Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸೋಮವಾರದಿಂದ ಜಿಲ್ಲೆಯಾದ್ಯಂತ ಕುಡಿಯುವ ನೀರು ಸರಬರಾಜು ಸಮೀಕ್ಷೆ ಆರಂಭ : ಜಿ.ಪಂ ಸಿಇಒ ಡಾ.ಎಸ್.ಆಕಾಶ್

---Advertisement---

ಚಿತ್ರದುರ್ಗ. ಜೂನ್18 : ಕೇಂದ್ರ ಪುರಸ್ಕøತ ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಮ  ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈ ಕುರಿತು ಪ್ರಸ್ತುತ ನೀರು ಸರಬರಾಜಿನ ವಾಸ್ತವ ಸ್ಥಿತಿ ತಿಳಿಯಲು ಮುಂಬರುವ ಸೋಮವಾರದಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಹಾಗೂ ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದಂತೆ ಸಮೀಕ್ಷೆ ಆರಂಭವಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ತಿಳಿಸಿದರು.

 

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕುಡಿಯುವ ನೀರು ಮತ್ತು ಕಸ ವಿಲೇವಾರಿ ಸಮೀಕ್ಷೆ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

 

ಕಸ ವಿಲೇವಾರಿ ಸಮೀಕ್ಷೆಯನ್ನು ಎನ್.ಆರ್.ಎಲ್.ಎಂ ಯೋಜನೆಯಡಿ ನಿಯೋಜಿತರಾಗಿರುವ ಎಂಬಿಕೆಗಳು ನಡೆಸಲಿದ್ದಾರೆ. ಕುಡಿಯುವ ನೀರಿನ ಸಮೀಕ್ಷೆಯನ್ನು ನರೇಗಾ ಇಂಜಿನಿಯರ್‍ಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ನೀರು ಸರಬರಾಜು ಇಲಾಖೆಯ ಇಂಜಿನಿಯರ್‍ಗಳು ಜಂಟಿಯಾಗಿ ಕೈಗೊಳ್ಳಲಿದ್ದಾರೆ. ಈ ಎರಡೂ ಸಮೀಕ್ಷೆಗಳು ಸುಗಮವಾಗಿ ಮತ್ತು ಯಶಸ್ವಿಯಾಗಿ ನಡೆಯುವಂತೆ ಪಿಡಿಒಗಳು ಖುದ್ದಾಗಿ ನಿಂತು ಮೇಲ್ವಿಚಾರಣೆ ನಡೆಸಬೇಕು ಮತ್ತು ಇಡೀ ಪ್ರಕ್ರಿಯೆಯನ್ನು ತಾ.ಪಂ ಇಒ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್‍ಗಳು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಸೂಚಿಸಿದರು.

 

ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಕಸ ಸಂಗ್ರಹಿಸುವ ವಾಹನಗಳು ದುರಸ್ತಿಯಲ್ಲಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿಇಒ ಡಾ.ಆಕಾಶ್, ಮಾರ್ಚ್ ತಿಂಗಳಲ್ಲಿ ದಾಖಲೆ ಪ್ರಮಾಣದ ತೆರಿಗೆ ವಸೂಲಾತಿಯಾಗಿದ್ದು, ಪಂಚಾಯಿತಿಗಳ ಬಳಿ ಹಣದ ಲಭ್ಯತೆ ಇರುವುದರಿಂದ, ಹಳೇ ಬಾಕಿ ತೀರಿಸುವುದಕ್ಕಿಂತಲೂ ಮಳೆಗಾಲ ಆರಂಭವಾಗಿರುವ ಕಾರಣ ಕಸದ ವಾಹನಗಳ ದುರಸ್ತಿಗೆ ಮೊದಲ ಆದ್ಯತೆ ನೀಡಬೇಕು. ಈ ವಾರಾಂತ್ಯದೊಳಗೆ ಜಿಲ್ಲೆಯ ಎಲ್ಲಾ ಕಸದ ಗಾಡಿಗಳನ್ನು ಕಡ್ಡಾಯವಾಗಿ ದುರಸ್ತಿ ಮಾಡಿಸಬೇಕು. ಯಾವುದೇ ವಾಹನಗಳ ತೂಕ ಪರೀಕ್ಷಿಸುವಾಗ ಚಾಲಕನನ್ನು ಕೆಳಗಿಳಿಸಿ, ಖಾಲಿ ಗಾಡಿಯ ತೂಕವನ್ನು ಕಡ್ಡಾಯವಾಗಿ ಜಿಪಿಎಸ್ ಫೋಟೋ ಸಮೇತ ಅಪ್‍ಲೋಡ್ ಮಾಡಬೇಕು. ಇನ್ಮುಂದೆ ಸಮೀಕ್ಷೆ ಸೇರಿದಂತೆ ಯಾವುದೇ ಪೋಟೋಗಳನ್ನು ಕಳುಹಿಸುವಾಗ ಜಿಪಿಎಸ್ ಲೋಕೇಶನ್ ಇರುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದರು.

