ಸುದ್ದಿಒನ್,ಗದಗ,ಮೇ.11: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ದಾರುಣ ಘಟನೆಯೊಂದು ವರದಿಯಾಗಿದೆ. ಕುಟುಂಬ ಯೋಜನೆಯಡಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 28 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಮಹಿಳೆಯ ಪತಿ ಗಂಭೀರ ಆರೋಪ ಮಾಡಿದ್ದಾರೆ.
ಶಿಗ್ಲಿ ಗ್ರಾಮದ ನಿವಾಸಿಯಾದ ರೇಣುಕಾ (28) ಮೃತಪಟ್ಟ ದುರ್ದೈವಿ. ಇಬ್ಬರು ಮಕ್ಕಳ ತಾಯಿಯಾಗಿದ್ದ ಇವರು, ಮುಂದಿನ ಜೀವನದ ದೃಷ್ಟಿಯಿಂದ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಲಕ್ಷ್ಮೇಶ್ವರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಶಸ್ತ್ರಚಿಕಿತ್ಸೆ ಮುಗಿದ ಬೆನ್ನಲ್ಲೇ ರೇಣುಕಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಹದಗೆಟ್ಟಿತ್ತು.

ಮೃತ ರೇಣುಕಾ ಅವರ ಪತಿ ಮಂಜುನಾಥ್ ವೈದ್ಯರ ವಿರುದ್ಧ ಗಂಭೀರವಾಗಿ ಕಿಡಿಕಾರಿದ್ದಾರೆ. “ವೈದ್ಯರು ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭದಲ್ಲಿ ಅಜಾಗರೂಕತೆಯಿಂದ ರೇಣುಕಾ ಅವರ ಕರುಳನ್ನು ಕಟ್ ಮಾಡಿದ್ದಾರೆ. ಇದರಿಂದಾಗಿ ದೇಹದಲ್ಲಿ ತೀವ್ರ ರಕ್ತಸ್ರಾವ ಹಾಗೂ ಸೋಂಕು (Infection) ಹರಡಿದೆ. ಇದೇ ಸಾವಿಗೆ ನೇರ ಕಾರಣ,” ಎಂದು ಅವರು ಕಣ್ಣೀರು ಹಾಕುತ್ತಾ ದೂರಿದ್ದಾರೆ.
ತಪ್ಪಿತಸ್ಥ ವೈದ್ಯರ ವಿರುದ್ಧ ಕೂಡಲೇ ತನಿಖೆ ನಡೆಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತರ ಸಂಬಂಧಿಕರು ಆಗ್ರಹಿಸಿದ್ದಾರೆ. ಇಬ್ಬರು ಸಣ್ಣ ಮಕ್ಕಳನ್ನು ಬಿಟ್ಟು ಹೋಗಿರುವ ರೇಣುಕಾ ಸಾವಿಗೆ ಯಾರು ಹೊಣೆ? ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಸುರಕ್ಷತೆ ಇಲ್ಲವೇ? ಎಂದು ಪ್ರಶ್ನಿಸುತ್ತಿದ್ದಾರೆ.


















