ಗದಗ ಜಿಲ್ಲೆಯ ಅಂತೂರ–ಬೆಂತೂರ ಗ್ರಾಮದ ಬೂದೀಶ್ವರ ಮಠದ ಪೀಠಾಧಿಪತಿ ಡಾ. ರಾಚೋಟೇಶ್ವರ ಸ್ವಾಮೀಜಿ ಅವರು ಸತತ 33 ದಿನಗಳ ಶಿವಯೋಗ ಸಮಾಧಿ ಅನುಷ್ಠಾನವನ್ನು ಪೂರ್ಣಗೊಳಿಸಿದ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಚಿಕಿತ್ಸೆ ಪಡೆಯುತ್ತಿರುವ ಗದಗ ಜಿಲ್ಲಾ ಆಸ್ಪತ್ರೆಯಿಂದಲೇ ವಿಡಿಯೊ ಸಂದೇಶ ಬಿಡುಗಡೆ ಮಾಡಿರುವ ಅವರು, ಭಕ್ತರು ಯಾವುದೇ ಆತಂಕಪಡಬೇಕಿಲ್ಲ ಎಂದು ಧೈರ್ಯ ತುಂಬಿದ್ದಾರೆ.
“ನಾನು ಆರೋಗ್ಯವಾಗಿದ್ದೇನೆ. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಶೀಘ್ರದಲ್ಲೇ ಸಂಪೂರ್ಣ ಗುಣಮುಖನಾಗುತ್ತೇನೆ. ಎಲ್ಲ ಭಕ್ತರು ನೆಮ್ಮದಿಯಿಂದ ಇರಬೇಕು,” ಎಂದು ಸ್ವಾಮೀಜಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.33 ದಿನಗಳ ಕಾಲ ಯೋಗಸಮಾಧಿಯಲ್ಲಿದ್ದ ಬಳಿಕ ಆಸ್ಪತ್ರೆಗೆ ದಾಖಲಿಸಲಾದ ಸ್ವಾಮೀಜಿಗೆ ಮುನ್ನೆಚ್ಚರಿಕಾ ಕ್ರಮವಾಗಿ ತೀವ್ರ ನಿಗಾ ಘಟಕ (ICU)ದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಮಾಹಿತಿ ನೀಡಿ, ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದ ಕಾರಣ ಸಲೈನ್ ನೀಡಲಾಗಿದೆ. ಇದನ್ನು ಹೊರತುಪಡಿಸಿ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜೂನ್ 3ರ ಮಧ್ಯರಾತ್ರಿಯಿಂದ ಮಹದಾಯಿ ಯೋಜನೆ ಜಾರಿ ಸೇರಿದಂತೆ ವಿಶ್ವಕಲ್ಯಾಣಕ್ಕಾಗಿ ಶಿವಯೋಗ ಸಮಾಧಿ ಅನುಷ್ಠಾನ ಆರಂಭಿಸಿದ್ದ ಸ್ವಾಮೀಜಿ, ಬರೋಬ್ಬರಿ 33 ದಿನಗಳು (775 ಗಂಟೆಗಳಿಗೂ ಹೆಚ್ಚು ಕಾಲ) ಅನ್ನ, ನೀರು, ಗಾಳಿ ಹಾಗೂ ಬೆಳಕಿನಿಂದ ದೂರ ಸಮಾಧಿ ಸ್ಥಿತಿಯಲ್ಲಿದ್ದರು ಎಂದು ಭಕ್ತರು ಹೇಳುತ್ತಿದ್ದಾರೆ.
ಸಮಾಧಿಯಿಂದ ಹೊರಬಂದ ಬಳಿಕ ಭಕ್ತರಿಗೆ ದರ್ಶನ ನೀಡಿದ ಸ್ವಾಮೀಜಿಯ ಆರೋಗ್ಯದ ಬಗ್ಗೆ ಆರಂಭದಲ್ಲಿ ಆತಂಕ ವ್ಯಕ್ತವಾಗಿತ್ತು. ಆದರೆ ಈಗ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಬೆಳವಣಿಗೆ ಭಕ್ತರಲ್ಲಿ ಸಂತಸ ಮೂಡಿಸಿದ್ದು, ಶೀಘ್ರದಲ್ಲೇ ಸ್ವಾಮೀಜಿ ಮಠಕ್ಕೆ ಮರಳಲಿದ್ದಾರೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

















