ಸ್ಯಾಂಡಲ್ ವುಡ್ ಯುವ ನಟ ಸಂತೋಷ್ ಬಾಲರಾಜ್ ನಿಧನರಾಗಿದ್ದಾರೆ. ಹಿರಿಯ ನಿರ್ಮಾಪಕ ಆನೇಕಲ್ ಬಾಲ ರಾಜ್ ಅವರ ಒಬ್ಬನೇ ಪುತ್ರ ಸಂತೋಷ ಬಾಲರಾಜ್. ಜಾಂಡೀಸ್ ಕಾಯಿಲೆ ಸಂತೋಷ್ ಅವರನ್ನ ಬಲಿ ಪಡೆದುಕೊಂಡಿದೆ. ಮೈಗೆಲ್ಲ ಹರಡಿದ್ದ ಕಾಯಿಲೆ ಕಡೆಗೂ ಬದುಕುವುದಕ್ಕೆ ಬಿಡದಂತೆ ತನ್ನ ಜೊತೆಗೆ ಕರೆದುಕೊಂಡು ಹೋಗಿದೆ.
ಚಿತ್ರರಂಗದಲ್ಲಿ ಬೆಳೆಯಬೇಕೆಂಬ ಮಹಾದಾಸೆಯೊಂದಿಗೆ ಇದ್ದ ನಟ ಇಂದು ಕೊನೆಯುಸಿರೆಳೆದಿದ್ದಾರೆ. ಸಂತೋಷ್ ಬಾಲರಾಜ್ ಗಿನ್ನು ಕೇವಲ 34 ವರ್ಷ ವಯಸ್ಸು. ಈ ಕಿರಿ ವಯಸ್ಸಿನಲ್ಲಿಯೇ ಬಂದಂತ ಜಾಂಡೀಸ್ ಸಂತೋಷ್ ಪ್ರಾಣವನ್ನೇ ತೆಗೆದುಕೊಂಡು ಹೋಗಿದೆ. ಸಿನಿಮಾಗಳಲ್ಲಿ ಯಶಸ್ಸು ಕಾಣಬೇಕು ಎಂದುಕೊಂಡಿದ್ದ ಸಂತೋಷ್ ಅವರು ಚಿಕ್ಕ ವಯಸ್ಸಿಗೆ ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಕಿರಿಯ ವಯಸ್ಸಿಗೆ ಜಾಂಡೀಸ್ ಕಾಯಿಲೆಯಿಂದ ಬಳಲಿ ಐಸಿಯುನಲ್ಲಿದ್ದರು. ಕೊನೆಗೂ ಸಂತೋಷ್ ಬಾಲರಾಜ್ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕುಮಾರಸ್ವಾಮಿ ಲೇಔಟ್ನ ಸಾಗರ್ ಅಫೋಲೋ ಆಸ್ಪತ್ರೆಗೆ ದಾಖಲಾಗಿದ್ದರು.


ಸಂತೋಷ್ ಬಾಲರಾಜ್ ಅವರು ಅಮ್ಮನ ಜೊತೆಗೆ ವಾಸವಾಗಿದ್ದರು. ಕಳೆದ ಕೆಲವು ವರ್ಷಗಳ ಹಿಂದಷ್ಟೇ ಸಂತೋಷ್ ತನ್ನ ತಂದೆಯನ್ನ ಕಳೆದುಕೊಂಡಿದ್ದರು. 2022ರಲ್ಲಿ ರಸ್ತೆ ಅಪಘಾತದಲ್ಲಿ ಆನೇಕಲ್ ಬಾಲರಾಜ್ ಅವರು ನಿಧನರಾಗಿದ್ದರು. ಅಂದಿನಿಂದ ತಮ್ಮ ತಂದೆಯ ಆಸೆಯನ್ನು ಈಡೇರಿಸಬೇಕು, ತಮ್ಮ ತಂದೆಯ ಹಾದಿಯಲ್ಲಿಯೇ ನಡೆಯಬೇಕು ಎಂಬ ಕನಸ್ಸನ್ನ ಕಂಡಿದ್ದರು. ಬಾಲರಾಜ್ ಅವರು ನಿರ್ಮಾಪಕರಾಗಿದ್ದರು. ಅವರಂತೆ ಕನ್ನಡ ಇಂಡಸ್ಟ್ರಿಯಲ್ಲಿ ನಾನು ನಿರ್ಮಾಪಕರಾಗಬೇಕೆಂಬ ಕನಸು ಕಂಡಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಇಹಲೋಕ ತ್ಯಜಿಸಿ ಹೊರಟಿದ್ದಾರೆ. ಆ ತಾಯಿಗೆ ಗಂಡನನ್ನು ಕಳೆದುಕೊಂಡು ಈಗಷ್ಟೇ ಸಹಜ ಸ್ಥಿತಿಗೆ ಮರಳುತ್ತಿರುವಾಗಲೇ ಮಗನನ್ನು ಕಿತ್ತುಕೊಂಡು ಚೇತರಿಸಿಕೊಳ್ಳುವುದಕ್ಕೆ ಕಷ್ಟವಾಗುವಂಥ ಸನ್ನಿವೇಶವನ್ನ ಆ ವಿಧಿ ನಿರ್ಮಾಣ ಮಾಡಿ ಬಿಟ್ಟಿದೆ. ಸಂತೋಷ್ ಇನ್ನು ಮದುವೆಯಾಗಿರಲಿಲ್ಲ. ತಾಯಿಯನ್ನು ನೋಡಿಕೊಂಡು, ಸಿನಿಮಾಗಳ ಕಡೆಗೆ ಗಮನ ಹರಿಸಿದ್ದರು. ಎಲ್ಲವೂ ಈಡೇರುವಷ್ಟು ಸಮಯಕ್ಕೆ ಸಂತೋಷ್ ನನ್ನೇ ವಿಧಿ ಕರೆದುಕೊಂಡು ಬಿಟ್ಟಿದೆ.
ಸಂತೋಷ್ ಕೂಡ ಅದ್ಭುತ ನಟನಾಗಿ ಗುರುತಿಸಿಕೊಂಡಿದ್ದರು. ʼಕರಿಯಾ-2ʼ, ʼಕೆಂಪʼ, ʼಗಣಪʼ, ʼಬರ್ಕ್ಲಿʼ, ʼಸತ್ಯʼ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದರು. ಅಪ್ಪ ಅನೇಕಲ್ ಬಾಲರಾಜ್ ದರ್ಶನ್ ಅವರಿಗೆ ʼಕರಿಯʼ ಸಿನಿಮಾ ಮಾಡಿದ್ದರು.

















