ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದ ತೆಂಗಿನಕಾಯಿ ಬೆಲೆ ಇದೀಗ ಇಳಿಕೆಯ ಹಾದಿ ಹಿಡಿದಿದ್ದು, ಗ್ರಾಹಕರಿಗೆ ಕೊಂಚ ನೆಮ್ಮದಿ ತಂದಿದೆ. ರಾಜ್ಯದಲ್ಲಿ ಉತ್ತಮ ಇಳುವರಿ ಹಾಗೂ ತಮಿಳುನಾಡಿನಿಂದ ಹೆಚ್ಚಿನ ಪ್ರಮಾಣದಲ್ಲಿ ತೆಂಗಿನಕಾಯಿ ಪೂರೈಕೆಯಾಗುತ್ತಿರುವ ಪರಿಣಾಮ ಮಾರುಕಟ್ಟೆಯಲ್ಲಿ ಬೆಲೆ ಗಣನೀಯವಾಗಿ ಕುಸಿದಿದೆ.ವ್ಯಾಪಾರಿಗಳ ಮಾಹಿತಿ ಪ್ರಕಾರ, ಈ ಬಾರಿ ಉತ್ತಮ ಮಳೆಯೊಂದಿಗೆ ತೆಂಗಿನ ಫಸಲು ಹೆಚ್ಚಾಗಿರುವುದರಿಂದ ರಾಜ್ಯದ ವಿವಿಧ ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಾಯಿ ಬರುತ್ತಿದೆ. ಜೊತೆಗೆ ನೆರೆ ರಾಜ್ಯ ತಮಿಳುನಾಡಿನಿಂದಲೂ ದೊಡ್ಡ ಪ್ರಮಾಣದಲ್ಲಿ ತೆಂಗಿನಕಾಯಿ ಪೂರೈಕೆಯಾಗುತ್ತಿರುವುದು ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಿದೆ.
ಇದರೊಂದಿಗೆ ತೆಂಗಿನಪುಡಿ (ಕೋಕೊನಟ್ ಪೌಡರ್) ಉತ್ಪಾದನಾ ಘಟಕಗಳು ಖರೀದಿಯನ್ನು ಮಿತಿಗೊಳಿಸಿರುವುದು ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವುದೂ ದರ ಇಳಿಕೆಗೆ ಕಾರಣವಾಗಿದೆ. ಈಗಾಗಲೇ ಕಾರ್ಖಾನೆಗಳಲ್ಲಿ ಸಾಕಷ್ಟು ಪ್ರಮಾಣದ ದಾಸ್ತಾನು ಇರುವುದರಿಂದ ಹೊಸ ಖರೀದಿ ನಿಧಾನಗೊಂಡಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಒಂದಕ್ಕೆ 50ರಿಂದ 60 ರೂಪಾಯಿವರೆಗೆ ಮಾರಾಟವಾಗುತ್ತಿದ್ದ ತೆಂಗಿನಕಾಯಿ, ಕಳೆದ ಕೆಲ ತಿಂಗಳುಗಳಿಂದ 25ರಿಂದ 30 ರೂಪಾಯಿಗೆ ಲಭ್ಯವಾಗುತ್ತಿದೆ. ಇದರಿಂದ ಗೃಹಿಣಿಯರು ಹಾಗೂ ಸಾಮಾನ್ಯ ಗ್ರಾಹಕರಿಗೆ ಖರೀದಿಯಲ್ಲಿ ಸ್ವಲ್ಪ ಮಟ್ಟಿನ ಪರಿಹಾರ ಸಿಕ್ಕಂತಾಗಿದೆ.
ಆದರೆ ತೆಂಗಿನಕಾಯಿ ಬೆಲೆ ಇಳಿದಿದ್ದರೂ ಕೊಬ್ಬರಿ ಮತ್ತು ಎಳನೀರು ದರ ಮಾತ್ರ ಇನ್ನೂ ಗಗನಕ್ಕೇರಿದೆ. ರಾಜ್ಯದ ಅತಿದೊಡ್ಡ ಕೊಬ್ಬರಿ ಮಾರುಕಟ್ಟೆಯಾದ ತುಮಕೂರು ಜಿಲ್ಲೆಯ ತಿಪಟೂರು ಎಪಿಎಂಸಿಯಲ್ಲಿ ಗುಣಮಟ್ಟದ ಕೊಬ್ಬರಿ ಪ್ರತಿ ಕ್ವಿಂಟಾಲ್ಗೆ 28 ಸಾವಿರದಿಂದ 32 ಸಾವಿರ ರೂಪಾಯಿವರೆಗೆ ಮಾರಾಟವಾಗುತ್ತಿದೆ.
ಇನ್ನು ಬೇಸಿಗೆ ಕಡಿಮೆಯಾಗಿದ್ದರೂ ಎಳನೀರಿಗೆ ಬೇಡಿಕೆ ಕಡಿಮೆಯಾಗಿಲ್ಲ. ಉತ್ತಮ ಗುಣಮಟ್ಟದ ಎಳನೀರು ಒಂದು 60ರಿಂದ 70 ರೂಪಾಯಿವರೆಗೆ ಮಾರಾಟವಾಗುತ್ತಿದ್ದು, ಅದರ ಬೆಲೆಯಲ್ಲಿ ಸದ್ಯ ಯಾವುದೇ ಇಳಿಕೆ ಕಂಡುಬಂದಿಲ್ಲ.
ಮಾರುಕಟ್ಟೆ ತಜ್ಞರ ಪ್ರಕಾರ, ಮುಂದಿನ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ತೆಂಗಿನಕಾಯಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದ್ದು, ಆ ವೇಳೆಗೆ ಬೆಲೆಯಲ್ಲಿ ಮತ್ತೆ ಸ್ವಲ್ಪ ಏರಿಕೆಯಾಗಬಹುದು. ಅಲ್ಲಿಯವರೆಗೆ ಮಾರುಕಟ್ಟೆಯಲ್ಲಿ ಇದೇ ದರ ಮುಂದುವರಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

















