ಸುದ್ದಿಒನ್ :ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಗರದಲ್ಲಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಮುಂದುವರಿದಿದ್ದು, ಆರೋಪಿ ಪವನ್ (ಎ3) ಪರ ವಕೀಲರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿ ₹5,000 ದಂಡ ವಿಧಿಸಿದೆ.ಪವನ್ ಪರ ವಕೀಲರು ತನಿಖಾಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಎಸಿಪಿ ಚಂದನ್ ಅವರನ್ನು ಪ್ರಕರಣದಲ್ಲಿ ಆರೋಪಿಯಾಗಿ ಪರಿಗಣಿಸಬೇಕೆಂದು ಮನವಿ ಸಲ್ಲಿಸಿದ್ದರು.
ಮೊಬೈಲ್ ವಶಪಡಿಸಿಕೊಳ್ಳುವ ವೇಳೆ ತೆಗೆದ ಫೋಟೋಗಳಲ್ಲಿನ ಟೈಲ್ಸ್ ಬಣ್ಣದ ಆಧಾರದಲ್ಲಿ ಸಾಕ್ಷ್ಯ ತಿದ್ದುಪಡಿ ಹಾಗೂ ಸುಳ್ಳು ಸಾಕ್ಷ್ಯ ಸೃಷ್ಟಿ ನಡೆದಿದೆ ಎಂದು ವಾದಿಸಿದ್ದರು.ಆದರೆ ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ಸಮಯ ವ್ಯರ್ಥ ಮಾಡಿದ ಹಿನ್ನೆಲೆಯಲ್ಲಿ ಪವನ್ ಪರ ವಕೀಲರಿಗೆ ₹5,000 ದಂಡ ವಿಧಿಸಿ, ಅದನ್ನು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಜಮಾ ಮಾಡುವಂತೆ ಆದೇಶಿಸಿದೆ.
ಇದೇ ವೇಳೆ, ಪ್ರಕರಣದ ಮತ್ತೊಬ್ಬ ಆರೋಪಿ ದರ್ಶನ ಅವರಿಗೆ ಕುಟುಂಬ ಸದಸ್ಯರು ಹಾಗೂ ಸ್ನೇಹಿತರನ್ನು ಭೇಟಿಯಾಗಲು ಅವಕಾಶ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮಂಜೂರು ಮಾಡಿದೆ. ಜೈಲು ಕೈಪಿಡಿ ನಿಯಮಾವಳಿಯಂತೆ ಭೇಟಿ ಅವಕಾಶ ಕಲ್ಪಿಸಲು ಜೈಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸುಮಾರು ಎರಡು ವರ್ಷಗಳಿಂದ ವಿಚಾರಣೆ ನಡೆಯುತ್ತಿರುವ ಈ ಪ್ರಕರಣದಲ್ಲಿ Pavithra Gowda ಸೇರಿದಂತೆ ಹಲವು ಆರೋಪಿಗಳು ಬಂಧಿತರಾಗಿದ್ದಾರೆ. ದರ್ಶನ್ ಅವರಿಗೆ ಮೊದಲಿನಿಂದ ಜಾಮೀನು ದೊರೆತಿದ್ದರೂ, ನಂತರ ಸುಪ್ರೀಂ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಸ್ತುತ ದರ್ಶನ್ ಸೇರಿದಂತೆ ಆರೋಪಿಗಳು ಪರಪ್ಪನ ಅಗ್ರಹಾರ ಸೇರಿದಂತೆ ವಿವಿಧ ಕಾರಾಗೃಹಗಳಲ್ಲಿ ಇರಿಸಲ್ಪಟ್ಟಿದ್ದಾರೆ. ದರ್ಶನ್ ಪರ ವಕೀಲರು ಹೊಸ ಜಾಮೀನು ಅರ್ಜಿ ಸಲ್ಲಿಸದೇ, ವಿಚಾರಣೆಯನ್ನು ಶೀಘ್ರಗೊಳಿಸುವಂತೆ ಮನವಿ ಮಾಡಿದ್ದು, ವಿಶೇಷ ಸಾರ್ವಜನಿಕ ಅಭಿಯೋಜಕರು ತ್ವರಿತ ವಿಚಾರಣೆಗೆ ಒಪ್ಪಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.









