ಚಿತ್ರದುರ್ಗ: ದರ್ಶನ್ ಅಂಡ್ ಗ್ಯಾಂಗ್ ನಿಂದ ಕೊಲೆಯಾಗಿದ್ದ ರೇಣುಕಾಸ್ವಾಮಿ ಸಮಾಧಿ ಈಗ ಧ್ವಂಸವಾಗಿದೆ. ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಸಮಾಧಿ ಮಾಡಲಾಗಿತ್ತು. ಇದೀಗ ಆ ಸಮಾಧಿಯನ್ನೇ ಧ್ವಂಸ ಮಾಡಿದ್ದಾರೆ. ಚುತ್ರದುರ್ಗದ ರುದ್ರಭೂಮಿಯಲ್ಲಿ ಈ ಸಮಾಧಿ ಇತ್ತು. ಚಿತ್ರದುರ್ಗ ನಗರ ಠಾಣೆಯಲ್ಲಿ ಪ್ರಕರಣವನ್ನ ದಾಖಲು ಮಾಡಲಾಗಿದೆ.
ರೇಣುಕಾಸ್ವಾಮಿ ಸಮಾಧಿ ಮೇಲಿದ್ದ ನಾಮಫಲಕವನ್ನು ಧ್ವಂಸ ಮಾಡಲಾಗಿದೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ಇದು ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಈ ಕೃತ್ಯವನ್ನ ಎಸಗಿದವರು ಯಾರೆಂದು ವಿಚಾರಣೆ ಕೂಡ ನಡೆಸುತ್ತಿದ್ದಾರೆ.
ರೇಣುಕಾಸ್ವಾಮಿ ಕೊಲೆಯಾಗಿ ಒಂದು ವರ್ಷಕ್ಕಿಂತ ಜಾಸ್ತಿಯಾಗಿದೆ. ಕೆಲವು ತಿಂಗಳುಗಳ ಹಿಂದಷ್ಟೇ ವರ್ಷದ ತಿಥಿಯನ್ನು ಮಾಡಿದ್ದರು ಕುಟುಂಬಸ್ಥರು. ವರ್ಷದ ತಿಥಿಗೆ ಸಮಾಧಿ ಬಳಿ ಹೋಗಿ ಪೂಜೆ ಸಲ್ಲಿಸಿ ಬಂದಿದ್ದರು. ಈಗ ಸಮಾಧಿಯ ನಾಮಫಲಕವನ್ನ ಯಾರೋ ಒಡೆದು ಹಾಕಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ, ಅಶ್ಲೀಲ ಫೋಟೋಗಳನ್ನು ಕಳುಹಿಸುತ್ತಿದ್ದ ಎಂಬ ಕಾರಣಕ್ಕೆ ದರ್ಶನ್ ಮತ್ತು ಸ್ನೇಹಿತರು ಕಿಡ್ನ್ಯಾಪ್ ಮಾಡಿದ್ದರು. ಎಚ್ಚರಿಕೆ ಕೊಡುವ ಭರದಲ್ಲಿ ಕೊಲೆಯೂ ನಡೆದು ಹೋಗಿದೆ. ಇದೇ ಕೇಸಲ್ಲಿ ಸದ್ಯ ದರ್ಶನ್ ಅಂಡ್ ಗ್ಯಾಂಗ್ ಜೈಲು ವಾಸದಲ್ಲೂ ಇದ್ದಾರೆ. ಮೊದಲು ಜೈಲು ಸೇರಿದಾಗ ದರ್ಶನ್ ಅಂಡ್ ಗ್ಯಾಂಗ್ ಗೆ ಹೈಕೋರ್ಟ್ ಜಾಮೀನು ನೀಡಿತ್ತು. ಈಗ ಜಾಮೀನು ರದ್ದಾದ ಮೇಲೆ ಎರಡನೇ ಬಾರಿಗೆ ಜೈಲುವಾಸಕ್ಕೆ ಹೋಗಿದ್ದಾರೆ. ದರ್ಶನ್ ನಟನೆಯ ಡೆವಿಲ್ ಕೂಡ ಇದೇ ಸಮಯದಲ್ಲಿ ರಿಲೀಸ್ ರೆಡಿಯಾಗಿದೆ.

