ಬೆಂಗಳೂರು: ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಜಂಟಿ ಸುದ್ದಿಗೋಷ್ಟಿ ನಡೆಸಿ, ಯಾವ ನಿರ್ಧಾರಕ್ಕೆ ಬಂದಿದ್ದೇವೆ ಎಂಬುದನ್ನ ತಿಳಿಸಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್ ಮಾತನಾಡುತ್ತಾ, ನಮ್ಮ ನಡುವೆ ಯಾವುದೇ ಗುಂಪುಗಾರಿಕೆ ಇಲ್ಲ, ನಮ್ಮದು ಒಂದೇ ಗುಂಪು ಅದು ಕಾಂಗ್ರೆಸ್ ಗುಂಪು ಎಂಬ ಮಾತನ್ನ ಹೇಳಿದ್ದಾರೆ. ಈ ಮೂಲಕ ನಮ್ಮ ನಡುವೆ ಯಾವುದೇ ಗೊಂದಲವಿಲ್ಲ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.
ಕಷ್ಟ ಕಾಲದಲ್ಲಿಯೇ ಗುಂಪು ಮಾಡುವುದಕ್ಕೆ ಅವಕಾಶ ಕೊಟ್ಟಿಲ್ಲ. ಈಗಲೂ ಕೊಡುವುದಿಲ್ಲ. ನಾನು ಮುಖ್ಯಮಂತ್ರಿಗಳು ಒಗ್ಗಟ್ಟಿನಿಂದ ಇದ್ದೇವೆ. ಒಟ್ಟಿಗೆ ಸೇರಿ ಕೆಲಸ ಮಾಡುತ್ತೇವೆ. ಪಕ್ಷವನ್ನು ಇನ್ನಷ್ಟು ಶಕ್ತಿಶಾಲಿಯನ್ನಾಗಿ ಮಾಡಿ, 2028ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಎಲ್ಲರ ಸಹಕಾರದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಜನರಿಗೆ ಕೊಟ್ಟ ಮಾತಿನಂತೆ ಸೇವೆ ಮಾಡ್ತಾ ಇದ್ದೇವೆ.
ಜನರು ನಮ್ಮ ಮೇಲೆ ವಿಶ್ವಾಸವಿಟ್ಟು ಸಹಕಾರ ಕೊಟ್ಟಿದ್ದಾರೆ. ಅವರ ಆಶಯಗಳನ್ನು ಈಡೇರಿಸುತ್ತೇವೆ. ಹೈಕಮಾಂಡ್ ತೀರ್ಮಾನ ಮಾಡಿದಂತೆ ನಾವು ಕೆಲಸ ಮಾಡಿಕೊಂಡು ಹೋಗ್ತಾ ಇದ್ದೇವೆ. ಚಳಿಗಾಲದ ಅಧಿವೇಶನವನ್ನು ಹೇಗೆ ಎದುರಿಸಬೇಕು ಅಂತ ಚರ್ಚೆ ಆಗಿದೆ. ಹೈಕಮಾಂಡ್ ಹೇಳಿದಂತೆ ಕೇಳ್ತೀವಿ. ಈ ತೀರ್ಮಾನ ಅಚಲ. ಈ ಹಿಂದೆ ಸಿದ್ದರಾಮಯ್ಯ ಸಂಪುಟಕ್ಕೆ ಸೇರಿಸದೇ ಇದ್ದಾಗಲು ವಿರೋಧ ಮಾಡಿಲಿಲ್ಲ. ಇಬ್ಬರು ಒಟ್ಟಾಗಿ ಹೋಗ್ತೀವಿ. 2028 ಮತ್ತೆ ಸರ್ಕಾರ ತರಲು ಕೆಲಸ ಮಾಡ್ತೀವಿ. ನಾನು ಸಿಎಂ ಒಟ್ಟಾಗಿ ಕೆಲಸ ಮಾಡ್ತೀವಿ. ಕರ್ನಾಟಕದ ಜನತೆಗೆ ಕೊಟ್ಟ ಮಾತು ನಾವು ಈಡೇರಿಸುತ್ತೇವೆ. ಉತ್ತಮ ಆಡಳಿತ ಕೊಡೋದನ್ನ ಮುಂದುವರಿಸುತ್ತೇವೆ. ವಿಪಕ್ಷಗಳು ಏನೇ ಗೊಂದಲ ಮಾಡಿದ್ರೂ ಅದಕ್ಕೆ ಉತ್ತರ ಕೊಡ್ತೀನಿ ಎಂದು ಸಿಎಂ ಮಾತಿಗೆ ಸಹಮತ ವ್ಯಕ್ತಪಡಿಸಿದರು.




