ಸುದ್ದಿಒನ್,ಕೊಡಗು,ಮೇ.19: ಹೆಮ್ಮೆಯ ದುಬಾರೆ ಆನೆ ಶಿಬಿರದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಸಾಕಾನೆಗಳ ನಡುವೆ ನಡೆದ ಭೀಕರ ಗಲಾಟೆಯು ಇಬ್ಬರ ಪ್ರಾಣಪಕ್ಷಿ ಹಾರಿಹೋಗಲು ಕಾರಣವಾಗಿದೆ. ಶಿಬಿರದ ದಾಸವಾಳದ ಆನೆಗಳಾದ ಕಂಜನ್ ಮತ್ತು ಮಾರ್ತಾಂಡನ ನಡುವೆ ನಡೆದ ಭೀಕರ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ‘ಮಾರ್ತಾಂಡ’ ಆನೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.
ದುಬಾರೆ ಶಿಬಿರದಲ್ಲಿ ನಿನ್ನೆ ಕಂಜನ್ ಹಾಗೂ ಮಾರ್ತಾಂಡ ಆನೆಗಳ ನಡುವೆ ಅನಿರೀಕ್ಷಿತವಾಗಿ ಜಗಳ ಶುರುವಾಗಿದೆ. ನೋಡನೋಡುತ್ತಿದ್ದಂತೆಯೇ ಈ ಜಗಳ ರಣರೋಚಕ ಕಾಳಗವಾಗಿ ಮಾರ್ಪಟ್ಟಿದೆ. ಈ ವೇಳೆ ಉದ್ರಿಕ್ತಗೊಂಡ ಕಂಜನ್, ತನ್ನ ಬಲಿಷ್ಠವಾದ ದಂತಗಳಿಂದ ಮಾರ್ತಾಂಡನಿಗೆ ಮನಬಂದಂತೆ ಚುಚ್ಚಿ ದಾಳಿ ಮಾಡಿದೆ. ದಂತದ ಇರಿತದ ಭೀಕರತೆಗೆ ಮಾರ್ತಾಂಡನ ದೇಹದ ಒಳಗಿನ ಅಂಗಾಂಗಗಳಿಗೆ ತೀವ್ರ ಪೆಟ್ಟು ಬಿದ್ದಿತ್ತಲ್ಲದೆ, ಅತಿಯಾದ ರಕ್ತಸ್ರಾವವಾಗಿತ್ತು. ತಕ್ಷಣವೇ ಅರಣ್ಯ ಇಲಾಖೆಯ ಪಶುವೈದ್ಯರ ತಂಡ ಮಾರ್ತಾಂಡನಿಗೆ ಸತತ ಚಿಕಿತ್ಸೆ ನೀಡಿತಾದರೂ, ಪರಿಸ್ಥಿತಿ ಕೈಮೀರಿ ಆನೆ ಕೊನೆಯುಸಿರೆಳೆದಿದೆ ಎಂದು ಕೊಡಗು ಡಿಎಫ್ಒ (DFO) ಅಭಿಷೇಕ್ ಅವರು ಖಚಿತಪಡಿಸಿದ್ದಾರೆ.
ಗಜಪಡೆಗಳ ಜಗಳದ ನಡುವೆ ಅಮಾಯಕ ಮಹಿಳೆ ಬಲಿ!
ಈ ಆನೆಗಳ ಜಗಳ ಕೇವಲ ಮಾರ್ತಾಂಡನ ಸಾವಿಗೆ ಮಾತ್ರ ಸೀಮಿತವಾಗಲಿಲ್ಲ. ಇವೆರಡೂ ಆನೆಗಳು ರೊಚ್ಚಿಗೆದ್ದು ಓಡಾಡುತ್ತಾ ಕಾದಾಡುತ್ತಿದ್ದಾಗ, ಅಲ್ಲೇ ಹತ್ತಿರದಲ್ಲಿದ್ದ ಮಹಿಳೆಯೊಬ್ಬರು ಆನೆಗಳ ಕಾಲಿನಡಿ ಸಿಲುಕಿದ್ದಾರೆ. ಉದ್ರಿಕ್ತ ಆನೆಗಳ ಭೀಕರ ಕಾಲ್ತುಳಿತಕ್ಕೆ ಸಿಲುಕಿದ ಆ ದುರ್ದೈವಿ ಮಹಿಳೆ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ತೀವ್ರ ಆತಂಕ ಹಾಗೂ ಕಣ್ಣೀರು ತರಿಸಿದೆ.
ಸದಾ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ದುಬಾರೆ ಶಿಬಿರದಲ್ಲಿ ಸದ್ಯ ಸೂತಕದ ಛಾಯೆ ಆವರಿಸಿದೆ. ಸೌಮ್ಯ ಸ್ವಭಾವದ ಸಾಕಾನೆಗಳು ದಿಢೀರನೆ ಹೀಗೆ ರೌದ್ರಾವತಾರ ತಾಳಲು ಕಾರಣವೇನು? ಈ ದುರಂತದ ಹಿಂದೆ ಭದ್ರತಾ ಲೋಪಗಳಿವೆಯೇ? ಎಂಬ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ದಾಳಿ ನಡೆಸಿದ ‘ಕಂಜನ್’ ಆನೆಯನ್ನು ಕಟ್ಟುನಿಟ್ಟಿನ ನಿಯಂತ್ರಣದಲ್ಲಿಡಲಾಗಿದೆ.















