ವಂದೇ ಮಾತರಂ ಗೀತೆಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವಾಲಯ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನುಮೇಕೆ ರಾಷ್ಟ್ರಗೀತೆಗೂ ಮುನ್ನ ‘ವಂದೇ ಮಾತರಂ’ ಗೀತೆಯನ್ನು ಹಾಡಬೇಕು ಎಂದು ಹೊಸ ಮಾರ್ಗಸೂಚಿಯಲ್ಲಿ ಹೊರಡಿಸಲಾಗಿದೆ.
ಬಂಕಿಮ್ ಚಂದ್ರ ಚಟರ್ಜಿ ಅವರು 1875ರಲ್ಲಿ ಅಕ್ಷಯ ನವಮಿ ದಿನ ‘ವಂದೇ ಮಾತರಂ’ ರಚಿಸಿದ್ದರು.ವಂದೇ ಮಾತರಂ ಗೀತೆಗೆ 150 ವರ್ಷ ಪೂರ್ತಿಯಾದ ಹಿನ್ನೆಲೆ ಗೌರವ ಸೂಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 3 ನಿಮಿಷ 10 ಸೆಕೆಂಡುಗಳ ಅವಧಿಯ 6 ಚರಣಗಳ ಸಂಪೂರ್ಣ ಗೀತೆಯನ್ನು ನುಡಿಸುವ ಅಥವಾ ಹಾಡುವ ವೇಳೆ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು ಎಂದು ತಿಳಿಸಲಾಗಿದೆ. 1937ರಲ್ಲಿ ಕಾಂಗ್ರೆಸ್ ಸರ್ಕಾರ ತೆಗೆದುಹಾಕಿದ್ದ ನಾಲ್ಕು ಚರಣಗಳನ್ನು ಸೇರಿಸಿ ಎಲ್ಲಾ ಆರು ಚರಣಗಳನ್ನು ನುಡಿಸುವಂತೆ ಸೂಚಿಸಲಾಗಿದೆ.
ರಾಷ್ಟ್ರದ ಗೌರವಕ್ಕೆ ಅಪಮಾನ ತಡೆ ಕಾಯ್ದೆ ಅಡಿಯಲ್ಲಿ ರಾಷ್ಟ್ರಗೀತೆಗೆ ಅಡ್ಡಿಪಡಿಸುವುದು ಅಥವಾ ಗೌರವ ಸಲ್ಲಿಸುವುದನ್ನು ತಡೆಯುವವರ ವಿರುದ್ಧ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.




