ಸುದ್ದಿಒನ್, ಚಿತ್ರದುರ್ಗ, ಮೇ 29 : ದಾವಣಗೆರೆ ಡಯಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ 65 ವರ್ಷದ ತಿಪ್ಪೇಸ್ವಾಮಿ ಜಿ. ಅವರು ಈಗ ಜಿಲ್ಲೆಯ ಯುವ ಜನತೆಗೆ ಮಾದರಿಯಾಗಿದ್ದಾರೆ. ನಿವೃತ್ತಿಯಾಗಿ ಐದು ವರ್ಷ ಕಳೆದ ನಂತರ, ನಿವೃತ್ತಿಯ ಬಳಿಕ ಸುಮ್ಮನೆ ಕೂರದೆ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಇವರು ಕುರಿ ಸಾಕಾಣಿಕೆ ಉದ್ಯಮದತ್ತ ಮುಖ ಮಾಡಿದ್ದಾರೆ.
ಚಿತ್ರದುರ್ಗ ತಾಲೂಕಿನ ತಮ್ಮ ಸ್ವಂತ ಊರಾದ ಗುಡ್ಡದರಂಗವ್ವನಹಳ್ಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ತಮ್ಮದೇ ಒಂದು ಎಕರೆ ಸ್ವಂತ ಜಮೀನಿನಲ್ಲಿ ಆಧುನಿಕ ಮಾದರಿಯ ಹೈಟೆಕ್ ಶೆಡ್ ನಿರ್ಮಿಸಿ, ಕುರಿ ಹಾಗೂ ಹಸು ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸ್ವಂತ ಬಂಡವಾಳದಲ್ಲೇ ಮಾದರಿ ಕೇಂದ್ರ:ಧೃತಿಗೆಡದ ಸಾಧಕ : ಆರಂಭದಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಜಾನುವಾರು ಮಿಷನ್ (NLM) ಯೋಜನೆಯಡಿ ಸಬ್ಸಿಡಿ ಸಾಲದ ಮೂಲಕ ಕುರಿ ಸಾಕಾಣಿಕೆ ಮಾಡಬಹುದು ಎಂದು ಸ್ನೇಹಿತರ ಮೂಲಕ ತಿಳಿದು ತಿಪ್ಪೇಸ್ವಾಮಿ ಅವರು ಗ್ರಾಮೀಣ ಬ್ಯಾಂಕ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬ್ಯಾಂಕ್ ಅಧಿಕಾರಿಗಳು ಇವರಿಗೆ ಸರಿಯಾಗಿ ಸ್ಪಂದಿಸಲಿಲ್ಲ. ಬ್ಯಾಂಕ್ ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಸಾಲದ ಅರ್ಜಿ ತಿರಸ್ಕೃತಗೊಂಡು ಬಂದಿತು.
ಆದರೂ ಧೃತಿಗೆಡದ ತಿಪ್ಪೇಸ್ವಾಮಿ ಅವರು, ಸ್ನೇಹಿತರ ಸಲಹೆ ಪಡೆದು ಸ್ವಂತವಾಗಿ ಸಾಲ ಮಾಡಿ ಸುಮಾರು 15 ರಿಂದ 16 ಲಕ್ಷ ರೂಪಾಯಿ ಸ್ವಂತ ಬಂಡವಾಳ ಹೂಡಿದರು. ಇದರಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಹೈಟೆಕ್ ಶೆಡ್ ನಿರ್ಮಿಸಿದರೆ, ಇನ್ನುಳಿದ ಸುಮಾರು 6 ಲಕ್ಷ ರೂಪಾಯಿಯನ್ನು ಕುರಿಗಳ ಖರೀದಿಗೆ ಬಳಸಿದ್ದಾರೆ. ಇವರ ಈ ಸಾಹಸದ ಯೋಜನೆಗೆ ಇವರ ಅಣ್ಣನ ಮಕ್ಕಳೂ ಸಹ ಕೈಜೋಡಿಸಿ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ.
ವೈವಿಧ್ಯಮಯ ತಳಿಗಳ ಸಾಕಾಣಿಕೆ :
ಪ್ರಸ್ತುತ ಇವರ ಫಾರಂನಲ್ಲಿ ಒಟ್ಟು 75 ಗುಣಮಟ್ಟದ ಟಗರುಗಳು ಹಾಗೂ 4 ಹಸುಗಳಿವೆ. ಇವುಗಳಿಗೆ ಉತ್ತಮ ಗುಣಮಟ್ಟದ ಮೇವನ್ನ ಬಳಸಿ ಸಾಕೋದ್ದರಿಂದ ಉತ್ತಮ ರೀತಿಯ ಬೆಳವಣಿಗೆಯನ್ನು ಕಾಣುತ್ತಿದ್ದಾರೆ. ಇಲ್ಲಿ ಪ್ರಮುಖವಾಗಿ ಎರಡು ತಳಿಗಳನ್ನು ಸಾಕಲಾಗುತ್ತಿದೆ:
ಡೆಕ್ಕನ್ ತಳಿ: ಚಿತ್ರದುರ್ಗದ ಸ್ಥಳೀಯ ಹವಾಮಾನಕ್ಕೆ ಒಗ್ಗಿಕೊಳ್ಳುವ 40 ರಿಂದ 45 ಡೆಕ್ಕನ್ ತಳಿಯ ಟಗರುಗಳು ಇಲ್ಲಿವೆ.
