ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 11 : ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಲು ಸಾಧ್ಯ ಎಂದು ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಸ್.ಸಂದೀಪ್ ತಿಳಿಸಿದರು.

ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ, ಮದರ್ ಥೆರೆಸಾ ಸ್ಕೂಲ್ ಆಫ್ ನರ್ಸಿಂಗ್ ವತಿಯಿಂದ ಮಹಾರಾಣಿ ಕಾಲೇಜಿನ ವಾಲ್ಮೀಕಿ ಸಭಾಂಗಣದಲ್ಲಿ ಮಂಗಳವಾರ ನಡೆದ ಶುಶ್ರೂಷಕರ ದಿನಾಚರಣೆ ಹಾಗೂ 34 ನೇ ಬ್ಯಾಚ್ನ ವಿದ್ಯಾರ್ಥಿಗಳಿಂದ ಜ್ಯೋತಿ ಬೆಳಗಿಸುವ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸೇವಾ ಮನೋಭಾವನೆಯಿಂದ ಡಿ.ಬೋರಪ್ಪನವರು 58 ವರ್ಷಗಳ ಹಿಂದೆ ಕಟ್ಟಿ ಬೆಳೆಸಿದ ವಿದ್ಯಾಸಂಸ್ಥೆಯನ್ನು ಅವರ ಆಸೆ ಕನಸಿನಂತೆ ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಬಹುತೇಕ ಸಂಸ್ಥೆಗಳು ಗ್ರಾಮೀಣ ಭಾಗದಲ್ಲಿವೆ. ಕೆಲವು ಕಡೆ ಸಂಚಾರಿ ವ್ಯವಸ್ಥೆಯೂ ಇಲ್ಲ. ಅಂತಹ ಕಡೆ ಮಕ್ಕಳಿಗೆ ಶಿಕ್ಷಣ ಕೊಡಬೇಕೆಂಬುದು ನಮ್ಮ ಉದ್ದೇಶ. ಸಾವಿರಾರು ವಿದ್ಯಾರ್ಥಿಗಳಿಗೆ ಈ ಸಂಸ್ಥೆ ವಿದ್ಯಾದಾನ ಮಾಡಿದೆ. ಮುಂದಿನ ದಿನಗಳಲ್ಲಿ ಬಿ.ಎಸ್ಸಿ. ನರ್ಸಿಂಗ್ ಹಾಗೂ ಉನ್ನತ ಕೋರ್ಸ್ಗಳನ್ನು ಆರಂಭಿಸುವ ಪ್ರಯತ್ನ ಮಾಡುತ್ತಿದ್ದೇವೆ. ಜೊತೆಗೆ ಉದ್ಯೋಗಾವಕಾಶದ ಶಿಕ್ಷಣವನ್ನು ನೀಡುವುದು ನಮ್ಮ ಚಿಂತನೆ ಎಂದು ಹೇಳಿದರು.
ವೇದಾಂತ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ.ತೇಜಸ್ವಿ ಎಚ್.ಟಿ. ಮಾತನಾಡಿ ವೈದ್ಯರುಗಳಿಗಿಂತಲೂ ನರ್ಸ್ಗಳು ರೋಗಿಗಳ ಹತ್ತಿರ ಹೆಚ್ಚು ಸಮಯವಿರುತ್ತಾರೆ. ನರ್ಸಿಂಗ್ ವೃತ್ತಿ ಅತ್ಯಂತ ಪವಿತ್ರವಾದುದು. ಹಾಗಾಗಿ ನಿಮ್ಮ ವೃತ್ತಿಯಲ್ಲಿ ಸಬಲೀಕರಣಗೊಂಡಾಗ ರೋಗಿಗಳ ಜೀವ ಉಳಿಸಲು ಸಾಧ್ಯ. ನರ್ಸಿಂಗ್ ಶಿಕ್ಷಣದ ಜೊತೆ ನೈಪುಣ್ಯತೆ ಅಳವಡಿಸಿಕೊಂಡಾಗ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಫ್ಲಾರೆಂನ್ಸ್ ನೈಟಿಂಗೇಲ್ ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಜನಿಸಿದವರಾದರು ಜೀವನದುದ್ದಕ್ಕೂ ಸೇವೆಯಲ್ಲಿಯೇ ತೃಪ್ತಿ ಕಂಡುಕೊಂಡರು. ಆಡಂಭರದ ಜೀವನ ಮಾಡಲಿಲ್ಲ. ಕಠಿಣವಾದ ದಾರಿಯನ್ನು ಆಯ್ಕೆ ಮಾಡಿಕೊಂಡರು. ನರ್ಸ್ಗಳು ಸಬಲೀಕರಣಗೊಳ್ಳಬೇಕಾಗಿರುವುದರಿಂದ ಹೆಚ್ಚಿನ ಅಧಿಕಾರ ನೀಡಬೇಕು. ಇದರಿಂದ ರೋಗಿಗಳ ಪ್ರಾಣ ಉಳಿಸಬಹುದು ಎಂದು ನುಡಿದರು.
