳ ವಿಷಯ ಪರಿಣಿತ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಈ ತಪಾಸಣಾ ತಂಡದಲ್ಲಿದ್ದರು.
ಸಿಐಎಂಎಸ್ಆರ್ ನಿರ್ದೇಶಕರಾದ ಡಾ. ಬಿ.ವೈ. ಯುವರಾಜ್ ಅವರು ಪಿಜಿ ಸೀಟುಗಳ ಪರಿಶೀಲನೆಗೆ ಅಗತ್ಯವಿದ್ದ ಮುಖ್ಯ ದಾಖಲೆಗಳನ್ನು ತಂಡಕ್ಕೆ ಹಸ್ತಾಂತರಿಸಿದರು. ಬೋಧಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಮೇಘ ಜಿ.ಎಂ. ಅವರು ಆಸ್ಪತ್ರೆಯಲ್ಲಿ ರೋಗಿಗಳಿಗೆ ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳು ಹಾಗೂ ಪೂರಕ ದಾಖಲೆಗಳ ಮಾಹಿತಿಯನ್ನು ನೀಡಿದರು.

ಪರಿಶೀಲನೆ ವೇಳೆ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಹಾಗೂ ಅಕಾಡೆಮಿಕ್ ರಿಜಿಸ್ಟಾರ್ ಡಾ. ಚಂದ್ರಿಕಾ ಎನ್., ಜನರಲ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಡಾ. ಸಾಗರ್, ಓಬಿಜಿ ವಿಭಾಗದ ಮುಖ್ಯಸ್ಥೆ ಡಾ. ಭಾಗ್ಯಜ್ಯೋತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಶೈಕ್ಷಣಿಕ ಪ್ರಗತಿಗೆ ಪೂರಕ:
ಬರಪೀಡಿತ ಚಿತ್ರದುರ್ಗ ಜಿಲ್ಲೆಯ ವೈದ್ಯಕೀಯ ಕಾಲೇಜಿಗೆ ಸ್ನಾತಕೋತ್ತರ ಸೀಟುಗಳು ಮಂಜೂರಾಗುವುದು ಈ ಭಾಗದ ಶೈಕ್ಷಣಿಕ ಮತ್ತು ವೈದ್ಯಕೀಯ ವಲಯದ ಪ್ರಮುಖ ಅಭಿವೃದ್ಧಿಯ ಸಂಕೇತವಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುವುದರ ಜೊತೆಗೆ, ಜಿಲ್ಲೆಯ ಗ್ರಾಮೀಣ ಹಾಗೂ ಬಡ ರೋಗಿಗಳಿಗೆ ಅತ್ಯಾಧುನಿಕ ಚಿಕಿತ್ಸಾ ಸೇವೆಗಳು ದೊರೆಯಲು ಇದು ನೆರವಾಗಲಿದೆ.









