ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 20 : ಅಲ್ಪ ವೇತನ ಮತ್ತು ಅನಿಶ್ಚಿತತೆ, ಸೇವಾ ಭದ್ರತೆಯ ಕೊರತೆ, ವೇತನದಲ್ಲಿ ವಿಳಂಬ, ಕೆಲಸದ ಒತ್ತಡ, ಈ ಎಲ್ಲಾ ಸಮಸ್ಯೆಗಳ ನಡುವೆ ಸಿಲುಕಿ ಸಂಕಷ್ಟದಲ್ಲಿರುವ ಅತಿಥಿ ಉಪನ್ಯಾಸರಿಗೆ ಮಾದರಿಯಾಗುವ ರೀತಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಲ್ಲೂರಹಳ್ಳಿ ಗ್ರಾಮದ ಶಿವರಾಜ್ ಸಿ ಬೋಧಕ ವೃತ್ತಿಯ ಜೊತೆಗೆ ಲಾಭದಾಯಕ ಕೃಷಿಯಾಗಿ ಗುಲಾಬಿ ಹೂವು ಬೆಳೆದು ತಿಂಗಳಿಗೆ 30 ರಿಂದ 40 ಸಾವಿರ ರೂಪಾಯಿ ಲಾಭ ಗಳಿಸುತ್ತಿದ್ದಾರೆ.
ಸುಮಾರು 7 ವರ್ಷದಿಂದ ಶಿವರಾಜ್ ಸಿ. ಅವರು ಬೆಳಗೆರೆಯ ಬಿ.ಸೀತಾರಾಮ ಶಾಸ್ತ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಷಯದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಪನ್ಯಾಸಕ ವೃತ್ತಿಯಲ್ಲಿ ಬರುವ ಕಡಿಮೆ ಸಂಬಳದಿಂದ ಮನೆ ನಡೆಸಲು ಆಗದೆ ಹಲವು ಬಾರಿ ಸಂಕಷ್ಟಕ್ಕೆ ಸಿಲುಕಿದ್ದ ಶಿವರಾಜ್, ಕೊನೆಗೆ ಇದನ್ನೇ ನಂಬಿ ಕೂತರೆ ಏನು ಆಗದು ಎಂದು ಅರಿತು ಒಂದು ವರ್ಷದ ಹಿಂದೆ ಕೃಷಿಯಲ್ಲಿ ನಿರತರಾಗಿ ಯಶಸ್ಸು ಕಂಡಿದ್ದಾರೆ.
ತಮಿಳುನಾಡಿನಿಂದ 18 ರೂಪಾಯಿಗೆ ಒಂದರಂತೆ 1,500 ಮಿರಾಬಲ್ ತಳಿಯ ಗುಲಾಬಿ ಸಸಿಗಳನ್ನು ತರಿಸಿ ತಮ್ಮ ಅರ್ಧ ಎಕರೆ ಜಮೀನಿನಲ್ಲಿ ಸಾಲಿನಿಂದ ಸಾಲಿಗೆ 7 ಅಡಿ, ಸಸಿಯಿಂದ ಸಸಿಗೆ 3 ಹಂತರದಲ್ಲಿ ನಾಟಿ ಮಾಡಿದ್ದಾರೆ. ಮೊದಲು ಭೂಮಿ ಹದಮಾಡುವುದು, ಬೆಡ್ ಹೊಡೆಸುವುದು, ಡ್ರಿಪ್ ಹಾಕಿಸುವುದು, ಪೈಪ್ ಲೈನ್ ಸೇರಿ ಎಲ್ಲ ಸಿದ್ಧತೆ ಮಾಡಲು 1,00000 ಖರ್ಚು ಮಾಡಿದ್ದು, ಈಗ ಸಸಿ ನಾಟಿ ಮಾಡಿ 1 ವರ್ಷ 3 ತಿಂಗಳಾಗಿದ್ದು ಪ್ರತಿನಿತ್ಯ ಸುಮಾರು 40 ಕೆಜಿ ಗುಲಾಬಿ ಹೂವು ಸಿಗುತ್ತದೆ. ಹಬ್ಬದ ಸಮಯದಲ್ಲಿ ಹೂವಿನ ಬೆಲೆ ಹೆಚ್ಚಾಗುತ್ತದೆ ಹಬ್ಬ ಮುಗಿದ ಮೇಲೆ ಬೆಲೆಯಲ್ಲಿ ಏರಿಳಿತ ಆಗೋದು ಸಹಜ. ಆದರೂ ಒಂದೇ ವರ್ಷದಲ್ಲಿ 30.ಸಾವಿರದಿಂದ 40 ಸಾವಿದವರೆಗೆ ಲಾಭ ಗಳಿಸಿದ್ದಾರೆ.
ಅಥಿತಿ ಉಪನ್ಯಾಸಕ ಶಿವರಾಜ್ ಮಾತನಾಡಿ, ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮಕ್ಕಳಿಗೆ ಪಾಠ ಮಾಡುತ್ತೇನೆ. ಮಧ್ಯಾಹ್ನ ಕಾಲೇಜಿನಿಂದ ಬಂದ ಕೂಡಲೇ ಸಂಜೆವರೆಗೆ ಹೊಲದಲ್ಲಿ ಕೆಲಸ ಮಾಡುತ್ತೇನೆ. ಒಂದು ವರ್ಷದಿಂದ ಕೃಷಿಯಲ್ಲಿ ತೊಡಗಿದ್ದು ಒಂದಷ್ಟು ಆರ್ಥಿಕವಾಗಿ ಸಧೃಡ ಆಗಲು ಕೃಷಿಯೇ ಸಹಕಾರಿಯಾಗಿದೆ. ಕೃಷಿಯಲ್ಲಿ ಖುಷಿಯಾಗಿದ್ದೇನೆ ಮತ್ತು ಯಶಸ್ಸನ್ನು ಕಂಡಿದ್ದೇನೆ ಎಂದು ಶಿವರಾಜ್ ಹೇಳುತ್ತಾರೆ.




