ಮದರ್ ಥೆರೆಸಾ ಸ್ಕೂಲ್ ಆಫ್ ನರ್ಸಿಂಗ್ನ ಪ್ರಾಂಶುಪಾಲರಾದ ಮಂಜುಳ ಆರ್. ಮಾತನಾಡುತ್ತ ದಿನದ 24 ಗಂಟೆಯೂ ರೋಗಿಗಳ ಸೇವೆ ಮಾಡುವ ಅವಕಾಶ ನರ್ಸ್ಗಳಿಗಿದೆ. ವೃತ್ತಿ, ಸಾಂಸಾರಿಕ, ವೈಯಕ್ತಿಕ ಜೀವನದಲ್ಲಿ ಏನೆ ಅಡೆತಡೆಗಳು ಎದುರಾದರು ಎದೆಗುಂದದೆ ರೋಗಿಗಳ ಸೇವೆ ಮಾಡಿ. ಆಗ ವೃತ್ತಿಯಲ್ಲಿ ನಿಮಗೆ ತೃಪ್ತಿ ಸಿಗುತ್ತದೆ. ವಿಧೇಯತೆ ಮುಖ್ಯ. ಶಿಸ್ತಿಗೆ ಮತ್ತೊಂದು ಹೆಸರು ಮದರ್ ಥೆರೆಸಾ ಎಂದು ಸ್ಮರಿಸಿದರು.
34 ನೇ ವರ್ಷದ ಬ್ಯಾಚ್ ಎಂದರೆ ಸಾಮಾನ್ಯವಲ್ಲ. ಮದರ್ ಥೆರೆಸಾ ಸ್ಕೂಲ್ ಆಫ್ ನರ್ಸಿಂಗ್ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಕೆಲವರು ದೇಶ-ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮದರ್ ಥೆರೆಸಾ, ಫ್ಲಾರೆಂನ್ಸ್ ನೈಟಿಂಗೇಲ್ ಇವರುಗಳು ಸೇವೆಯಲ್ಲಿ ಪ್ರಸಿದ್ದಿ ಪಡೆದವರು ಎಂದು ಹೇಳಿದರು.
ನರ್ಸಿಂಗ್ ಸ್ಕೂಲ್ನ ಹಿರಿಯ ಉಪನ್ಯಾಸಕಿ ವಿ.ಎಸ್.ಪೋತದಾರ್ ಮಾತನಾಡಿ ಶಾಲೆಗೆ ಗೈರು ಹಾಜರಾಗಬೇಡಿ. ಕಠಿಣ ಪರಿಶ್ರಮದಿಂದ ಓದಿ. ಶಿಕ್ಷಣದ ಜೊತೆ ತಂದೆ-ತಾಯಿಗಳು, ಗುರು-ಹಿರಿಯರನ್ನು ಗೌರವಿಸುವ ಗುಣ ರೂಢಿಸಿಕೊಂಡು ಸಂಸ್ಥೆಗೆ ಕೀರ್ತಿ ತನ್ನಿ ಎಂದು ನರ್ಸಿಂಗ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಎಸ್.ಸಾಗರ್ ವೇದಿಕೆಯಲ್ಲಿದ್ದರು. ಮದಕರಿ ವಿದ್ಯಾಸಂಸ್ಥೆಯ ಕಾರ್ಯನಿರ್ವಾಹಕ ಮಹಾಂತೇಶ್ ಹಾಗೂ ಉಪನ್ಯಾಸಕರುಗಳು ಸಮಾರಂಭದಲ್ಲಿ ಹಾಜರಿದ್ದರು.
2025-26 ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.




















