ಚಿತ್ರದುರ್ಗ: ಬಿರುಗಾಳಿ, ಮಳೆ ಅಥವಾ ತಾಂತ್ರಿಕ ಕಾರಣಗಳಿಂದಾಗಿ ಪ್ರಮುಖ ಹೈ-ವೋಲ್ಟೇಜ್ ಪ್ರಸರಣ ಮಾರ್ಗಗಳಲ್ಲಿ ಯಾವುದೇ ಸಮಸ್ಯೆಯುಂಟಾದರೂ, ಸಾರ್ವಜನಿಕರಿಗೆ ಹಾಗೂ ಕೈಗಾರಿಕೆಗಳಿಗೆ ಒಂದು ಸೆಕೆಂಡ್ ಸಹ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಜೀವದ ಹಂಗು ತೊರೆದು ಕೆಲಸ ಮಾಡುವ ಅತ್ಯಂತ ಜವಾಬ್ದಾರಿಯುತ ತಾಂತ್ರಿಕ ವಿಭಾಗವೊಂದು ಚಿತ್ರದುರ್ಗದಲ್ಲಿದೆ. ಅದೇ ಹಾಟ್ ಲೈನ್ ಉಪವಿಭಾಗ.
ಸಾಮಾನ್ಯವಾಗಿ ವಿದ್ಯುತ್ ಲೈನ್ಗಳಲ್ಲಿ ಯಾವುದೇ ರಿಪೇರಿ ಕೆಲಸ ಮಾಡಬೇಕಾದರೂ ಇಡೀ ಲೈನ್ನ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ (Line Clear – LC ಪಡೆದು) ಕೆಲಸ ಮಾಡಲಾಗುತ್ತದೆ. ಆದರೆ ಚಿತ್ರದುರ್ಗದ ಹಾಟ್ ಲೈನ್ ಉಪವಿಭಾಗದ ತಂತ್ರಜ್ಞರು ವಿದ್ಯುತ್ ಪ್ರವಾಹ ನಿರಂತರವಾಗಿ ಹರಿಯುತ್ತಿರುವಾಗಲೇ, ಅಂದರೆ ‘ಲೈವ್’ ಇರುವಾಗಲೇ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಾರೆ. ಸಾರ್ವಜನಿಕರಿಗೆ ಯಾರಿಗೂ ವಿದ್ಯುತ್ ವ್ಯತ್ಯಯವಾಗದಂತೆ ಮುಂಜಾಗ್ರತಾ ಕ್ರಮಗಳೊಂದಿಗೆ ಕೆಲಸ ಮಾಡುವುದು ಈ ತಂಡದ ಅತಿ ದೊಡ್ಡ ವೈಶಿಷ್ಟ್ಯವಾಗಿದೆ.
ಈ ಉಪವಿಭಾಗವು ನಿರ್ವಹಿಸುವ ವಿದ್ಯುತ್ ಮಾರ್ಗಗಳು ಸಾಮಾನ್ಯವಾದವುಗಳಲ್ಲ. ಬರೋಬ್ಬರಿ 220 KV ವೋಲ್ಟೇಜ್ ಸಾಮರ್ಥ್ಯದ ಪ್ರಮುಖ ಹೈ-ವೋಲ್ಟೇಜ್ ಪ್ರಸರಣ ಮಾರ್ಗಗಳಲ್ಲಿ ಇವರು ಕಾರ್ಯನಿರ್ವಹಿಸುತ್ತಾರೆ. ಇಂತಹ ತೀವ್ರತೆಯ ವಿದ್ಯುತ್ ಮಾರ್ಗಗಳಲ್ಲಿ ಬಿರುಗಾಳಿ-ಮಳೆಗೆ ಜಂಪರ್ ಕಟ್ ಆದಾಗ ಅಥವಾ ಕನೆಕ್ಷನ್ ಸಡಿಲಗೊಂಡು ‘ಹಾಟ್ ಸ್ಪಾಟ್’ ಉಂಟಾದಾಗ ಈ ಉಪವಿಭಾಗದ ಪಾತ್ರ ಅತ್ಯಂತ ನಿರ್ಣಾಯಕವಾಗುತ್ತದೆ. ಕೇಬಲ್ ಕಟ್ ಆಗದಂತೆ ತಡೆದು, ಅತ್ಯಂತ ಜಾಣ್ಮೆಯಿಂದ ಲೈವ್ ನಲ್ಲಿಯೇ ಇವರು ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ.
