ಕೊಲ್ಕತ್ತಾ.ಆಗಸ್ಟ್.16: ಪಶ್ಚಿಮ ಬಂಗಾಳದ ಹಿರಿಯ ತೃಣಮೂಲ ಕಾಂಗ್ರೆಸ್ (TMC) ನಾಯಕ ಹಾಗೂ ಮಾಜಿ ವಿಧಾನಸಭೆ ಉಪಸಭಾಪತಿ ಅಶಿಶ್ ಬ್ಯಾನರ್ಜಿ ಅವರು ಭಾನುವಾರ ಬೆಳಗ್ಗೆ ಬಿರ್ಭೂಮ್ ಜಿಲ್ಲೆಯ ರಾಮ್ಪುರಹಾಟ್ನಲ್ಲಿರುವ ಪಕ್ಷದ ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಸಾವಿನ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಅಶಿಶ್ ಬ್ಯಾನರ್ಜಿ ಅವರ ನಿವಾಸದ ಸಮೀಪದಲ್ಲೇ ಟಿಎಂಸಿ ಪಕ್ಷದ ಕಚೇರಿ ಇದ್ದು, ಅಲ್ಲಿಯೇ ಅವರ ಮೃತದೇಹ ಪತ್ತೆಯಾಗಿದೆ. ಸ್ಥಳದಿಂದ ಆತ್ಮಹತ್ಯೆ ಪತ್ರ ಎನ್ನಲಾದ ಬರಹವೊಂದು ಕೂಡ ಪೊಲೀಸರಿಗೆ ದೊರೆತಿದೆ. ಅದರಲ್ಲಿರುವ ಮಾಹಿತಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆ ಪತ್ರದ ಸತ್ಯಾಸತ್ಯತೆ ಸೇರಿದಂತೆ ಹಲವು ಅಂಶಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
25 ವರ್ಷಗಳ ಕಾಲ ರಾಮ್ಪುರಹಾಟ್ ಪ್ರತಿನಿಧಿಸಿದ್ದ ನಾಯಕ
ಅಶಿಶ್ ಬ್ಯಾನರ್ಜಿ ಅವರು ರಾಮ್ಪುರಹಾಟ್ ವಿಧಾನಸಭಾ ಕ್ಷೇತ್ರದಿಂದ 2001ರಿಂದ 2026ರವರೆಗೆ ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದಲ್ಲಿ ಅವರು ವಿಧಾನಸಭೆ ಉಪಸಭಾಪತಿ ಸೇರಿದಂತೆ ವಿವಿಧ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಶಿಕ್ಷಣ ಮತ್ತು ಕೃಷಿ ಇಲಾಖೆಗಳ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲೂ ಅವರು ರಾಮ್ಪುರಹಾಟ್ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಧ್ರುವ ಸಾಹಾ ವಿರುದ್ಧ 24 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದ್ದರು. ಚುನಾವಣೆಯ ಬಳಿಕ ಅವರು ಸಕ್ರಿಯ ರಾಜಕೀಯದಿಂದ ಸ್ವಲ್ಪ ದೂರ ಉಳಿದಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಶಿಶ್ ಬ್ಯಾನರ್ಜಿ ಅವರ ಹಠಾತ್ ಸಾವಿನ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಮರಣೋತ್ತರ ಪರೀಕ್ಷೆ ಹಾಗೂ ಇತರ ತನಿಖಾ ವರದಿಗಳ ಬಳಿಕ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.









