ಸುದ್ದಿಒನ್, ಚಿತ್ರದುರ್ಗ, ಮೇ 06: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಜೀವನಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿರುವ ‘ಬಿಎಸ್ವೈ ಅಭಿಮಾನೋತ್ಸವ’ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಆಗಮಿಸುವ ಸುಮಾರು 10 ಲಕ್ಷಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಮಾಡುವುದು ಒಂದು ಸವಾಲಾಗಿದ್ದು, ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಬಿಜೆಪಿ ಶಾಸಕರಿಗೆ ಜವಾಬ್ದಾರಿ ವಹಿಸಲಾಗಿದೆ.
ಬಿಜೆಪಿ ಶಾಸಕರು ಮತ್ತು ಪ್ರಮುಖರಿಗೆ ಆಗಮಿಸುವ ಜನರಿಗೆ ಊಟ ಮತ್ತು ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವ ಹೊಣೆ ನೀಡಲಾಗಿದೆ. ಶಾಸಕರಾದ ಎಸ್.ಆರ್. ವಿಶ್ವನಾಥ್, ಮುನಿರತ್ನ, ಗೋಪಾಲಯ್ಯ ಮತ್ತು ಮುನಿರಾಜು ಅವರು ಈಗಾಗಲೇ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಕಾರ್ಯಕ್ರಮಕ್ಕಾಗಿ ಈಗಾಗಲೇ ಅಡುಗೆ ಭಟ್ಟರನ್ನು ನೇಮಿಸಲಾಗಿದ್ದು, ಸುಮಾರು 500 ಬಾಣಸಿಗರು ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆ.

ಊಟದ ಮೆನು ಮತ್ತು ಸಮಯ:
ಮೇ 9ರಂದು ಬೆಳಿಗ್ಗೆ 9 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೂ ನಿರಂತರವಾಗಿ ಊಟದ ವ್ಯವಸ್ಥೆ ಇರಲಿದೆ.
ಬೆಳಗಿನ ಉಪಹಾರ: ಟೊಮೆಟೊ ಬಾತ್, ಮೊಸರನ್ನ, ಮೈಸೂರು ಪಾಕ್ ಮತ್ತು ವಾಟರ್ ಬಾಟಲ್ ನೀಡಲಾಗುವುದು.
ಮಧ್ಯಾಹ್ನದ ಊಟ: 12 ಗಂಟೆಯ ನಂತರ ವೆಜಿಟೇಬಲ್ ಪಲಾವ್, ಮೊಸರನ್ನ ಮತ್ತು ಮೈಸೂರು ಪಾಕ್ ವಿತರಿಸಲಾಗುವುದು.
ವ್ಯವಸ್ಥಿತ ವಿತರಣೆ: ಪ್ರತಿ ಕೌಂಟರ್ ಬಳಿ ಇಬ್ಬರು ಶಾಸಕರು ಮತ್ತು 120 ಜನ ಸ್ವಯಂಸೇವಕರು ಕಾರ್ಯನಿರ್ವಹಿಸಲಿದ್ದು, ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲಾಗಿದೆ.



















