ದಾವಣಗೆರೆ ಉಪಚುನಾವಣೆಯ ಅಭ್ಯರ್ಥಿ ಹಾಗೂ ‘ಯಂಗ್ ಸ್ಟಾರ್ ಎಂಪೋರಿಯಂ’ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶಹಬಾಜ್ ಖಾನ್ ಮೇಲೆ ಬೆಂಗಳೂರಿನಲ್ಲಿ ದಾಳಿ ನಡೆದಿದ್ದು, ಪ್ರಕರಣ ಸಂಬಂಧ ಎಫ್ಐಆರ್ ದಾಖಲಾಗಿದೆ.ಕೆಲ ದಿನಗಳ ಹಿಂದೆ ಶಹಬಾಜ್ ಖಾನ್ ಅವರಿಗೆ ಹಲ್ಲೆ ನಡೆಸುವುದಾಗಿ ಹಾಗೂ ಕಸದ ಬುಟ್ಟಿಗೆ ಎಸೆಯುವುದಾಗಿ ಬೆದರಿಕೆ ಬಂದಿತ್ತು. ಅದರಂತೆಯೇ ನಗರದ ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವರ ನಿವಾಸಕ್ಕೆ ನುಗ್ಗಿದ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ದಾವಣಗೆರೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಇತ್ತೀಚೆಗೆ ಬೆಂಗಳೂರಿಗೆ ಮರಳಿದ್ದ ಶಹಬಾಜ್ ಖಾನ್ ವಿರುದ್ಧ ಮುಹಮ್ಮದ್ ವಸೀಂ ಎಂಬಾತ ಅವಹೇಳನಕಾರಿ ವೀಡಿಯೋ ಪ್ರಕಟಿಸಿದ್ದನು. ಈ ಸಂಬಂಧ ದಾವಣಗೆರೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದರ ಬಳಿಕ ಅದೇ ಪಕ್ಷದ ಹಸೀನಾ ಬಾನು ಕೂಡ ವೀಡಿಯೋ ಮೂಲಕ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ. ಈ ಬೆಳವಣಿಗೆಯಿಂದ ಕೋಪಗೊಂಡ ಶಹಬಾಜ್ ಖಾನ್, ಹಸೀನಾ ಬಾನುವನ್ನು ಪಕ್ಷದಿಂದ ವಜಾಗೊಳಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿ ಹಸೀನಾ ಬಾನು, ಝೈದ್, ನಿಲೂಫರ್ ಹಾಗೂ ಮುಹಮ್ಮದ್ ವಸೀಂ ಸೇರಿದಂತೆ 5-6 ಮಂದಿ ಸೇರಿಕೊಂಡು ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯಲ್ಲಿ ಗಾಯಗೊಂಡ ಶಹಬಾಜ್ ಖಾನ್ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.ಈ ಘಟನೆ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದ್ದು, ಭದ್ರತೆ ಕುರಿತ ಪ್ರಶ್ನೆಗಳು ಉದ್ಭವಿಸಿವೆ.
















