ದಾವಣಗೆರೆ: ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇದೆ. ಬಿಜೆಪಿ ನಾಯಕರು ಭರ್ಜರಿ ಪ್ರಚಾರ ಕಾರ್ಯ ನಡೆಸ್ತಾ ಇದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಇಂದು ಕೂಡ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮತ ಬೇಟೆ ಮಾಡಿದ್ದಾರೆ. ಈ ವೇಳೆ ಜಮೀರ್ ಅಹ್ಮದ್ ಬಂದು ಹೋದ ಬಗ್ಗೆ ಮಾತನ್ನಾಡಿದ್ದಾರೆ.
ಯಾರೂ ಬಂದು ಹೋದ್ರು, ಯಾರೂ ಬಂದಿಲ್ಲ ಅನ್ನೋದಕ್ಕಿಂತ ಹೆಚ್ಚಾಗಿ ದಾವಣಗೆರೆ ಕ್ಷೇತ್ರದಲ್ಲಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಮತದಾರರಲ್ಲಿ ಇರುವ ಆಕ್ರೋಶ ಇದು ಮುಂದಿನ ದಿನಗಳಲ್ಲಿ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತೆ ಎಂಬುದನ್ನ ತೋರಿಸಿಕೊಡುತ್ತದೆ. ಕಳೆದ ಉಪಚುನಾವಣೆಯಲ್ಲೂ ಇದನ್ನ ನೋಡಿರಲಿಲ್ಲ. ಬಿಜೆಪಿಗೆ ವರದಾನವಾಗುತ್ತೆ, ಮತದಾರರು ನಮ್ಮ ಕೈಯನ್ನ ಹಿಡಿತಾರೆ ಎಂಬ ನಂಬಿಕೆ ಇದೆ.
ಅಲ್ಪಸಂಖ್ಯಾತರಿಗೂ ಅದು ಅರಿವಾಗಿದೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಬಗ್ಗೆ ಮೊಸಳೆ ಕಣ್ಣೀರನ್ನ ಹಾಕುತ್ತದೆಯೇ ವಿನಃ, ಅಲ್ಪಸಂಖ್ಯಾತರ ಅಭಿವೃದ್ಧಿ ಸಾಧ್ಯ ಇಲ್ಲ ಅನ್ನೋದು ಅವರಿಗೂ ಅರ್ಥವಾಗಿದೆ. ಹೀಗಾಗಿಯೇ ಅವರು ಕೂಡ ನಮ್ಮನ್ನ ಬೆಂಬಲಿಸ್ತಾರೆ ಎಂಬ ವಿಶ್ವಾಸ ನಮಗೆ ಇದೆ. ಖಾಲಿ ಡಬ್ಬವನ್ನು ತುಂಬಿಸುವಂತ ಕೆಲಸವನ್ನ ನಮ್ಮ ಮತದಾರರು ಮಾಡ್ತಾರೆ. ಮುಂದುವರೆಯಲಿದೆ ಗ್ಯಾರಂಟಿ, ಮುನ್ನಡೆಯಲಿದೆ ದಾವಣಗೆರೆ ಅನ್ನೊ ಜಾಹೀರಾತನ್ನ ಕಾಂಗ್ರೆಸ್ ನೀಡಿದೆ. ಬಹುಶಃ ಚುನಾವಣೆ ಮುಗಿದ ಮೇಲೆ ತಿಳಿಯಲಿದೆ ಕಾಂಗ್ರೆಸ್ ಪಕ್ಷ ಯಾವ ರೀತಿ ಮುಗ್ಗರಿಸಲಿದೆ ಅನ್ನೋದು. ಬಾಗಲಕೋಟೆ ಹಾಗೂ ದಾವಣಗೆರೆ ಎರಡು ಕಡೆ ನಾವೇ ಗೆಲ್ಲುತ್ತೀವಿ ಅಂತ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.















