ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಜು. 01 : ಅಲೋಪತಿ ಪದ್ಧತಿಯು ಕೇವಲ ಲಕ್ಷಣ ಆಧಾರಿತ ಚಿಕಿತ್ಸೆಯಾಗಿದೆ ಇದರಲ್ಲಿ ಯಾವುದೇ ರೋಗದ ಲಕ್ಷಣಗಳು ಕಾಣಿಸದಿದ್ದರೆ ಅಲೋಪತಿಯಲ್ಲಿ ಅದಕ್ಕೆ ಚಿಕಿತ್ಸೆ ಇಲ್ಲ. ಆದರೆ ಆಯುರ್ವೇದವು ಕೇವಲ ರೋಗ ನಿವಾರಣೆಯ ಬಗ್ಗೆ ಮಾತನಾಡುವುದಿಲ್ಲ. ಅದು ಮಾನವ ದೇಹವನ್ನು ಒಂದು ಸಮಗ್ರ ವ್ಯವಸ್ಥೆಯಾಗಿ ನೋಡುತ್ತದೆ. ಆಯುರ್ವೇದ ಎಂದರೆ ಆರೋಗ್ಯದ ವೃದ್ಧಿ ಮತ್ತು ಆಯುಷ್ಯದ ರಕ್ಷಣೆ,” ಎಂದು ಈಶಾ ಫೌಂಡೇಶನ್ ಸಂಸ್ಥಾಪಕ ಶ್ರೀ ಸದ್ಗುರು ಜಗ್ಗಿ ವಾಸುದೇವ್ ವಿವರಿಸಿದರು.
ನಗರದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲೋಪತಿ ಮತ್ತು ಆಯುರ್ವೇದದ ನಡುವಿನ ವ್ಯತ್ಯಾಸವನ್ನು ವಿಶ್ಲೇಷಿಸಿ ಮಾತನಾಡಿದ ಅವರು. ಅಲೋಪತಿ ವೈದ್ಯಕೀಯ ಪದ್ಧತಿಯು ಕೇವಲ ರೋಗದ ಲಕ್ಷಣಗಳಿಗೆ ತಕ್ಕಂತೆ ಚಿಕಿತ್ಸೆ ನೀಡುವ ವ್ಯವಸ್ಥೆಯಾಗಿದ್ದರೆ, ಆಯುರ್ವೇದವು ಜೀವನ ಶೈಲಿ ಮತ್ತು ದೇಹದ ಮೂಲ ವ್ಯವಸ್ಥೆಯನ್ನೇ ಸರಿಪಡಿಸುವ ವಿಶಾಲವಾದ ದೃಷ್ಟಿಕೋನವನ್ನು ಹೊಂದಿದೆ,” ಅಲೋಪತಿ ಪದ್ಧತಿಯು ಸಂಪೂರ್ಣವಾಗಿ ನಿಯಮಾವಳಿಗಳಿಗೆ ಒಳಪಟ್ಟಿದ್ದು, ಪ್ರಯೋಗಗಳಿಂದ ಸಾಬೀತಾದ ರಸಾಯನಶಾಸ್ತ್ರದ ಆಧಾರದ ಮೇಲೆ ಕೆಲಸ ಮಾಡುತ್ತದೆ. ಇದು ಪ್ರಮುಖವಾಗಿ ಬಾಹ್ಯ ರೋಗ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡುತ್ತದೆ. ನಿಮ್ಮ ದೇಹದಲ್ಲಿ ಯಾವುದೇ ನೋವು ಅಥವಾ ಕಾಯಿಲೆಯ ಲಕ್ಷಣಗಳು ಕಾಣಿಸದಿದ್ದರೆ, ಅಲೋಪತಿ ವ್ಯವಸ್ಥೆಗೆ ರೋಗ ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ಜಗತ್ತಿನಲ್ಲಿ ಯಾವುದೇ ರೋಗದ ಲಕ್ಷಣಗಳಿಲ್ಲದೆ ಇದ್ದಕ್ಕಿದ್ದಂತೆ ಸಾವನ್ನಪ್ಪುವ ಎಷ್ಟೋ ಜನರಿದ್ದಾರೆ, ಅಂತಹ ಸಂದರ್ಭಗಳಲ್ಲಿ ಈ ಪದ್ಧತಿ ಮುಂಚಿತವಾಗಿ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ವಿವರಿಸಿದರು.
