ಬೆಳಗಾವಿ: ಕನ್ನಡ ಕಡ್ಡಾಯ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ನಿರ್ಧಾರವನ್ನ ತಿಳಿಸಿದ್ದಾರೆ. ರಾಜ್ಯದ ಎಲ್ಲಾ ಮಾದರಿ ಬೋರ್ಡ್ ಗಳು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು. ಇಲ್ಲದೆ ಹೋದರೆ ಅಂತಹ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇಂದು ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ಸಂದರ್ಭದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್, ರಾಜ್ಯದಲ್ಲಿ ICSE, CBSE, IB, IGCS ಸೇರಿದಂತೆ ಅಂತರಾಷ್ಟ್ರೀಯ ಶಾಲೆಗಳಲ್ಲಿ ಕಡ್ಡಾಯ ಭಾಷೆ ಕಲಿಕೆ ನಿಯಮ ಜಾರಿ ಮಾಡಿಲ್ಲ. ನಿಯಮಗಳು ಅನೇಕ ಶಾಲೆಗಳು ಜಾರಿ ಮಾಡಿಲ್ಲ. ಸರ್ಕಾರದ ನಿಯಮವನ್ನು ಖಾಸಗಿ ಶಾಲೆಗಳು ಉಲ್ಲಂಘನೆ ಮಾಡಲಾಗಿದೆ. ಶಿಕ್ಷಣ ಇಲಾಖೆ ಈ ಸಂಬಂಧ ಕೇವಲ ನೋಟೀಸ್ ಕೊಡಲಾಗಿದೆ. ಇಂತಹ ಶಾಲೆಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅಂತ ಆಗ್ರಹ ಕೂಡ ಮಾಡಿದರು.
ರವಿಕುಮಾರ್ ಅವರ ಪ್ರಶ್ನೆಗೆ ಮಧು ಬಂಗಾರಪ್ಪ ಉತ್ತರ ನೀಡಿದ್ದಾರೆ. ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ. ಕನ್ನಡ ಭಾಷೆ ಕಡ್ಡಾಯವಾಗಿ ಕಲಿಸಬೇಕು. ಕನ್ನಡವನ್ನು ಕಲಿಸದೆ ಹೋದರೆ ಅಂತಹ ಶಾಲೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಸೋಫಿಯಾ ಶಾಲೆ ಮೇಲೆ ಆರೋಪ ಬಂದಾಗ ಅಲ್ಲಿ ತನಿಖೆ ನಡೆಸಿದ್ದೇವೆ. ನಮ್ಮ ಗಮನಕ್ಕೆ ಈ ರೀತಿಯ ಲೋಪ ಇರುವುದು ಕಂಡು ಬಂದರೆ ತನಿಖೆ ನಡೆಸುತ್ತೇವೆ. ಯಾವುದೇ ಶಾಲೆ ಮೇಲೆ ದೂರು ಬಂದರು ಸಹ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಮಾತನ್ನ ಮಧು ಬಂಗಾರಪ್ಪ ತಿಳಿಸಿದ್ದಾರೆ.






