ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 02 : ಹಿರಿಯ ಗಾಂಧಿವಾದಿ ಹಾಗೂ ರಾಷ್ಟ್ರನಾಯಕ ಎಸ್. ನಿಜಲಿಂಗಪ್ಪ ಅವರ ಆಪ್ತ ಸಹಚರರಾಗಿದ್ದ ಹೆಚ್. ಹನುಮಂತಪ್ಪ ಅವರಿಗೆ ನುಡಿನಮನ, ಕನ್ನಡ ಚಿತ್ರರಂಗದ ಹೆಸರಾಂತ ಹಿನ್ನೆಲೆ ಗಾಯಕಿ ಡಾ. ಎಸ್. ಜಾನಕಿ ಅವರಿಗೆ ಗಾನನಮನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಸಲ್ಲಿಸುವ ಮೂಲಕ ಸಮಾಜಕ್ಕೆ ಮಾದರಿಯಾದ ಅರ್ಥಪೂರ್ಣ ಕಾರ್ಯಕ್ರಮ ನಗರದ ಹೊರವಲಯದ ಶೀಬಾರದ ಶ್ರೀ ಗುರುಪಾದ ಮುರುಘರಾಜೇಂದ್ರರ ವನದಲ್ಲಿ ಭಾನುವಾರ ನಡೆಯಿತು.
ಪ್ರಕೃತಿ ಸೊಬಗಿನ ನಡುವೆ ನಡೆದ ಕಾರ್ಯಕ್ರಮದಲ್ಲಿ ಹೆಚ್. ಹನುಮಂತಪ್ಪ ಅವರ ಸರಳತೆ, ಗಾಂಧಿವಾದಿ ಬದುಕು ಹಾಗೂ ರಾಷ್ಟ್ರಸೇವೆಯನ್ನು ಸ್ಮರಿಸಿ ನುಡಿನಮನ ಸಲ್ಲಿಸಲಾಯಿತು. ಬಳಿಕ ಡಾ. ಎಸ್. ಜಾನಕಿ ಅವರ ಅಮರ ಗಾಯನವನ್ನು ನೆನಪಿಸುವ ಗಾನನಮನ ಕಾರ್ಯಕ್ರಮ ಸಭಿಕರನ್ನು ಭಾವಲೋಕಕ್ಕೆ ಕರೆದೊಯ್ದಿತು.
ಕಾರ್ಯಕ್ರಮದ ಆರಂಭದಲ್ಲಿ ಜಮುರಾ ಕಲಾವಿದ ಉಮೇಶ್ ಪತ್ತಾರ್ ವಚನಗೀತೆಯ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಮಧ್ಯಕರ್ನಾಟಕದ ಶಾರದಾ ಬ್ರಾಸ್ ಬ್ಯಾಂಡ್ನ ಸಂಸ್ಥಾಪಕ ಎಸ್.ವಿ. ಗುರುಮೂರ್ತಿ ಅವರು ಸ್ಯಾಕ್ಸೋಫೋನ್ನಲ್ಲಿ ‘ಬಾನಲ್ಲೂ ನೀನೇ, ಭುವಿಯಲ್ಲೂ ನೀನೇ’ ಗೀತೆಯನ್ನು ನುಡಿಸುವ ಮೂಲಕ ಗಾನನಮನಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕಲಾವಿದರಿಗೆ ಸಾವಿಲ್ಲ. ಡಾ. ಎಸ್. ಜಾನಕಿ ಅವರು ತಮ್ಮ ಸುಮಧುರ ಗಾಯನದ ಮೂಲಕ ಕೋಟ್ಯಂತರ ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ. 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಅವರು ಭಾರತೀಯ ಸಂಗೀತ ಲೋಕದ ಅಪರೂಪದ ಗಾನಸರಸ್ವತಿ ಎಂದು ಸ್ಮರಿಸಿದರು.
ಜ್ಯೋತಿಗಿರೀಶ್, ಸತ್ಯನಾರಾಯಣ, ಗೊಂಚಿಗಾರ್, ವರದಾಶಂಕರ್, ಡಾ. ಚೇತನ್ ಹಾಗೂ ಪ್ರಣತಿ, ಚಂದ್ರಕಲಾ ಹಾಗೂ ಮನು, ಕಲ್ಪಶ್ರೀ, ಶ್ರೀನಿವಾಸ್, ಯಶೋಧ ವಿಜಯಕುಮಾರ್, ಹೆಚ್.ಸಿ. ಪದ್ಮಾವತಿ, ಡಿ.ಓ. ಮುರಾರ್ಜಿ, ಲಿಂಗರಾಜ್ ಸೇರಿದಂತೆ ಹಲವು ಗಾಯಕರು ಡಾ. ಎಸ್. ಜಾನಕಿ ಅವರು ಜನಪ್ರಿಯಗೊಳಿಸಿದ ಗೀತೆಗಳನ್ನು ಹಾಡಿ ಸಂಗೀತಾಭಿಮಾನಿಗಳ ಮನಸೂರೆಗೊಂಡರು.
ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಜಿಲ್ಲಾ ವರದಿಗಾರ ಕೆ.ಪಿ. ಓಂಕಾರಮೂರ್ತಿ ಅವರಿಗೆ ಡೆಡ್ಲೈನ್ ಕಥೆಗಾಗಿ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಶಾಲು ಹೊದಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಎಸ್.ಜೆ.ಎಂ. ವಿದ್ಯಾಪೀಠದ ಆಶ್ರಯದಲ್ಲಿರುವ ಬಾಪೂಜಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಗೊಂಚಿಗಾರ್ ಅವರನ್ನು ಶಾಲೆಯಲ್ಲಿ ಮಕ್ಕಳಿಗೆ ಪಠ್ಯದ ಜೊತೆಗೆ ಪರಿಸರ ಸಂರಕ್ಷಣೆಯ ಅರಿವನ್ನು ಪ್ರಾಯೋಗಿಕವಾಗಿ ಮೂಡಿಸಿದ ಸೇವೆಗಾಗಿ ಸನ್ಮಾನಿಸಲಾಯಿತು. ಸಂಸ್ಥೆಯ ನಿವೃತ್ತ ಪ್ರಾಚಾರ್ಯ ಡಾ. ಎಸ್.ಹೆಚ್. ಪಂಚಾಕ್ಷರಿ ಹಾಗೂ ಇದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಬಳಿಕ ಬೆಸ್ಕಾಂನಲ್ಲಿ ಕರ್ತವ್ಯ ನಿರ್ವಹಿಸಿ ಇತ್ತೀಚೆಗೆ ನಿವೃತ್ತರಾದ ನಾಗಭೂಷಣ ದಂಪತಿಯವರನ್ನೂ ಗೌರವಿಸಲಾಯಿತು.
ಡಾ. ಬಸವಕುಮಾರ ಸ್ವಾಮೀಜಿ ಶಿವಯೋಗದ ಪ್ರಾತ್ಯಕ್ಷಿಕೆ ನಡೆಸಿ, ಬಸವಾದಿ ಶರಣರು ಪ್ರತಿಪಾದಿಸಿದ ಇಷ್ಟಲಿಂಗ ಧ್ಯಾನ ಹಾಗೂ ಶಿವಯೋಗದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಶ್ರಮದಾನ ನಡೆಸಿ ಸಸಿ ನೆಡುವುದು, ಕಸ ತೆರವುಗೊಳಿಸುವುದು, ಗಿಡಗಳಿಗೆ ಪಾತಿ ಮಾಡುವ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಿದರು.
ಎಸ್.ಜೆ.ಎಂ. ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ. ಗುಡಸಿ, ಗಾಯತ್ರಿ ಶಿವರಾಂ, ನಾಗರಾಜ ಸಂಗಂ, ಕವಿ ಗಂಗಾಧರಪ್ಪ, ಮಲ್ಲಿಕಾರ್ಜುನಪ್ಪ, ಗೌಳಿರುದ್ರಪ್ಪ, ವಕೀಲ ಉಮೇಶ್, ಗುತ್ತಿನಾಡು ಪ್ರಕಾಶ್, ತಿಪ್ಪೇಸ್ವಾಮಿ, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಆಯುಷ್ ಯೋಗ ಸಂಸ್ಥೆಯ ಪ್ರಸನ್ನಕುಮಾರ್ ಸೇರಿದಂತೆ ವಿವಿಧ ಮಠಾಧೀಶರು, ಕಲಾವಿದರು, ಕಲಾಭಿಮಾನಿಗಳು, ಭಕ್ತರು, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಹರ್ಷಿತ ಎನ್. ಸ್ವಾಗತಿಸಿದರು. ಅಧ್ಯಾಪಕಿ ಲತಾ ಹಾಗೂ ನಿವೃತ್ತ ಶಿಕ್ಷಕಿ ಆರ್. ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಮಹಾಂತೇಶ್ ನಿಟುವಳ್ಳಿ ವಂದಿಸಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












