ವಿಶೇಷ ವರದಿ ಗೌನಹಳ್ಳಿ ಗೊವಿಂದಪ್ಪ, ಸಂಪಾದಕರು, ಜನಾಶಯ ಪ್ರಭ, ಮೊ : 8880999001
ಅಪರೂಪದ ಬಾಂಧವ್ಯದ ಮುಕ್ತಾಯ: ಹಿರಿಯ ಪತ್ರಕರ್ತರಾದ ಜಿ.ಎಸ್. ಉಜ್ಜಿನಪ್ಪ ಮತ್ತು ಎಚ್. ಹನುಮಂತಪ್ಪ ಅವರ ಸ್ನೇಹಯಾನ
ರಾಜಕೀಯ, ಪತ್ರಿಕೋದ್ಯಮ ಹಾಗೂ ಸಾರ್ವಜನಿಕ ಜೀವನದಲ್ಲಿ ಆದರ್ಶಪ್ರಾಯವಾಗಿದ್ದ ಒಂದು ಅಪರೂಪದ ಸ್ನೇಹಪರ್ವ ಕೊನೆಗೊಂಡಿದೆ. ಹಿರಿಯ ಪತ್ರಕರ್ತರಾದ ಜಿ.ಎಸ್. ಉಜ್ಜಿನಪ್ಪ ಹಾಗೂ ಹಿರಿಯ ರಾಜಕೀಯ ಮುತ್ಸದ್ದಿ ಮತ್ತು ಪತ್ರಕರ್ತರಾದ ಎಚ್. ಹನುಮಂತಪ್ಪ ಅವರ ನಡುವಿನ ಆತ್ಮೀಯ ಬಾಂಧವ್ಯಕ್ಕೆ ಯಾವುದೇ ಪರ್ಯಾಯವಿರಲಿಲ್ಲ. ಇವರಿಬ್ಬರ ನಡುವಿನ ಅಪ್ರತಿಮ ವಿಶ್ವಾಸ ಮತ್ತು ಆತ್ಮೀಯತೆಯನ್ನು ನೋಡಿದ ಎಂತವರಿಗೂ ಬೆರಗಾಗುವಂತಿತ್ತು.
ಖಾದಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಆರಂಭವಾದ ಇವರ ಸ್ನೇಹ ಹಸಿರಾಗಿಯೇ ಉಳಿದು, ಸುಮಾರು ಐದು ದಶಕಗಳ ಸುದೀರ್ಘ ಕಾಲದವರೆಗೆ ನಿರಂತರವಾಗಿ ಸಾಗಿಬಂದಿತ್ತು.
ಪ್ರತಿದಿನ ಕನಿಷ್ಠ ಮೂರು ಬಾರಿಯಾದರೂ ಇಬ್ಬರೂ ಪರಸ್ಪರ ದೂರವಾಣಿ ಅಥವಾ ಭೇಟಿಯ ಮೂಲಕ ಮಾತನಾಡಿಕೊಳ್ಳುತ್ತಿದ್ದರು. ದಿನಂಪ್ರತಿ ಇಬ್ಬರೂ ಒಟ್ಟಿಗೆ ಸೇರಿ ರಾಜಕೀಯ ಸೇರಿದಂತೆ ಸಮಾಜದ ಎಲ್ಲಾ ಪ್ರಮುಖ ವಿಚಾರಗಳನ್ನು ಗಂಭೀರವಾಗಿ ಚರ್ಚಿಸುತ್ತಿದ್ದರು. ಇಬ್ಬರೂ ಪತ್ರಿಕೋದ್ಯಮ ರಂಗದಲ್ಲೇ ಇದ್ದುಕೊಂಡು ತಮ್ಮ ದೀರ್ಘಕಾಲದ ಒಡನಾಟದಲ್ಲಿ ಎಂದಿಗೂ ಒಬ್ಬರನ್ನೊಬ್ಬರು ದೂಷಿಸದೆ, ಪರಸ್ಪರ ಅತಿ ಹೆಚ್ಚು ಗೌರವ ಮತ್ತು ಆತ್ಮೀಯತೆಯನ್ನು ಕಾಯ್ದುಕೊಂಡು ಬಂದಿದ್ದರು.
ಸಾವಿನಲ್ಲೂ ಒಂದಾದ ಜೀವದ ಗೆಳೆಯರು
ವಿಧಿಯ ಆಟ ಎಷ್ಟು ವಿಚಿತ್ರವೆಂದರೆ, ಈ ಇಬ್ಬರು ಜೀವದ ಗೆಳೆಯರು ಸಾವಿನಲ್ಲೂ ಒಬ್ಬರನ್ನೊಬ್ಬರು ಬಿಟ್ಟಿರಲಾರದೆ ಅಗಲಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪನವರು ಸುಮಾರು 15 ದಿನಗಳ ಹಿಂದೆ ಇಹಲೋಕ ತ್ಯಜಿಸಿದ್ದರು. ಆತ್ಮೀಯ ಗೆಳೆಯನ ಅಗಲಿಕೆಯ ತೀವ್ರ ಕೊರಗಿನಲ್ಲಿದ್ದ ಎಚ್. ಹನುಮಂತಪ್ಪನವರು ಸಹ 13-07-2026ರ ಸೋಮವಾರ ತೀವ್ರ ಹೃದಯಾಘಾತದಿಂದಾಗಿ ಲೋಕವನ್ನು ತ್ಯಜಿಸಿದ್ದಾರೆ. ಜುಲೈ 6 ರಂದು ಗೌನಹಳ್ಳಿ ನಿವಾಸದಲ್ಲಿ ಜಿಎಸ್ ಉಜ್ಜಿನಪ್ಪನವರ ಕೈಲಾಸ ಶಿವಗಣಾರಾಧನೆ ಏರ್ಪಡಿಸಲಾಗಿತ್ತು, ಎಚ್ ಹನುಮಂತಪ್ಪ ಅವರು ಆ ದಿನ 12 ಗಂಟಿಯಿಂದ 2.30 ರವರೆಗೆ ಜಿಎಸ್ ಉಜ್ಜೀನಪ್ಪ ಅವರ ಭಾವಚಿತ್ರದ ಮುಂದೆ ಕುಳಿತು ಭಾವಚಿತ್ರವನ್ನು ವೀಕ್ಷಿಸುತ್ತ ಇದ್ದರು, ಬರುವವರೆಗೆ.