16 ಕೋಟಿ ವೆಚ್ಚದ ಅತ್ಯಾಧುನಿಕ ತಂತ್ರಜ್ಞಾನ
ಇಂತಹ ಅಪಾಯಕಾರಿ ಮತ್ತು ಅತ್ಯಂತ ಸಂಕೀರ್ಣವಾದ ಕೆಲಸವನ್ನು ನಿರ್ವಹಿಸಲು ಈ ವಿಭಾಗಕ್ಕೆ ಭಾರಿ ಸೌಲಭ್ಯಗಳನ್ನು ಒದಗಿಸಲಾಗಿದೆ. ಸುಮಾರು 16 ಕೋಟಿ ರೂಪಾಯಿ ವೆಚ್ಚದ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ವಿಶೇಷ ಲಾರಿಯನ್ನು ಈ ತಂಡ ಹೊಂದಿದ್ದು, ಇದರಲ್ಲಿ ಲೈವ್ ಲೈನ್ ಕೆಲಸಕ್ಕೆ ಬೇಕಾಗುವ ಎಲ್ಲಾ ರೀತಿಯ ಹೈಟೆಕ್ ಸಲಕರಣೆಗಳು ಮತ್ತು ಸುರಕ್ಷತಾ ಕವಚಗಳು ಸದಾ ಸನ್ನದ್ಧ ಸ್ಥಿತಿಯಲ್ಲಿರುತ್ತವೆ.
ಚಿತ್ರದುರ್ಗದ ಈ ಹಾಟ್ ಲೈನ್ ಉಪವಿಭಾಗವು ಅತ್ಯಂತ ನುರಿತ ತಾಂತ್ರಿಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಬಲಿಷ್ಠ ತಂಡವನ್ನು ಒಳಗೊಂಡಿದೆ.
1 AEE
1 AE
1 JE
10 ಜನ ನುರಿತ ತಾಂತ್ರಿಕ ಸಿಬ್ಬಂದಿ ಒಳಗೊಂಡ ಒಟ್ಟು 10 ಜನರ ದಕ್ಷ ತಂಡ ಇದಾಗಿದೆ.
ಪ್ರಸ್ತುತ ಚಿತ್ರದುರ್ಗದ ದೊಡ್ಡಸಿದ್ದವನಹಳ್ಳಿ ರಿಂಗ್ ರೋಡ್ ಹತ್ತಿರವಿರುವ ಟವರ್ ನಂಬರ್ 26 ರಲ್ಲಿ, 220 KV ಹಿರೇಮಲ್ಲನಹೋಳೆ ಒನ್ ಲೈನ್ನಲ್ಲಿ ‘ಲೈವ್ ಜಂಪ್ ಬೈಪಾಸ್’ ಕಾಮಗಾರಿಯ ಅತ್ಯಂತ ಕಠಿಣ ಕೆಲಸ ನಡೆದಿದೆ. ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸದೆ, ಚಾಲ್ತಿಯಲ್ಲಿರುವ ಲೈನಿನಲ್ಲೇ ಇಷ್ಟು ಎತ್ತರದ ಟವರ್ ಏರಿ ನಿರಂತರವಾಗಿ ಕೆಲಸ ನಿರ್ವಹಿಸುತ್ತಿರುವ ಚಿತ್ರದುರ್ಗ ಹಾಟ್ ಲೈನ್ ಸಬ್ ಡಿವಿಜನ್ ತಂಡದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಈ ಅದ್ಭುತ ಸಾಹಸ ಹಾಗೂ ಕರ್ತವ್ಯ ನಿಷ್ಠೆ ನಿಜಕ್ಕೂ ಶ್ಲಾಘನೀಯವಾಗಿದೆ. ಇವರ ಈ ದಕ್ಷ ಕಾರ್ಯವೈಖರಿಯಿಂದಾಗಿ ಸಹಸ್ರಾರು ಗ್ರಾಹಕರು ಹಾಗೂ ಕೈಗಾರಿಕೆಗಳಿಗೆ ಯಾವುದೇ ತೊಂದರೆಯಿಲ್ಲದೆ ನಿರಂತರ ವಿದ್ಯುತ್ ಲಭಿಸುವಂತಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















