ತುಮಕೂರು: ತಮ್ಮದೇ ಪಕ್ಷದ ಶಾಸಕ ಕುಣಿಗಲ್ ರಂಗನಾಥ್ ಅವರಿಗೆ ಕೆ.ಎನ್.ರಾಜಣ್ಣ ಸವಾಲೊಂದನ್ನ ಹಾಕಿದ್ದಾರೆ. ನಿನ್ನೆಯ ವಿಧಾನಸಭೆಯಲ್ಲೇ ಶಾಸಕ ಡಾ.ಹೆಚ್.ಡಿ.ರಂಗನಾಥ್, ಆರೋಪವೊಂದನ್ನ ಮಾಡಿದ್ದರು. ತುಮಕೂರು ಡಿಸಿಸಿ ಬ್ಯಾಂಕ್ ನಿಂದ ಕುಣಿಗಲ್ ತಾಲೂಕಿಗೆ 1 ಕೋಟಿ ರೂಪಾಯಿಯನ್ನು ರೈತರಿಗೆ ಸಾಲವಾಗಿ ನೀಡಿಲ್ಲ. ಆದರೆ ಮಧುಗಿರಿ ತಾಲೂಕಿಗೆ 100 ಕೋಟಿ ರೂಪಾಯಿ ನೀಡಿದೆ. ತುಮಕೂರು ಡಿಸಿಸಿ ಬ್ಯಾಂಕ್ ನಿಂದ ರೈತರಿಗೆ ಸಾಲ ನೀಡಿಕೆಯಲ್ಲಿ ತಾರತಮ್ಯ ಆಗ್ತಾ ಇದೆ. ಇದನ್ನು ಸರಿಪಡಿಸಬೇಕು. ನಮ್ಮ ನೆರವಿಗೆ ಬರಬೇಕು ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು.
ಈ ಸಂಬಂಧ ಸದನದ ಹೊರಗೆ ಇಂದು ಕೆ.ಎನ್. ರಾಜಣ್ಣ ಉತ್ತರ ನೀಡಿದ್ದಾರೆ. ಸ್ಟುಡಿಯೋ ಮುಂದೆ ಚರ್ಚೆಗೆ ಬರಲಿ. ಅನುದಾನವನ್ನು ನಾನು ಕೊಡುವುದಾ..? ಅವರ ಕ್ಷೇತ್ರಕ್ಕೆ ಏನು ಬೇಕೋ ಅದನ್ನ ಸರ್ಕಾರದಿಂದ ಪಡೆಯಬೇಕು. ಸಾವಿರ ಕೋಟಿಯನ್ನು ನಾನು ತಡೆಹಿಡಿದಿಲ್ಲ. ಸಿಎಂ ಹಾಗೂ ಡಿಸಿಎಂ ಅವರ ದಯೆ, ಪ್ರೀತಿಯಿಂದ ನನ್ನ ಕ್ಷೇತ್ರಕ್ಕೆ ಸಾವಿರ ಕೋಟಿ ಅನುದಾನವನ್ನು ನೀಡಿದ್ದಾರೆ. ಸಹಕಾರ ಇಲಾಖೆ ಸಿಎಂ ಹತ್ತಿರ ಇದೆ. ಅನುದಾನ ಅಲ್ಲಿ ಪಡೆಯಬೇಕು.
132 ಕೋಟಿ ಎಫ್ಡಿ ಆಗಿತ್ತು. ಅದು ಮಂಜೂರಾತಿ ಆಗಬೇಕಿತ್ತು. ಅವರು ಎರಡನೇ ಸಲ ಶಾಸಕರಾಗಿದ್ದಾರೆ. ಅನುದಾನ ಎಷ್ಟು ಕೇಳಿದ್ದಾರೆ..? ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷನಿದ್ದೇನೆ. ರೈತರ ಸಂಖ್ಯೆಗೆ ಅನುಗುಣವಾಗಿ ಸಾಲ ಕೊಡುತ್ತೇನೆ. ಡಿಸಿಸಿ ಬ್ಯಾಂಕ್ ನಲ್ಲಿ ಕೊಡುವ ಸಾಲ ಸರ್ಕಾರದ್ದಲ್ಲ. ನಬಾರ್ಡ್ ನಿಂದ ಪಡೆದು ಕೊಡುವಂತಹ ಸಾಲ. ರೈತರ ಡೆಪಾಸಿಟ್ ನಿಂದ ಕೊಡುವ ಸಾಲ ಅದು ಎಂದು ಸ್ಪಷ್ಟನೆ ನೀಡಿದ್ದಾರೆ.