ಬಯಲುಸೀಮೆಗೆ ತುಂಬಲಾರದ ನಷ್ಟ
ಈ ಇಬ್ಬರು ಮಹನೀಯರ ಅಗಲಿಕೆ ಇಡೀ ಬಯಲುಸೀಮೆ ಪ್ರಾಂತ್ಯಕ್ಕೆ ದೊಡ್ಡ ಆಘಾತವನ್ನು ನೀಡಿದೆ. ಇವರ ನಿಧನದಿಂದಾಗಿ ಸಾಹಿತ್ಯ, ಕಲೆ ಹಾಗೂ ರಾಜಕೀಯ ಕ್ಷೇತ್ರದಲ್ಲಿದ್ದ ಅಪಾರವಾದ ಜ್ಞಾನದ ಬಂಡಾರ ಮತ್ತು ಅದ್ಭುತ ಪದಬಂಧಗಳ ನೆನಪುಗಳು ಮಾತ್ರ ಉಳಿದುಕೊಂಡಂತಾಗಿದೆ. ಇಬ್ಬರು ದಣಿವರಿಯದ ಪತ್ರಕರ್ತರ ಹಾಗೂ ಸ್ನೇಹಿತರ ಈ ಸುದೀರ್ಘ ಪಯಣ ಪ್ರತಿಯೊಬ್ಬರ ಮನದಲ್ಲೂ ಒಂದು ಮೌನ ಕೊರಗಾಗಿ ಉಳಿಯಲಿದೆ.

ಚಿತ್ರದುರ್ಗ ಭಾಗದ ಜನರಿಗೆ ಸ್ನೇಹ ಮತ್ತು ಬಾಂಧವ್ಯ ಎಂಬುದು ಕೇವಲ ಮಾತಲ್ಲ, ಅದೊಂದು ಜೀವದ ಒಡನಾಟ ಎನ್ನುವುದಕ್ಕೆ ಈ ಇತಿಹಾಸವೇ ಸಾಕ್ಷಿ.
ಹಿಂದೆ ಇದೇ ರೀತಿ ಚಿತ್ರದುರ್ಗದಲ್ಲಿ ನಡೆದಿದ್ದ ಮುರುಘರಾಜೇಂದ್ರ ಒಡೆಯರು ಮತ್ತು ಎಂ.ಜಯಣ್ಣ ಅವರ ನಿಧನದ ಘಟನೆ ಇಡೀ ನಾಡಿಗೆ ಮಾದರಿಯಾಗಿತ್ತು. ಜೀವದ ಗೆಳೆಯರಾಗಿದ್ದ ಅವರಿಬ್ಬರೂ ಸಹ ಒಬ್ಬರ ಅಗಲಿಕೆಯನ್ನು ತಡೆಯಲಾರದೆ ಬೆನ್ನುಬೆನ್ನಿಗೇ ಪ್ರಾಣ ಬಿಟ್ಟಿದ್ದರು.
ಹಿರಿಯ ಪತ್ರಕರ್ತರಾದ ಜಿ.ಎಸ್. ಉಜ್ಜಿನಪ್ಪ ಮತ್ತು ರಾಜಕೀಯ ಮುತ್ಸದ್ದಿ ಎಚ್. ಹನುಮಂತಪ್ಪ ಅವರ ವಿಷಯದಲ್ಲೂ ಅದೇ ಇತಿಹಾಸ ಮರುಕಳಿಸಿದೆ. ಐವತ್ತು ವರ್ಷಗಳ ಕಾಲ ಹಾಲೂ ಜೇನಿನಂತೆ ಬಾಳಿದ ಈ ಇಬ್ಬರು ಮಹನೀಯರು, ಸಾವಿನಲ್ಲೂ ಒಬ್ಬರನ್ನೊಬ್ಬರು ಬಿಟ್ಟಿರಲಾರದೆ ಸಾಗಿರುವುದು ಈ ಕೋಟೆನಾಡಿನ ಸ್ನೇಹದ ಪರಾಕಾಷ್ಠೆಯನ್ನು ಮತ್ತು ಇಲ್ಲಿನ ಮಣ್ಣಿನ ಗುಣವನ್ನು ಜಗತ್ತಿಗೆ ಮತ್ತೊಮ್ಮೆ ಪ್ರತಿಬಿಂಬಿಸುತ್ತದೆ. ಈ ಭಾಗದ ಜನ ಸ್ನೇಹಕ್ಕೆ ಎಷ್ಟು ಮಹತ್ವ ಕೊಡುತ್ತಾರೆ ಮತ್ತು ಎಂತಹ ಜೀವದ ಗೆಳೆತನವನ್ನು ಇಲ್ಲಿ ಪೋಷಿಸುತ್ತಾರೆ ಎಂಬುದಕ್ಕೆ ಇಂತಹ ಘಟನೆಗಳೇ ಅತ್ಯಂತ ಧೀಮಂತ ಉದಾಹರಣೆಗಳು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