ಆಯುರ್ವೇದ ಎನ್ನುವುದು ಕೇವಲ ಕಾಯಿಲೆ ಬಂದಾಗ ತೆಗೆದುಕೊಳ್ಳುವ ಔಷಧಿಯಲ್ಲ. ಅದು ‘ಆಯುಸ್ಸು’ ಮತ್ತು ‘ವೇದ’ ಎಂಬ ಪದಗಳಿಂದ ಬಂದಿರುವ ಜೀವನದ ವಿಜ್ಞಾನವಾಗಿದೆ. ದೇಹದ ಆಂತರಿಕ ಸಮತೋಲನ, ಪ್ರಕೃತಿ ಮತ್ತು ಜೈವಿಕ ವ್ಯವಸ್ಥೆಯನ್ನು ಮೂಲದಿಂದಲೇ ಸರಿಪಡಿಸುವ ಶಕ್ತಿ ಇದಕ್ಕೆ ಇದೆ ಎಂದು ಅವರು ಪ್ರತಿಪಾದಿಸಿ “ಜಗತ್ತಿನಲ್ಲಿ ತಾವೇ ಅತ್ಯಂತ ಒಳ್ಳೆಯವರು ಎಂದು ಭಾವಿಸುವವರಿಂದಲೇ ಇಂದು ದೊಡ್ಡ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ನಮಗೆ ಇಂದು ಕೇವಲ ‘ಒಳ್ಳೆಯವರು’ ಎಂದು ಕರೆಸಿಕೊಳ್ಳುವವರಿಗಿಂತ ಆನಂದಮಯ ಹಾಗೂ ವಿವೇಕಯುತವಾಗಿ ಬದುಕುವ ಮನುಷ್ಯರ ಅವಶ್ಯಕತೆ ಹೆಚ್ಚಾಗಿದೆ,” “ನಾನು ಒಳ್ಳೆಯವನು ಎಂದು ಭಾವಿಸುವ ಭಾರತೀಯ ಮತ್ತು ನಾನು ಒಳ್ಳೆಯವನು ಎಂದು ಭಾವಿಸುವ ಪಾಕಿಸ್ತಾನಿ ಇಬ್ಬರೂ ಪರಸ್ಪರ ಹೋರಾಡುತ್ತಾರೆ. ನಾವು ಎಷ್ಟು ಒಳ್ಳೆಯವರಾಗಲು ಪ್ರಯತ್ನಿಸುತ್ತೇವೆಯೋ, ಅಷ್ಟು ಹೆಚ್ಚು ಸಂಘರ್ಷಗಳು ಹುಟ್ಟಿಕೊಳ್ಳುತ್ತವೆ. ಸಮಾಜಕ್ಕೆ ಈಗ ಬೇಕಿರುವುದು ಒಳ್ಳೆಯತನದ ಹಣೆಪಟ್ಟಿ ಹೊತ್ತವರಲ್ಲ, ಬದಲಿಗೆ ಆನಂದದಿಂದ ಇರುವ ಸಂವೇದನಾಶೀಲ ಮಾನವರು. ಮನುಷ್ಯ ಆನಂದದ ಸ್ಥಿತಿಯಲ್ಲಿದ್ದಾಗ ಯಾರಿಗೂ ಕೆಟ್ಟದ್ದನ್ನು ಮಾಡಲು ಬಯಸುವುದಿಲ್ಲ. ಆದರೆ, ತಾನು ದುಃಖದಲ್ಲಿದ್ದಾಗ ಮಾತ್ರ ಇತರರಿಗೆ ಹಾನಿ ಮಾಡಲು ಮುಂದಾಗುತ್ತಾನೆ. ಆದ್ದರಿಂದ, ಸದಾ ಸಂತೋಷ ಹಾಗೂ ಶಾಂತಿಯಿಂದ ಇರುವುದೇ ಮನುಷ್ಯನ ಮೊದಲ ಜವಾಬ್ದಾರಿಯಾಗಿದೆ,” ಎಂದರು.