 

ಚಿತ್ರದುರ್ಗ ಅತ್ಯಂತ ಕಡಿಮೆ ಮಳೆ ಪಡೆಯುವ ಜಿಲ್ಲೆಯಾಗಿದ್ದು, ಇಲ್ಲಿ ಯಾವುದೇ ಪ್ರಮುಖ ನದಿಗಳಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದ ಜಲಜೀವನ್ ಮಿಷನ್ ಯೋಜನೆಗಳ ಯಶಸ್ಸಿಗೆ ನೀರಿನ ಸಮೀಕ್ಷೆ ಅತ್ಯಗತ್ಯವಾಗಿದೆ. ಜೆಜೆಎಂ ಯೋಜನೆಯಡಿಯಲ್ಲಿ ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀಟರ್ ನೀರು ಕೊಡುವ ಗುರಿ ಹೊಂದಲಾಗಿದೆ. ಪಂಚಾಯಿತಿಯ ಒಟ್ಟು ಜನಸಂಖ್ಯೆ ಮತ್ತು ಓವರ್ ಹೆಡ್ ಟ್ಯಾಂಕ್ ಸಾಮಥ್ರ್ಯದ ಆಧಾರದ ಮೇಲೆ ಪ್ರಸ್ತುತ ಎಷ್ಟು ನೀರು ಸರಬರಾಜು ಆಗುತ್ತಿದೆ ಮತ್ತು 55 ಲೀಟರ್ ತಲುಪಲು ಇನ್ನು ಎಷ್ಟು ಕೊರತೆ ಇದೆ ಎಂಬುದನ್ನು ಲೆಕ್ಕ ಹಾಕುವ ಸಮೀಕ್ಷೆ ಪ್ರಕ್ರಿಯೆ ಇದಾಗಿದೆ ಎಂದು ಎಂದರು.

 

ಜಿಲ್ಲೆಯಲ್ಲಿ ನೀರಿನ ಮತ್ತು ಸ್ವಚ್ಛತೆಯ ಕೊರತೆಗಳನ್ನು ನೀಗಿಸಲು ಕೆಎಂಇಆರ್‍ಸಿ ಅಡಿಯಲ್ಲಿ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ದುರಸ್ತಿಯಲ್ಲಿರುವ ಸುಮಾರು 200 ಓಎಚ್‍ಟಿಗಳನ್ನು ತಕ್ಷಣ ದುರಸ್ತಿಗೊಳಿಸುವುದು ಹಾಗೂ ಕುಸಿಯುವ ಹಂತದಲ್ಲಿರುವ 100 ಟ್ಯಾಂಕ್‍ಗಳನ್ನು ತೆರವುಗೊಳಿಸುವುದು, ನೀರಿನ ನಿಖರ ಬಳಕೆಯನ್ನು ಅಳೆಯಲು ಎಲ್ಲಾ ಓಎಚ್‍ಟಿಗಳಿಗೆ ಬಲ್ಕ್ ಫ್ಲೋ ಮೀಟರ್ ಅಳವಡಿಸುವುದು, ಊರಿನ ಚರಂಡಿ ನೀರು ಹೊರಹೋಗುವ ಜಾಗಗಳಲ್ಲಿ ಇನ್‍ಲೈನ್ ಟ್ರೀಟ್‍ಮೆಂಟ್ ಅಥವಾ ಸೋಕ್ ಪಿಟ್ ನಿರ್ಮಿಸುವುದು ಮತ್ತು ಕಸ ವಿಲೇವಾರಿ ಘಟಕಗಳಿಗೆ ಕಾಂಪೌಂಡ್ ಗೋಡೆ, ಸೂಕ್ತ ರಸ್ತೆ ಸಂಪರ್ಕ, ವಿದ್ಯುತ್, ಶೌಚಾಲಯ ಹಾಗೂ ಬೋರ್‍ವೆಲ್ ಸೌಕರ್ಯ ಕಲ್ಪಿಸಬಹುದಾಗಿದೆ ಎಂದರು.

 

ಕಳೆದ 10 ವರ್ಷಗಳಲ್ಲಿ ಕುಡಿಯುವ ನೀರಿಗಾಗಿ ಜಿಲ್ಲೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಖರ್ಚಾಗಿದೆ. ಇದರ ಸತ್ಫಲ ಜನರಿಗೆ ಸಿಗಬೇಕಾದರೆ ಸದ್ಯದ ವಾಸ್ತವ ಸ್ಥಿತಿ ಅರಿಯುವುದು ಮುಖ್ಯ. ಆದ್ದರಿಂದ ಈ ಸಮೀಕ್ಷೆಯನ್ನು ಎಲ್ಲಾ ಅಧಿಕಾರಿಗಳು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ಡಾ. ಆಕಾಶ್ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

 

ಸಂಪನ್ಮೂಲ ವ್ಯಕ್ತಿ ಸಿಡಿಡಿ ಎನ್‍ಜಿಓ ಸಂಸ್ಥೆಯ ಕಣ್ಣನ್ ತರಬೇತಿ ನೀಡಿದರು. ಈ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಬಾಬು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಅಮರನಾಥ್ ಜೈನ್, ಜಲಜೀವನ್ ಮಿಷನ್ ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂಜುನಾಥ್ ನಾಡರ್,  ಜಿಲ್ಲಾ ಸಮಾಲೋಚಕರಾದ ಕಿರಣ್ ಪಾಟೀಲ್, ಚಂದ್ರಕಾಂತ್, ಯಲ್ಲಪ್ಪ, ಗೀತಾಲಕ್ಷ್ಮೀ  ಸೇರಿದಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ನರೇಗಾ ತಾಂತ್ರಿಕ ಸಹಾಯಕ ಅಭಿಯಂತರರು, ಬಿಲ್ ಕಲೆಕ್ಟರ್ಸ್, ದ್ವಿದರ್ಜೆ ಸಹಾಯಕರು ಹಾಗೂ ಸಪೋರ್ಟ್ ಇಂಜಿನಿಯರ್ಸ್ ಇದ್ದರು.

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now