ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆಮತಗಳನ್ನು ಮರು ಎಣಿಕೆ ಮಾಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಅದರಂತೆ ಇಂದು ಅಂಚೆಮತಗಳ ಮತ ಎಣಿಕೆಯೂ ನಡೆದಿದೆ. ಆದರೆ ರಾತ್ರಿ ಎಂಟು ಗಂಟೆಯಾದರೂ ಫಲಿತಾಂಶ ಏನು..? ಯಾವ ಅಭ್ಯರ್ಥಿಗೆ ಮತಗಳು ಹೆಚ್ಚು ಬಂದಿವೆ ಎಂಬ ಮಾಹಿತಿಯನ್ನು ಅಲ್ಲಿನ ಅಧಿಕಾರಿಗಳು ನೀಡುತ್ತಿಲ್ಲ. ಅದರಲ್ಲೂ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅವರೇ ಮರು ಮತ ಎಣಿಕೆಯಲ್ಲೂ ಮುಂದಿದ್ದಾರೆ. ಅವರದ್ದೇ ಗೆಲುವು ಎಂಬ ಮಾತುಗಳು ಕೇಳಿ ಬಂದಿವೆ. ಆದರೂ ಅಧಿಕಾರಿಗಳಿಂದ ಯಾವುದೇ ಉತ್ತರ ಬಾರದೆ ಇದ್ದ ಕಾರಣಕ್ಕೆ ಸ್ಥಳದಲ್ಲಿ ಹೈಡ್ರಾಮವೇ ಶುರುವಾಗಿದೆ.
ಇಷ್ಟು ತಡವಾದರೂ ಅಧಿಕಾರಿಗಳು ಸರಿಯಾದ ಮಾಹಿತಿ ಯಾಕೆ ನೀಡುತ್ತಾ ಇಲ್ಲ ಎಂಬುದೇ ಬಿಜೆಪಿ ಕಾರ್ಯಕರ್ತರ ಆಕ್ರೋಶವಾಗಿದೆ. ಚಿಕ್ಕಮಗಳೂರು ನಗರದ ಐಡಿಎಸ್ಜಿ (IDSG) ಕಾಲೇಜಿನಲ್ಲಿ ಮರು ಎಣಿಕೆ ಕಾರ್ಯ ನಡೆಯುತ್ತಿದ್ದ ವೇಳೆ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ನೇತೃತ್ವದಲ್ಲಿ ಎಣಿಕೆ ಕೇಂದ್ರಕ್ಕೆ ನುಗ್ಗಲು ಯತ್ನಿಸಿದ ಕಾರ್ಯಕರ್ತರು, ಘೋಷಣೆಯನ್ನು ಕೂಗಿದ್ದಾರೆ.

ಒಂದು ಕಡೆ ಬಿಜೆಪಿ ಕಾರ್ಯಕರ್ತರು ಬೇಕೆ ಬೇಕು ನ್ಯಾಯ ಬೇಕು ಎಂದು ಘೋಷಣೆ ಕೂಗುತ್ತಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಜಾರ್ಯಕರ್ತರು ಕೂಡ ಜಮಾಯಿಸಿದ್ದರು. ಅವರೆಲ್ಲ ಸೇರಿ ಗೆದ್ದರು ಗೆದ್ದರು ಗೌಡ್ರು ಗೆದ್ದರು ಎಂಬ ಘೋಷಣೆಗಳನ್ನು ಕೂಗಿ ಬಿಜೆಪಿ ಕಾರ್ಯಕರ್ತರನ್ನ ಮತ್ತಷ್ಟು ಕೆರಳುವಂತೆ ಮಾಡಿದರು. ಎರಡು ಪಕ್ಷಗಳ ಕಾರ್ಯಕರ್ತರ ಪ್ರತಿಭಟನೆಯಿಂದ ಪೊಲೀಸರು ಹೈರಾಣಾಗಿ ಹೋದರು. ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಜೋರು ವಾಗ್ವಾದ ನಡೆಯಿತು. ಇಮ್ನು ರಾಷ್ಟ್ರೀಯ ಹೆದ್ದಾರಿಯಲ್ಲೇ ಪ್ರತಿಭಟನೆ ನಡೆಸಿ, ಉದ್ವಿಗ್ನ ವಾತಾವರಣ ನಿರ್ಮಾಣ ಮಾಡಿದ್ದಾರೆ.



