ಎಳಗ ತಳಿ: ಬಾಗಲಕೋಟೆಯ ಅಮೀನಗಡದಿಂದ ತರಲಾದ 30 ರಿಂದ 32 ಆಕರ್ಷಕ ಎಳಗ ತಳಿಯ ಟಗರುಗಳು ಈ ಫಾರಂನಲ್ಲಿವೆ.
ಮೇವು ಮತ್ತು ನೀರಿನ ಸ್ವಾವಲಂಬನೆ :
ಕುರಿಗಳಿಗೆ ಆಹಾರದ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಿರುವ ಇವರು, 4 ಲೋಡ್ ಶೇಂಗಾ ಹೊಟ್ಟು ಹಾಗೂ 130 ಪೆಂಡೆ ರಾಗಿ ಹುಲ್ಲನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಇದರೊಂದಿಗೆ ತಮ್ಮದೇ ಜಮೀನಿನಲ್ಲಿ ಮೆಕ್ಕೆಜೋಳ ಮತ್ತು ಬಿಳಿಜೋಳವನ್ನು ಬೆಳೆಯುತ್ತಿರುವುದರಿಂದ ಮುಂದಿನ 8 ತಿಂಗಳಿಗಾಗುವಷ್ಟು ಉತ್ತಮ ಗುಣಮಟ್ಟದ ಹಸಿರು ಹಾಗೂ ಒಣ ಮೇವಿನ ದಾಸ್ತಾನು ಇವರಲ್ಲಿದೆ. ಜಮೀನಿನಲ್ಲಿ ಸ್ವಂತ ಬೋರ್ವೆಲ್ ಇರುವುದರಿಂದ ಕುಡಿಯುವ ನೀರಿಗೂ ಯಾವುದೇ ಸಮಸ್ಯೆಯಿಲ್ಲ.
ಸಾವಯವ ಕೃಷಿಗೆ ಉತ್ತಮ ಗೊಬ್ಬರ :
ಕೇವಲ ಆರ್ಥಿಕ ಲಾಭ ಅಷ್ಟೇ ಅಲ್ಲದೆ, ನಮ್ಮ ಜಮೀನಿನ ಸಾವಯವ ಕೃಷಿಗೆ ಉತ್ತಮ ಗೊಬ್ಬರ ಸಿಗಲಿ ಎಂಬ ಮುಖ್ಯ ಉದ್ದೇಶದಿಂದ ಈ ಉದ್ಯಮ ಆರಂಭಿಸಿದ್ದೇವೆ. ಜೊತೆಗೆ ಹಸುಗಳನ್ನು ಸಾಕೋದ್ದರಿಂದ ನಮಗೆ ಡೈರಿಗೆ ಹಾಲನ್ನ ಹಾಕಬಹುದು, ಅವುಗಳಿಂದ ದಿನನಿತ್ಯದ ಖರ್ಚಿಗೆ ಅನುಕೂಲವಾಗುತ್ತದೆ ಹಾಗೂ ಉತ್ತಮ ಗೊಬ್ಬರನೂ ಸಿಗುತ್ತದೆ. ಆರಂಭದ ದಿನಗಳಲ್ಲಿ ಅನುಭವದ ಕೊರತೆಯಿಂದ 4 ಕುರಿಗಳು ಸಾವನ್ನಪ್ಪಿದ್ದವು. ಆದರೆ ಈಗ ಉತ್ತಮ ಅನುಭವ ಬಂದಿದ್ದು, ಬ್ಯಾಚ್ ವೈಸ್ ತಂದು ಸಾಕಾಣಿಕೆ ಮಾಡುತ್ತಿದ್ದೇವೆ ಎಂದು ತಿಪ್ಪೇಸ್ವಾಮಿ ಅವರು ಹೆಮ್ಮೆಯಿಂದ ಹೇಳುತ್ತಾರೆ.
ಈಗಾಗಲೇ ಫಾರಂನಲ್ಲಿ ಬ್ಯಾಚ್ ವೈಸ್ ಸಾಕಾಣಿಕೆ ಮಾಡಿರುವುದರಿಂದ ಸದ್ಯ 20 ಉತ್ತಮ ಗುಣಮಟ್ಟದ ಟಗರುಗಳು ಮಾರಾಟಕ್ಕೆ ಸಿದ್ಧವಾಗಿವೆ. ಆಸಕ್ತರು ಹಾಗೂ ವ್ಯಾಪಾರಿಗಳು ನೇರವಾಗಿ ಫಾರಂಗೆ ಭೇಟಿ ನೀಡಿ, ಟಗರುಗಳನ್ನು ವೀಕ್ಷಿಸಿ ಖರೀದಿ ಮಾಡಬಹುದು ಎಂದು ಅವರು ಈ ಮೂಲಕ ಕೇಳಿಕೊಂಡಿದ್ದಾರೆ.
ಖರೀದಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಹೆಸರು: ತಿಪ್ಪೇಸ್ವಾಮಿ ಜಿ. (ನಿವೃತ್ತ ಉಪನ್ಯಾಸಕರು)
ಸ್ಥಳ: ಗುಡ್ಡದರಂಗವ್ವನಹಳ್ಳಿ (ಹೈವೇ ಪಕ್ಕ), ಚಿತ್ರದುರ್ಗ ತಾಲೂಕು ಮತ್ತು ಜಿಲ್ಲೆ. ಮೊಬೈಲ್ ಸಂಖ್ಯೆ: 9742448951
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