ತಂತ್ರಜ್ಞಾನವಾಗಲಿ, ಉಪಕರಣವಾಗಲಿ ಅದು ಯಾರ ಕೈಯಲ್ಲಿದೆ ಮತ್ತು ಅದನ್ನು ಹೇಗೆ ಬಳಸಲಾಗುತ್ತಿದೆ ಎಂಬುದರ ಮೇಲೆ ಅದರ ಗುಣ ನಿರ್ಧಾರವಾಗುತ್ತದೆ. ಕೃತಕ ಬುದ್ಧಿಮತ್ತೆಯ ವಿಷಯದಲ್ಲೂ ಇದೇ ನಿಯಮ ಅನ್ವಯಿಸುತ್ತದೆ,” “ಆಧ್ಯಾತ್ಮ ಎಂದರೆ ಹೊರಗಿನ ಅನ್ವೇಷಣೆಯಲ್ಲ, ಅದು ನಮ್ಮೊಳಗಿನ ಪಯಣ. ಕಣ್ಣೆದುರಿನ ಮರವನ್ನು ನಾವು ನೋಡುವಾಗಲೂ, ಆ ದೃಶ್ಯದ ಅನುಭವ ನಮ್ಮೊಳಗೇ ಆಗುತ್ತಿರುತ್ತದೆ. ಜಗತ್ತಿನ ಪ್ರತಿ ಯೊಂದು ಅನುಭವವೂ ನಮ್ಮ ಒಳ ಮನಸ್ಸಿನಲ್ಲೇ ಘಟಿಸುತ್ತದೆ. ಹೀಗಾಗಿ ಆಧ್ಯಾತ್ಮಿಕ ಪ್ರಕ್ರಿಯೆಯು ಸಂಪೂರ್ಣವಾಗಿ ನಮ್ಮ ಅಂತರಾಳಕ್ಕೆ ಸಂಬಂಧಿಸಿದ್ದು,” ಕಲೆ, ಸಂಗೀತ ಮತ್ತು ಕ್ರೀಡೆಗಳು ನಮ್ಮಿಂದ ಇಂತಹ ಪರಮಾವಧಿಯ ತೊಡಗಿಸಿಕೊಳ್ಳುವಿಕೆಯನ್ನು ಬೇಡುತ್ತವೆ. ಈ ಆಳವಾದ ತೊಡಗಿಸಿಕೊಳ್ಳುವಿಕೆಯೇ ಆಧ್ಯಾತ್ಮ,” ಎಂದು ಸ್ಪಷ್ಟಪಡಿಸಿದರು.
ಚಿತ್ರದುರ್ಗದ ಮಾದಾರ ಚನ್ನಯ್ಯ ಶ್ರೀಗಳ ಸನ್ನಿಧಿಯಲ್ಲಿ ನಡೆದ ಈ ಸಂವಾದದಲ್ಲಿ ಸ್ಥಳೀಯ ವೈದ್ಯಕೀಯ ಕ್ಷೇತ್ರದ ತಜ್ಞರು, ಬುದ್ಧಿಜೀವಿಗಳು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು. ಆಧುನಿಕ ಜೀವನಶೈಲಿಯ ಒತ್ತಡದಿಂದ ಉಂಟಾಗುವ ಕಾಯಿಲೆಗಳಿಗೆ ಸಾಂಪ್ರದಾಯಿಕ ಹಾಗೂ ಆಯುರ್ವೇದ ಪದ್ಧತಿಗಳ ಅಳವಡಿಕೆ ಹೇಗೆ ಸಹಕಾರಿ ಎಂಬುದರ ಕುರಿತು ಸದ್ಗುರುಗಳು ಸಭಿಕರ ಜತೆ ದೀರ್ಘವಾಗಿ ಚರ್ಚಿಸಿದರು.
ವೇಧಿಕೆ ಕಾರ್ಯಕ್ರಮದಲ್ಲಿ ಮುರುಘಾ ಮಠದ ಡಾ ಬಸವಕುಮಾರ ಸ್ವಾಮೀಜಿ, ಅಥಣಿ ಶಿವಯೋಗಾಶ್ರಮದ ಶಿವಬಸವ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಕಬೀರಾನಂದ ಮಠದ ಶಿವಲಿಂಗಾನಂದ ಶ್ರೀಗಳು ಉಪಸ್ಥಿತರಿದ್ದರು.






















