ತುರುವೇಕೆರೆಯಲ್ಲಿ ಮನೆ ಬಾಗಿಲಿಗೆ ಬಂದು “ಊದುಬತ್ತಿ ಖರೀದಿಸಿ, ಅದೃಷ್ಟ ಪರೀಕ್ಷಿಸಿ” ಎಂಬ ಆಮಿಷವೊಡ್ಡಿ ಜನರನ್ನು ವಂಚಿಸುತ್ತಿರುವ ಗ್ಯಾಂಗ್ ಚಟುವಟಿಕೆ ಹೆಚ್ಚಾಗಿದೆ. ಕೇವಲ 20 ರೂಪಾಯಿಯ ಊದುಬತ್ತಿ ಪ್ಯಾಕ್ ಮೂಲಕ ಆರಂಭವಾಗುವ ಈ ಮೋಸ, ಸಾವಿರಾರು ರೂಪಾಯಿಗಳ ನಷ್ಟಕ್ಕೆ ಕಾರಣವಾಗುತ್ತಿದೆ. ಈಗಾಗಲೇ ಸುಮಾರು 70ಕ್ಕೂ ಹೆಚ್ಚು ಮಂದಿ ಈ ಭೋಗಸ್ ಯುಕ್ತಿಗೆ ಬಲಿಯಾಗಿದ್ದು, ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.
ಮನೆ ಮನೆಗೆ ಭೇಟಿ ನೀಡುವ ಈ ಗ್ಯಾಂಗ್, ಊದುಬತ್ತಿ ಪ್ಯಾಕ್ ಒಳಗೆ “ಆಫರ್ ಕೂಪನ್” ಇಟ್ಟು ಜನರನ್ನು ಸೆಳೆಯುತ್ತಿದೆ. ಕೂಪನ್ನಲ್ಲಿ “₹8,000 ಮೌಲ್ಯದ ಗೃಹೋಪಯೋಗಿ ವಸ್ತುಗಳು ಕೇವಲ ₹3,999ಕ್ಕೆ” ದೊರೆಯುತ್ತವೆ ಎಂದು ಹೇಳಿ ಮಿಕ್ಸಿ, ಪ್ರೆಶರ್ ಕುಕ್ಕರ್, ಚಪಾತಿ ಮೇಕರ್, ನಾನ್ಸ್ಟಿಕ್ ಪಾತ್ರೆಗಳು, ಸೋಲಾರ್ ಲ್ಯಾಂಪ್ ಸೇರಿದಂತೆ ಹಲವು ವಸ್ತುಗಳ ಆಮಿಷ ನೀಡುತ್ತಾರೆ. ಇದಕ್ಕೆ ಒಪ್ಪದವರನ್ನು “ಇದು ನಿಮ್ಮ ಅದೃಷ್ಟ, ಬೇರೆ ಯಾರಿಗೂ ಸಿಗೋದಿಲ್ಲ” ಎಂದು ಮಾನಸಿಕವಾಗಿ ಒತ್ತಡ ಹೇರುತ್ತಾರೆ.
ಇದಕ್ಕೂ ಮೀರಿಸಿ, “ಇನ್ನೂ ₹600 ಕೊಟ್ಟರೆ ವಾಷಿಂಗ್ ಮೆಷಿನ್ ಅಥವಾ ಫ್ರಿಡ್ಜ್ ಸಿಗುತ್ತದೆ” ಎಂದು ಹೊಸ ಆಫರ್ ಹೇಳಿ ಜನರನ್ನು ಮತ್ತಷ್ಟು ಸೆಳೆಯುತ್ತಾರೆ. ಮೂರು ದಿನಗಳಲ್ಲಿ ಮನೆಗೆ ತಲುಪಿಸುವ ಭರವಸೆ ನೀಡಿ ಹಣ ಪಡೆದು ನಂತರ ಪರಾರಿಯಾಗುತ್ತಾರೆ. ಈ ಮಾತಿಗೆ ಮರುಳಾದ ಹಲವರು ಕಡಿಮೆ ದರದಲ್ಲಿ ದೊಡ್ಡ ವಸ್ತು ಸಿಗುತ್ತದೆ ಎಂಬ ಆಸೆಯಿಂದ ಹಣ ಕಳೆದುಕೊಂಡಿದ್ದಾರೆ.₹3,999 ನೀಡಿ ಪಡೆದ ವಸ್ತುಗಳನ್ನು ತೆರೆಯುವಾಗ ಅವುಗಳು ಅತ್ಯಂತ ಕಳಪೆ ಗುಣಮಟ್ಟದವಾಗಿರುವುದು ಬಹಿರಂಗವಾಗುತ್ತಿದೆ. ಮಾರುಕಟ್ಟೆ ಮೌಲ್ಯ ಕೇವಲ ₹1,500–₹2,000 ಇರುವ ವಸ್ತುಗಳನ್ನು ಹೆಚ್ಚಿನ ಬೆಲೆಗೆ ನೀಡಲಾಗುತ್ತಿದೆ. ಇನ್ನು, ಗ್ಯಾಂಗ್ ನೀಡಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಸ್ವಿಚ್ ಆಫ್ ಆಗಿರುವುದೇ ಉತ್ತರ.
ಈ ರೀತಿಯಲ್ಲಿ ಪ್ರತಿಯೊಬ್ಬರಿಂದ ಕನಿಷ್ಠ ₹2,000 ಲಾಭ ಗಳಿಸುವ ಗ್ಯಾಂಗ್, ಹೆಚ್ಚುವರಿ ಆಫರ್ ಮೂಲಕ ಮತ್ತಷ್ಟು ಹಣ ಕಸಿದುಕೊಳ್ಳುತ್ತಿದೆ. “ಅದೃಷ್ಟ ಪರೀಕ್ಷಿಸಿ” ಎಂಬ ನೆಪದಲ್ಲಿ ಮನೆಗೆ ಬರುವ ಅಪರಿಚಿತರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಮೋಸಕ್ಕೆ ಒಳಗಾದವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











