ರಾಯಚೂರು: ರಾಯರ ಮಠಕ್ಕೆ ಹೋಗುವವರು ದಿನೇ ದಿನೇ ಹೆಚ್ಚಾಗ್ತಾ ಇದ್ದಾರೆ. ರಾಯರಿದ್ದಾರೆ ಅನ್ನೋದು ಭಕ್ತರಿಗೆ ಅರಿವಾಗಿದೆ. ಹೀಗಾಗಿಯೇ ಭಕ್ತರ ಸಂಖ್ಯೆ ಕೂಡ ಹೆಚ್ಚಾಗಿದೆ. ಇದೀಗ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಬರೀ 20 ದಿನಗಳಿಗೆ ಕೋಟ್ಯಾಂತರ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.
ವರ್ಷದ ಕೊನೆಯ ತಿಂಗಳು ಡಿಸೆಂಬರ್ ತಿಂಗಳಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಖ್ಯೆ ಹೆಚ್ಚಾಗಿತ್ತು. ಈ ಮೂಲಕ ಕಳೆದ 20 ದಿನದಲ್ಲಿ 3,73,66,587 ರೂ. ಕಾಣಿಕೆ ಸಂಗ್ರಹವಾಗಿದೆ. ಈ ಪೈಕಿ ಸಂಗ್ರಹವಾದ ಕಾಣಿಕೆಯಲ್ಲಿ 3,62,69,247 ರೂ. ಕರೆನ್ಸಿ ನೋಟುಗಳು ಹಾಗೂ 10,97,340 ರೂ. ನಾಣ್ಯಗಳು ಸಂಗ್ರಹವಾಗಿವೆ.
ರಾಘವೇಂದ್ರ ಸ್ವಾಮಿಗಳು ಅಂದ್ರೆ ನಮ್ಮ ರಾಜ್ಯ ಮಾತ್ರವಲ್ಲ, ಬೇರೆ ರಾಜ್ಯದಿಂದಲೂ ಭಕ್ತರು ಬರುತ್ತಾರೆ. ಹರಕೆ ರೂಪದಲ್ಲಿ ಕಾಣಿಕೆಯನ್ನ ನೀಡುತ್ತಾರೆ. ಅದು ಹಣದ ರೂಪದಲ್ಲಾದರೂ ಸರಿ, ಚಿನ್ನ, ಬೆಳ್ಳಿ ರೂಪದಲ್ಲಾದರೂ ಸರಿ. ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆ ದೇವಾಲಯದ ಅಂಗಳದಲ್ಲಿ ಸರಿಯಾದ ವ್ಯವಸ್ಥೆಯನ್ನು ಮಾಡಿದ್ದಾರೆ. ನಾಳೆ ಹೊಸ ವರ್ಷವಾದ ಕಾರಣ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ.


